ರಾಜ್ಯ

ಲಿಂಗಾಯತ ಮೀಸಲಾತಿ ಹೆಚ್ಚಳ ಚುನಾವಣಾ ತಂತ್ರವಷ್ಟೇ: ಈಶ್ವರ್ ಖಂಡ್ರೆ

Manjula VN

ಕಲಬುರಗಿ: ರಾಜ್ಯ ಬಿಜೆಪಿ ಸರಕಾರ ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವುದು ಚುನಾವಣಾ ತಂತ್ರವಷ್ಟೇ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಭಾನುವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಸಮುದಾಯಕ್ಕೆ 3(ಬಿ) ವರ್ಗದಡಿಯಲ್ಲಿ ಶೇ.5ರಷ್ಟಿದ್ದ ಮೀಸಲಾತಿ ಕೋಟಾವನ್ನು 2(ಡಿ)ಗೆ ಬದಲಾಯಿಸುವ ಮೂಲಕ ಶೇ.7ಕ್ಕೆ ಹೆಚ್ಚಿಸಲಾಗಿದೆ. ಇದು ಬಹುದೊಡ್ಡ ಅನ್ಯಾಯವಾಗಿದ್ದು, ಇತರೆ ಸಮುದಾಯಗಳನ್ನು ವಂಚಿಸಿ ಮೀಸಲಾತಿ ಕೋಟಾ ಹೆಚ್ಚಳ ಮಾಡುವಂತೆ ನಾವು ಕೇಳಿರಲಿಲ್ಲ ಎಂದು ಹೇಳಿದ್ದಾರೆ.

ವೀರಶೈವ-ಲಿಂಗಾಯತ ಸಮುದಾಯವನ್ನು ಕೇಂದ್ರ ಸರ್ಕಾರ ಒಬಿಸಿ ವರ್ಗಕ್ಕೆ ಸೇರಿಸಬೇಕು ಮತ್ತು ಹಿಂದುಳಿದಿರುವಿಕೆಯನ್ನು ಪರಿಗಣಿಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ. ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ನೀಡಬೇಕು, ವೀರಶೈವ-ಲಿಂಗಾಯತ ಸಮುದಾಯಕ್ಕೆ ಶೇಕಡಾ 2ರಷ್ಟು ಮೀಸಲಾತಿ ಹೆಚ್ಚಳದಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಮೀಸಲಾತಿಯನ್ನು ಶೇ.50 ರಿಂದ 75ಕ್ಕೆ ಹೆಚ್ಚಿಸಲು ಸರ್ಕಾರವು ಸಿದ್ಧರಿದ್ದರೆ ಅದನ್ನು ಸಂವಿಧಾನದ 9 ನೇ ಶೆಡ್ಯೂಲ್‌ಗೆ ಸೇರಿಸಬೇಕಾಗಿತ್ತು, ಆದರೆ, ಚುನಾವಣಾ ಸಮಯದಲ್ಲಿ ವರ್ಗವನ್ನು ಬದಲಾಯಿಸಿ ಶೇ.2ರಷ್ಟು ಮೀಸಲಾತಿಯನ್ನು ಹೆಚ್ಚಿಸಿರುವುದು ಚುನಾವಣಾ ತಂತ್ರವಷ್ಟೇ ಎಂದು ಕಿಡಿಕಾರಿದರು.

SCROLL FOR NEXT