ರಾಜ್ಯ

ವಿಜಯನಗರ: ನೆರೆಮನೆಯಾತನಿಂದ ಅತ್ಯಾಚಾರ, ವಿಕಲಚೇತನ ಮಹಿಳೆ ಆತ್ಮಹತ್ಯೆಗೆ ಶರಣು

Manjula VN

ಹೊಸಪೇಟೆ: ನೆರೆಮನೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿದ ಹಿನ್ನೆಲೆಯಲ್ಲಿ ವಿಕಲಚೇತನ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವ್ಯಾಸನಪುರತಾಂಡ ಗ್ರಾಮದಲ್ಲಿ ನಡೆದಿದೆ. 

ಮೃತ ಮಹಿಳೆಯನ್ನು ಲೋಕಿ ಬಾಯಿ (55) ಎಂದು ಗುರ್ತಿಸಲಾಗಿದೆ. ಅರೋಪಿಯನ್ನು ಲೋಕೇಶ್ ನಾಯಕ್ (33) ಎಂದು ಗುರ್ತಿಸಲಾಗಿದೆ.  ಮೇ.30ರಂದು ಅತ್ಯಾಚಾರ ನಡೆದಿದ್ದು, ನೊಂದ ಮಹಿಳೆ ಜೂನ್.2 ರಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಲೋಕಿ ಬಾಯಿ ಹುಟ್ಟಿನಿಂದಲೇ ದೃಷ್ಟಿಹೀನಳಾಗಿದ್ದು, ಮೇ 30 ರಂದು ಮಹಿಳೆಯ ಸಂಬಂಧಿಕರೆಲ್ಲರೂ ಪಕ್ಕದ ಊರಿನಲ್ಲಿ ನಡೆದ ಮದುವೆಯಲ್ಲಿ ಪಾಲ್ಗೊಳ್ಳಲು ಹೋದಾಗ ಘಟನೆ ನಡೆದಿತ್ತು. ಮದುವೆ ಮುಗಿಸಿ ಮನೆಗೆ ಬಂದಾಗ ವಿಚಾರ ಎಲ್ಲರಿಗೂ ತಿಳಿದುಬಂದಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಿಂದ ಮಹಿಳೆ ಆಘಾತಗೊಂಡು, ಖಿನ್ನತೆಗೊಳಗಾಗಿದ್ದರು.

ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಕಂಡುಕೊಂಡಿದ್ದ ಲೋಕೇಶ್ ಮನೆಗೆ ತೆರಳಿ ಅತ್ಯಾಚಾರ ಎಸಗಿದ್ದಾನೆ. ಕೆಲವು ಗಂಟೆಗಳ ನಂತರ ಮನೆ ಬಳಿ ಯಾರೋ ಬರುತ್ತಿದ್ದ ಶಬ್ಧ ಕೇಳಿ ಓಡಿ ಹೋಗಿದ್ದಾನೆ. ವಿಚಾರ ತಿಳಿದ ಸಂಬಂಧಿಕರು ಪ್ರಕರಣ ದಾಖಲಿಸಿದ್ದರು. ಇದರಿಂದ ಖಿನ್ನತೆಗೊಳಗಾಗಿದ್ದ ಮಹಿಳೆ ವಿಷ ಸೇವಿಸಿದ್ದಾರೆ. ಆಸ್ಪತ್ರೆಗೆ ದಾಖಲಿಸುವ ವೇಳೆ ಮಾರ್ಗದ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಈ ಸಂಬಂಧ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ನಡುವೆ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ. 

ಘಟನೆ ಬಳಿಕ ತಾಲೂಕು ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ, ಆರೋಪಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

SCROLL FOR NEXT