ರಾಜ್ಯ

'ಶಕ್ತಿ' ಪ್ರಭಾವ: ಪೀಕ್ ಅವರ್ ನಲ್ಲಿ ತಡವಾಗುತ್ತಿರುವ ಬಸ್ ಗಳ ಸಂಚಾರ, ಪ್ರಯಾಣಿಕರ ಅಳಲು

Sumana Upadhyaya

ಬೆಂಗಳೂರು: ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಬಸ್‌ಗಳು ತಡವಾಗಿ ಬರುತ್ತಿವೆ ಎಂದು ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸುವ ನಾಗರಿಕರು ಆರೋಪಿಸುತ್ತಿದ್ದಾರೆ. ವಿಶೇಷವಾಗಿ ಪೀಕ್ ಅವರ್‌ಗಳಲ್ಲಿ, ದಟ್ಟಣೆಯ ಸಮಯದಲ್ಲಿ ಬಸ್ ಗಳು ತಡವಾಗಿ ತಲುಪುತ್ತಿವೆ, ಇದರಿಂದ ಶಾಲಾ-ಕಾಲೇಜು, ಕಚೇರಿಗಳಿಗೆ ಹೋಗುವವರಿಗೆ, ಕೆಲಸ ಕಾರ್ಯಗಳಿಗೆ ಹೋಗುವವರಿಗೆ ತೊಂದರೆಯಾಗುತ್ತಿದೆ ಎಂದು ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

ನಾನು ಸಾಮಾನ್ಯವಾಗಿ ಮೆಜೆಸ್ಟಿಕ್‌ನಿಂದ ಶಿವಾಜಿನಗರಕ್ಕೆ 10 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಬಸ್ಸು ಪಡೆಯುತ್ತಿದ್ದೆ. ಮೊನ್ನೆ ಗುರುವಾರ, ನಾನು 10.30 ಕ್ಕೆ ಬಸ್ ನಿಲ್ದಾಣವನ್ನು ತಲುಪಿದೆ. ಶಿವಾಜಿನಗರ ಬಸ್ಸು 1 ಗಂಟೆ ತಡವಾಗಿ ಬಂತು ಎಂದು ಖಾಸಗಿ ಕಂಪನಿ ಉದ್ಯೋಗಿ ಸತ್ಯಮೂರ್ತಿ ಹೇಳುತ್ತಾರೆ.

ಅವರೊಂದಿಗೆ ಸುಮಾರು 200 ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿದ್ದರು. “ಬಸ್‌ಗಳು ತಡವಾಗಿ ತಲುಪಿದರೆ, ಅವುಗಳನ್ನೇ ಅವಲಂಬಿಸಿರುವ ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಕಚೇರಿಗೆ ಹೇಗೆ ತಲುಪುತ್ತಾರೆ? ಶಕ್ತಿ ಯೋಜನೆಯಿಂದಾಗಿ ಬಿಎಂಟಿಸಿ ಟ್ರಿಪ್‌ಗಳ ಸಂಖ್ಯೆಯನ್ನು ಕಡಿಮೆ ಮಾಡಿದೆಯೇ ಅಥವಾ ಬಸ್‌ಗಳ ಸಂಖ್ಯೆಯನ್ನು ಕಡಿತಗೊಳಿಸಿದೆಯೇ ಎಂದು ಮತ್ತೊಬ್ಬ ಪ್ರಯಾಣಿಕರು ಪ್ರಶ್ನಿಸಿದರು.

ಮಹಿಳಾ ಪ್ರಯಾಣಿಕರ ಗುರುತಿನ ಚೀಟಿಗಳನ್ನು ಪರಿಶೀಲಿಸಬೇಕು. ನಂತರ ಅವರಿಗೆ ಶೂನ್ಯ ಟಿಕೆಟ್‌ಗಳನ್ನು ನೀಡಬೇಕು. ನಂತರ ಪುರುಷರ ಕಡೆಗೆ ಹೋಗಿ ಅವರಿಗೆ ಟಿಕೆಟ್‌ಗಳನ್ನು ನೀಡಬೇಕಾಗಿರುವುದರಿಂದ, ವಿಶೇಷವಾಗಿ ಪೀಕ್ ಸಮಯದಲ್ಲಿ ಅವರು ನಿಯಮಿತ ಸಮಯವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಕಂಡಕ್ಟರ್ TNIE ಗೆ ತಿಳಿಸಿದರು. 

ಸಂಚಾರ ದಟ್ಟಣೆಯ ಸಮಯದಲ್ಲಿ, ಬಸ್ಸುಗಳು ಬಹುತೇಕ ಕಚೇರಿಗೆ ಹೋಗುವವರು ಮತ್ತು ವಿದ್ಯಾರ್ಥಿಗಳಿಂದ ತುಂಬಿರುತ್ತವೆ. ಶಕ್ತಿ ಯೋಜನೆಯ ನಂತರ, ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ನಾವು ಟಿಕೆಟ್ ನೀಡಬೇಕಾದರೆ ಮತ್ತು ಬಸ್ ಪಾಸ್‌ಗಳನ್ನು ಪರಿಶೀಲಿಸಬೇಕಾದರೆ ಕೆಲವು ನಿಮಿಷಗಳ ಕಾಲ ಬಸ್ ನ್ನು ನಿಲ್ಲಿಸಿ ನಂತರ ಮುಂದುವರಿಯಬೇಕು. ಇಲ್ಲಿ ಸಮಯ ವ್ಯರ್ಥವಾಗುತ್ತದೆ ಎಂದು ನಿರ್ವಾಹಕರೊಬ್ಬರು ಹೇಳುತ್ತಾರೆ. 

ಕೆಲವು ಪ್ರಯಾಣಿಕರು ಯಾವುದೇ ತೊಂದರೆ ಎದುರಿಸುತ್ತಿಲ್ಲ. ಎಂದಿನಂತೆ ಬಸ್‌ಗಳನ್ನು ಪಡೆಯುತ್ತೇವೆ ಎಂದು ಹೇಳಿದರು. BMTC 6,688 ಬಸ್‌ಗಳ ಸಂಚಾರವನ್ನು ದಿನಕ್ಕೆ ಹೊಂದಿದೆ, ಅದರಲ್ಲಿ ಅವರು ಪ್ರತಿ ದಿನ 5,557 ಬಸ್‌ಗಳನ್ನು ನಿರ್ವಹಿಸುತ್ತಾರೆ. ಟಿಎನ್‌ಐಇ ಬಿಎಂಟಿಸಿ ಎಂಡಿ ಸತ್ಯವತಿ ಅವರನ್ನು ಸಂಪರ್ಕಿಸಿದಾಗ, ಶಕ್ತಿ ಯೋಜನೆ ಪ್ರಾರಂಭವಾದ ನಂತರ ಬಸ್‌ಗಳ ಸಂಚಾರ ಸಂಖ್ಯೆ ಕಡಿಮೆಯಾಗಿಲ್ಲ ಎಂದು ಹೇಳಿದರು.

SCROLL FOR NEXT