ರಾಜ್ಯ

ಬೆಂಗಳೂರು ಅಭಿವೃದ್ಧಿ ಕುರಿತು ಚರ್ಚೆ, ಅಭಿಪ್ರಾಯ ಸಂಗ್ರಹಕ್ಕೆ ಸರ್ವಪಕ್ಷ ಸಭೆ ಕರೆದ ಡಿಸಿಎಂ ಶಿವಕುಮಾರ್

Sumana Upadhyaya

ಬೆಂಗಳೂರು: ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಬರುವ ಸೋಮವಾರ ಸರ್ವಪಕ್ಷ ಸಭೆ ಕರೆದಿದ್ದಾರೆ.

ಬೆಂಗಳೂರು ನಗರದ ಮತ್ತಷ್ಟು ಅಭಿವೃದ್ಧಿಗೆ ವಿಸ್ತಾರವಾದ ಕ್ರಮ ಕೈಗೊಳ್ಳುವ ಕುರಿತು ಚರ್ಚಿಸಲು ಅವರು ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ. 

ಜೂನ್ ತಿಂಗಳು ಆರಂಭವಾಗಿದ್ದು ಮುಂಗಾರು ಮಳೆ ರಾಜ್ಯವನ್ನು ಪ್ರವೇಶಿಸಲಿದೆ. ನಗರದ ಸಂಚಾರ ದಟ್ಟಣೆ ಸಮಸ್ಯೆ ಜೊತೆಗೆ ಹೊಂಡ ಗುಂಡಿಗಳು, ರಸ್ತೆ ಮತ್ತು ರಸ್ತೆ ಪಕ್ಕ ನೀರು ನಿಲ್ಲುವುದು, ಪ್ರವಾಹ, ಚರಂಡಿಯಲ್ಲಿ ನೀರು ಸರಿಯಾಗಿ ಸರಾಗವಾಗಿ ಹೋಗದಿರುವುದು, ಅಂಡರ್ ಪಾಸ್ ನಲ್ಲಿ ನೀರು ನಿಲ್ಲುವುದು ಇತ್ಯಾದಿ ಸಮಸ್ಯೆಗಳು ಬೆಂಗಳೂರು ನಗರದಲ್ಲಿ ಮಳೆಗಾಲದಲ್ಲಿ ಸಾಮಾನ್ಯ. 

ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಮೂಲಭೂತ ಸೌಕರ್ಯಗಳ ದುರಸ್ತಿಗಳ ಬಗ್ಗೆ ಚರ್ಚಿಸಲು ಎಲ್ಲಾ ಪಕ್ಷಗಳ ನಾಯಕರಿಂದ ಅಭಿಪ್ರಾಯ ಸಂಗ್ರಹಿಸಲು ಸಭೆ ಕರೆದಿದ್ದಾರೆ. 

ಬೆಂಗಳೂರು ಕಾರ್ಯಪಡೆ: ನಗರದ ಸಮಸ್ಯೆಗಳು, ಮೂಲಭೂತ ಸೌಕರ್ಯಗಳ ಕುರಿತು ಹೆಚ್ಚಿಸಬೇಕಾದ ಕ್ರಮಗಳ ಕುರಿತು ಚರ್ಚಿಸಲು ಸರ್ವಪಕ್ಷ ಸಭೆಯನ್ನು ಡಿ ಕೆ ಶಿವಕುಮಾರ್ ಕರೆದಿದ್ದು, ಅದರಲ್ಲಿ ಎಲ್ಲಾ ಪಕ್ಷಗಳ ಶಾಸಕರು ನೀಡುವ ಸಲಹೆ, ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಕಾರ್ಯರೂಪಕ್ಕೆ ತರಲು ಬೆಂಗಳೂರು ಕಾರ್ಯಪಡೆ ರಚಿಸುವ ಸಾಧ್ಯತೆಯಿದೆ. 

SCROLL FOR NEXT