ಬೆಂಗಳೂರು: ರಾಜ್ಯದಾದ್ಯಂತ ವ್ಹೀಲಿಂಗ್ ಪ್ರಕರಣಗಳ ಮೇಲೆ ಶೂನ್ಯ ಸಹಿಷ್ಣುತೆ ನೀತಿಯಡಿ ಪೊಲೀಸರು ಕಣ್ಣಿಡಲಿದ್ದು, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದ್ದಾರೆ ಎಂದು ಎಡಿಜಿಪಿ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ಸೋಮವಾರ ಹೇಳಿದ್ದಾರೆ.
ರಾಜ್ಯದಾದ್ಯಂತ ವಿಶೇಷವಾಗಿ ಮೈಸೂರು ಹೊರ ವರ್ತುಲ ರಸ್ತೆ ಮತ್ತು ಬೆಂಗಳೂರಿನ ಹೊರ ವರ್ತುಲ ರಸ್ತೆ, ನೈಸ್ ರಸ್ತೆ, ಏರ್ಪೋರ್ಟ್ ರಸ್ತೆ, ಹೊಸಕೋಟೆ ರಸ್ತೆ, ಬೆಂಗಳೂರು-ಪುಣೆ ರಾಷ್ಟ್ರೀಯ ಹೆದ್ದಾರಿ ಮತ್ತು ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಗಳಲ್ಲಿ ಅಪಾಯಕಾರಿ ರೈಡಿಂಗ್ ಮತ್ತು ವ್ಹೀಲಿಂಗ್ ಸ್ಟಂಟ್ಗಳು ನಡೆಯುತ್ತಿದೆ ಎಂದು ಹೇಳಿದರು.
ವ್ಹೀಲಿಂಗ್ ಮಾಡುವಾಗ ಸಿಕ್ಕಿಬಿದ್ದವರ ವಿರುದ್ಧ ಐಪಿಸಿ ಸೆಕ್ಷನ್ 279 ಮತ್ತು ಮೋಟಾರು ವಾಹನ ಕಾಯ್ದೆಯ (IMV) ಸೆಕ್ಷನ್ 184 ಮತ್ತು 189ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು. ಇದರೊಂದಿಗೆ ಐಎಂವಿ ಸೆಕ್ಷನ್ 19D ಅಡಿಯಲ್ಲಿ ಅಂತವರ ಚಾಲನಾ ಪರವಾನಗಿಗಳನ್ನು ಅಮಾನತುಗೊಳಿಸಲಾಗುತ್ತದೆ ಎಂದರು.
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ ವ್ಹೀಲಿಂಗ್ ಸ್ಟಂಟ್ ವಿಡಿಯೋಗಳನ್ನು ಗಮನಿಸಿ, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ರಾಜ್ಯದ ಎಲ್ಲಾ ವಿಭಾಗೀಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.