ರಾಜ್ಯ

ರಾಜ್ಯದ ಹೆದ್ದಾರಿಗಳಲ್ಲಿ ಜನರ ಜೀವ ಉಳಿಸಲು ರಾಜೀವ್ ಗಾಂಧಿ ವಿವಿಯಿಂದ 'ರಸ್ತಾ' ತರಬೇತಿ

Lingaraj Badiger

ಬೆಂಗಳೂರು: ಇತ್ತೀಚಿಗೆ ಹೆದ್ದಾರಿಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ನಿತ್ಯ ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ರಾಜ್ಯ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಜನರ ಜೀವ ಉಳಿಸುವುದಕ್ಕಾಗಿ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಪೊಲೀಸ್, ಆಂಬ್ಯುಲೆನ್ಸ್ ಚಾಲಕರು ಮತ್ತು ನಾಗರಿಕರಿಗೆ 'ರಸ್ತಾ' ತರಬೇತಿ ಆರಂಭಿಸಿದೆ.

ರಾಜೀವ್ ಗಾಂಧಿ ವಿಶ್ವವಿದ್ಯಾಲಯದ 'ಜೀವ ರಕ್ಷಾ ಟ್ರಸ್ಟ್', ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ, 'ರಸ್ತಾ'(ತ್ವರಿತ ಪ್ರತಿಕ್ರಿಯೆ, ಮೌಲ್ಯಮಾಪನ, ಸ್ಥಿರೀಕರಣ ಮತ್ತು ಹೆದ್ದಾರಿಯಲ್ಲಿ ಸುರಕ್ಷಿತ ಸಾರಿಗೆ) ತರಬೇತಿ ಪ್ರಾರಂಭಿಸಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ರಾಜ್ಯದಾದ್ಯಂತ ಒಂಬತ್ತು ಜಿಲ್ಲೆಗಳಲ್ಲಿ ಒಟ್ಟು 26 ಅಪಘಾತ ವಲಯಗಳನ್ನು ಗುರುತಿಸಿದ್ದು, ಅಲ್ಲಿ 3-ಕಿಮೀ ವ್ಯಾಪ್ತಿಯಲ್ಲಿ ವಾಸಿಸುವ ಜನರಿಗೆ ಜೀವ ಉಳಿಸುವ ತರಬೇತಿ ನೀಡಲಾಗುತ್ತಿದೆ.

ಈ ಉಪಕ್ರಮವು ಅಪಘಾತಗಳಲ್ಲಿ ಸಾವನ್ನಪ್ಪುವ ಸಾವಿರಾರು ಜೀವಗಳನ್ನು ಉಳಿಸುವ ಗುರಿ ಹೊಂದಿದೆ. ಪೊಲೀಸ್, ಅಗ್ನಿಶಾಮಕ ಸುರಕ್ಷತಾ ಸಿಬ್ಬಂದಿ, ಆಂಬ್ಯುಲೆನ್ಸ್ ಚಾಲಕರು, ಆಸ್ಪತ್ರೆ ಸಿಬ್ಬಂದಿ ಮತ್ತು ಆಸಕ್ತ ನಾಗರಿಕರಿಗೆ ಗಾಯಾಳುಗಳಿಗೆ ತುರ್ತು ಚಿಕಿತ್ಸೆ ನೀಡಲು ಅಗತ್ಯ ತರಬೇತಿಯನ್ನು ನೀಡಲಿದೆ. ಅನೇಕ ಸಂದರ್ಭಗಳಲ್ಲಿ ಗಾಯಾಳು ಆಸ್ಪತ್ರೆ ತಲುಪುವ ಮುನ್ನ ಅತಿಯಾದ ರಕ್ತಸ್ರಾವದಿಂದ ಅಥವಾ ಶ್ವಾಸನಾಳದ ಸಮಸ್ಯೆಯಿಂದ ಪ್ರಾಣ ಕಳೆದುಕೊಳ್ಳುತ್ತಾರೆ ಎಂದು ಜೀವ ರಕ್ಷಾ ಟ್ರಸ್ಟ್ ನ ನಿರ್ದೇಶಕ ಡಾ.ಯೋಗೇಶ್ ಬಿ. ತಿಳಿಸಿದ್ದಾರೆ.

ಅಪಘಾತದ ನಂತರ ಗಾಯಾಳುವಿನ ತಲೆ ಮತ್ತು ಕುತ್ತಿಗೆಯನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಜನರಿಗೆ ತರಬೇತಿಯ ಅಗತ್ಯವಿದೆ. ನಮ್ಮ ತರಬೇತಿಯು ರಕ್ತಸ್ರಾವವನ್ನು ನಿಲ್ಲಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಈ ಸರಳ ಕ್ರಮಗಳನ್ನು ಕೈಗೊಳ್ಳುವುದರಿಂದ ಅಪಘಾತಕ್ಕೀಡಾದವರ ಜೀವವನ್ನು ಉಳಿಸಬಹುದು ಎಂದು ಡಾ.ಯೋಗೇಶ್ ಹೇಳಿದ್ದಾರೆ.

2022 ರಲ್ಲಿ ಸಚಿವಾಲಯವು ಮಂಡ್ಯ, ಮೈಸೂರು, ಹುಬ್ಬಳ್ಳಿ-ಧಾರವಾಡ, ತುಮಕೂರು, ದಾವಣಗೆರೆ, ಬೆಳಗಾವಿ, ಕಲಬುರಗಿ ಮತ್ತು ಮಂಗಳೂರು ಜಿಲ್ಲೆಗಳಲ್ಲಿ ಅಪಘಾತದ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿದೆ.

‘ರಸ್ತಾ’ ಉಪಕ್ರಮದ ಮೂಲಕ, ಪ್ರತಿ ಹಾಟ್‌ಸ್ಪಾಟ್‌ನಲ್ಲಿ 160 ನುರಿತ ಪ್ರತಿಸ್ಪಂದಕರು ಮತ್ತು 60 ತರಬೇತಿ ಪಡೆದ ಆಸ್ಪತ್ರೆ ಸಿಬ್ಬಂದಿ ಇರುತ್ತಾರೆ. ಹೆಚ್ಚುವರಿಯಾಗಿ, ಎರಡು ಸರ್ಕಾರಿ-ಸಂಯೋಜಿತ ಟ್ರಾಮಾ ಸೆಂಟರ್‌ಗಳನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT