ಬೆಂಗಳೂರು: ರಾಜ್ಯದಲ್ಲಿನ ವಕೀಲರ ರಕ್ಷಣೆಗೆ ಕಾನೂನು ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿಂದು ರಾಜ್ಯ ವಕೀಲರ ಮಂಡಳಿ ಅಧ್ಯಕ್ಷ ಎಚ್.ಎಲ್.ವಿಶಾಲ ರಘು ಹಾಗೂ ಸದಸ್ಯರೊಂದಿಗಿನ ಮಾತುಕತೆ ವೇಳೆ ಮಾತನಾಡಿದ ಮುಖ್ಯಮಂತ್ರಿ, ರಾಜಸ್ಥಾನದಲ್ಲಿ ವಕೀಲರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದ್ದು, ರಾಜ್ಯದಲ್ಲಿ ಈ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಕಾಯ್ದೆಯ ಪ್ರತಿಯನ್ನು ತರಿಸಿಕೊಂಡು ಅಧ್ಯಯನ ಮಾಡಲಾಗುವುದು ಎಂದು ತಿಳಿಸಿದರು.
ವಕೀಲರ ಸಂಘಕ್ಕೆ ಶಾಶ್ವತವಾದ ಸ್ಥಳವಿಲ್ಲವಾಗಿದ್ದು, ಪ್ರಸ್ತುತ ಪ್ರೆಸ್ ಕ್ಲಬ್ ಬಳಿ ಇರುವ ಸ್ಥಳದಲ್ಲಿಯೇ ಶಾಶ್ವತವಾಗಿ ಸ್ಥಳಾವಕಾಶ ಮಾಡಿಕೊಡುವಂತೆ ವಕೀಲರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಈ ಮಧ್ಯೆ ಪುಸ್ತಕ ಪ್ರಕಾಶಕರ ನಿಯೋಗವು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ, ಕನ್ನಡದ ಪ್ರಕಾಶಕರು ಹಾಗೂ ಬರಹಗಾರರ ಸ್ಥಿತಿ ಕಷ್ಟಕರವಾಗಿದ್ದು, ಜ್ಞಾನಭಾಗ್ಯವನ್ನು ನೀಡಬೇಕು ಕೋರಿತು. ಬಿಬಿಎಂಪಿ ವತಿಯಿಂದ 600 ಕೋಟಿ ರೂ.ಗಳು ಸೆಸ್ ಬಾಕಿ ಇದೆ. ಗ್ರಂಥಾಲಯಗಳ ಶೇ.6 ರಷ್ಟು ಸೆಸ್ ಮೊತ್ತವನ್ನು ಸಂಗ್ರಹ ಮಾಡುತ್ತಿದ್ದು, ಅದನ್ನು ಗ್ರಂಥಾಲಯ ಲೆಕ್ಕಶೀರ್ಷಿಕೆಗೆ ವರ್ಗಾವಣೆ ಮಾಡಬೇಕು ಎಂದು ಮನವಿ ಮಾಡಿದರು.
ಸಪ್ನಾ ಬುಕ್ ಹೌಸ್, ನಿರಂತರ ಪ್ರಕಾಶನ, ಗೀತಾಂಜಲಿ ಪ್ರಕಾಶನ ಸೇರಿದಂತೆ ಹಲವು ಪ್ರಕಾಶನ ಸಂಸ್ಥೆಗಳ ಮುಖ್ಯಸ್ಥರು ನಿಯೋಗದಲ್ಲಿದ್ದರು.