ರಾಜ್ಯ

ಮಧುಗಿರಿ: ಒಂದು ವರ್ಷದ ಮಗು ಸಾಯಿಸಿ, ಮಹಿಳೆ ತಾನೂ ಆತ್ಮಹತ್ಯೆಗೆ ಯತ್ನ

Shilpa D

ಮಧುಗಿರಿ: ಒಂದು ವರ್ಷದ ಮಗಳನ್ನು ಕೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಹೃದಯ ವಿದ್ರಾವಕ ಘಟನೆ ಮಧುಗಿರಿ ಪಟ್ಟಣದಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಒಂದು ವರ್ಷದ ಹೆಣ್ಣು ಮಗುವಿನ ಎಡಗೈನ ನರ ಕತ್ತರಿಸಿದ ಹೆತ್ತ ತಾಯಿ ತಾನೂ ಕತ್ತು ಸೀಳಿಕೊಂಡಿದ್ದು ಗಂಭೀರ ಸ್ಥಿತಿಯಲ್ಲಿದ್ದಾಳೆ. ಈ ಬಗ್ಗೆ ಪತಿ ಶಿವಾನಂದ ಹೇಳಿಕೆ ನೀಡಿದ್ದು ಮಧುಗಿರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಟ್ಟಣದ ಚೌಡೇಶ್ವರಿ ಗುಡಿ ಬೀದಿ ವಾಸಿ ಶ್ವೇತಾ (25) ಕೃತ್ಯವೆಸಗಿದ ಮಹಿಳೆ. ಪತಿ ಶಿವಾನಂದ ಹೇಳುವ ಪ್ರಕಾರ ಪತ್ನಿ ಶ್ವೇತ ಮಾನಸಿಕ ಅಸ್ವಸ್ಥೆಯಾಗಿದ್ದಳು. ನನ್ನ ಮಗಳು ಕೃತಿಷಾ (1) ಳನ್ನು ಅವಳೇ ಕೊಂದಿದ್ದಾಳೆಂದು ಆರೋಪಿಸಿದ್ದಾನೆ.

ನರ ಕತ್ತರಿಸಿದ ಪರಿಣಾಮ ತೀವ್ರ ರಕ್ತ ಸ್ರಾವವಾಗಿ ಮಗು ಪ್ರಾಣಬಿಟ್ಟಿದ್ದು ತಾಯಿ ಶ್ವೇತಾಳ ಸ್ಥಿತಿ ಚಿಂತಾಜನಕವಾಗಿದೆ. ನೆರೆಹೊರೆಯವರು ಧಾವಿಸಿ ಇಬ್ಬರನ್ನೂ ಹತ್ತಿರದ ಆಸ್ಪತ್ರೆಗೆ ಸಾಗಿಸಿದರು, ಅಲ್ಲಿ ಮಗು ಸಾವನ್ನಪ್ಪಿದೆ ಎಂದು ಘೋಷಿಸಲಾಯಿತು. ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಮೂಲಗಳ ಪ್ರಕಾರ ಆಕೆಯ ಪತಿ ಶಿವಾನಂದ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದರು. ಶಿವಾನಂದ ಅವರು ಮನೆಯಲ್ಲಿ ಇಲ್ಲದಿದ್ದಾಗ ಈ ಘಟನೆ ನಡೆದಿದೆ. ಇತ್ತಕಡೆ ಸಂಬಂಧಿಕರು ಈ ರೀತಿ ನಡೆಯಲು ಪತಿ ಶಿವಾನಂದನೇ ಕಾರಣ ಎಂದು ದೂರಿದ್ದಾರೆ. ಪೊಲೀಸರ ತನಿಖೆಯ ಮೂಲಕ ಸತ್ಯ ತಿಳಿದು ಬರಬೇಕಿದೆ. ಘಟನೆಯ ಹಿಂದಿನ ಕಾರಣವನ್ನು ತಿಳಿಯಲು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಮಧುಗಿರಿ ಡಿವೈಎಸ್ಪಿ ವೆಂಕಟೇಶ್ ನಾಯ್ಡು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

SCROLL FOR NEXT