ರಾಜ್ಯ

ಜೈನ ಮುನಿ ಹತ್ಯೆ ಪ್ರಕರಣ: ತನಿಖೆ ಐಜಿಪಿಗೆ ವಹಿಸಿ, ಸಂಚು ಬಯಲಿಗೆಳೆಯಿರಿ- ಸರ್ಕಾರಕ್ಕೆ ಅಲ್ಪಸಂಖ್ಯಾತ ಸಮಿತಿ ಆಗ್ರಹ

Manjula VN

ಬೆಂಗಳೂರು: ಬೆಳಗಾವಿ ಜಿಲ್ಲೆಯಲ್ಲಿ ನಡೆದ ಜೈನ ಮುನಿ ಕಾಮಕುಮಾರ್ ನಂದಿ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸ್ ಮಹಾ ನಿರೀಕ್ಷಕರಿಗೆ ವಹಿಸಿ ಸಂಚು ಬಯಲಿಗೆಳೆಯುವಂತೆ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ (ಎನ್‌ಸಿಎಂ) ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.

ಎನ್‌ಸಿಎಂ ಅಧ್ಯಕ್ಷ ಇಕ್ಬಾಲ್ ಸಿಂಗ್ ಲಾಲ್ಪುರ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಮುನಿಗಳನ್ನು ಹತ್ಯೆ ಮಾಡಿದ ಅಪರಾಧಿಗಳನ್ನು ಬಂಧಿಸಿ. ಪ್ರತಿ ಹದಿನೈದು ದಿನಗಳಿಗೊಮ್ಮೆ ತನಿಖೆಯ ಪ್ರಗತಿಯ ಬಗ್ಗೆ ಎನ್‌ಸಿಎಂಗೆ ಮಾಹಿತಿ ನೀಡುವಂತೆ ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

"ಜುಲೈ 8, 2023 ರಂದು, ಸನ್ಯಾಸಿಯನ್ನು ವಿದ್ಯುತ್ ಶಾಕ್ ನೀಡಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ನಂತರ ಅವರ ಮೃತದೇಹವನ್ನು ವಿರೂಪಗೊಳಿಸಿ ಕಂಕಣವಾಡಿಯಲ್ಲಿನ ಬೋರ್‌ವೆಲ್‌ಗೆ ಎಸೆಯಲಾಗಿದೆ ಎಂದು ವರದಿಯಾಗಿದೆ. ಜೈನ ಮುನಿಗಳ ಇಂತಹ ಕ್ರೂರ ಹತ್ಯೆ ಜೈನ ಸಮುದಾಯದಲ್ಲಿ ಭಯ ಮತ್ತು ಅಭದ್ರತೆಯ ವಾತಾವರಣವನ್ನು ಸೃಷ್ಟಿಸಿದೆ ಎಂದು ಪತ್ರದಲ್ಲಿ ಹೇಳಿಕೊಂಡಿದ್ದಾರೆ.

ಘಟನೆ ಬಳಿಕ ದೇಶಾದ್ಯಂತ ಜೈನ ಸಮುದಾಯಗಳು ಎನ್‌ಸಿಎಂ ಅನ್ನು ಸಂಪರ್ಕಿಸಿದ್ದು ಕಳವಳ ವ್ಯಕ್ತಪಡಿಸುತ್ತಿವೆ.  ಅಲ್ಲದೆ, ಸಮಗ್ರ ತನಿಖೆಗೆ ಆಗ್ರಹಿಸುತ್ತಿವೆ. ಹತ್ಯೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ವ್ಯವಹಾಸ ಸಂಬಂಧ ಹತ್ಯೆ ನಡೆದಿದೆ ಎಂದು ವರದಿಗಳು ತಿಳಿಸಿವೆ. ಹಣ, ಬೆಲೆಬಾಳುವ ವಸ್ತುಗಳಿಗಾಗಿ ನಡೆದ ಕೊಲೆ ಎಂದು ಮೇಲ್ನೋಟಕ್ಕೆ ಹೇಳಲಾಗುತ್ತಿದೆ. ಆದರೆ, ಜೈನ ಮುನಿಗಳು ತಮ್ಮ ಆಶ್ರಮಗಳಲ್ಲಿ ಯಾವುದೇ ಬೆಲೆಬಾಳುವ ವಸ್ತುಗಳನ್ನು ಅಥವಾ ಅಂತಹ ವಸ್ತುಗಳನ್ನು ಇಡುವುದಿಲ್ಲ ಎಂಬುದು ಸತ್ಯ. ಹಾಗಾಗಿ ಹಣದ ವಿಚಾರಕ್ಕೆ ನಡೆದ ಕೊಲೆ ಎಂದು ಹೇಳುವುದು ಕಷ್ಟಸಾಧ್ಯ. ಪಿತೂರಿಯಿಂದ ನಡೆಸಲಾಗಿರುವ ಹತ್ಯೆಯಾಗಿದೆ ಎಂದು ಹೇಳಿಕೊಂಡಿದ್ದಾರೆ.

SCROLL FOR NEXT