ರಾಜ್ಯ

ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಐವರು ವಿದೇಶಿ ಮಹಿಳೆಯರನ್ನು ತುಮಕೂರಿನ ವಿದೇಶಿಗರ ನಿರ್ಬಂಧ ಕೇಂದ್ರಕ್ಕೆ ರವಾನೆ

Ramyashree GN

ಬೆಂಗಳೂರು: ತುಮಕೂರು ಜಿಲ್ಲೆಯ ದಿಬ್ಬೂರು ಕಾಲೋನಿಯಲ್ಲಿರುವ ಮಹಿಳೆಯರಿಗಾಗಿ ವಿದೇಶಿಗರ ನಿರ್ಬಂಧ ಕೇಂದ್ರ ಸೋಮವಾರ ಕಾರ್ಯಾರಂಭ ಮಾಡಿದ್ದು, ಬೆಂಗಳೂರು ನಗರ ಪೊಲೀಸರು ನಗರದಲ್ಲಿ ವಾಸವಿದ್ದ ಐವರು ಮಹಿಳೆಯರನ್ನು ಕೇಂದ್ರಕ್ಕೆ ಕಳುಹಿಸಿದ್ದಾರೆ.

ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಆದೇಶದ ಮೇರೆಗೆ ಬಾಂಗ್ಲಾದೇಶದ ಇಬ್ಬರು ಮಹಿಳೆಯರು, ತಾಂಜೇನಿಯಾ, ಇರಾನ್ ಮತ್ತು ಉಗಾಂಡಾದಿಂದ ತಲಾ ಒಬ್ಬರನ್ನು ಈ ಕೇಂದ್ರಕ್ಕೆ ಕಳುಹಿಸಲಾಗಿದೆ.

ಈ ಮಹಿಳೆಯರನ್ನು ನೆಲಮಂಗಲ ಸಮೀಪದ ಸೊಂಡೆಕೊಪ್ಪದಲ್ಲಿರುವ ಬಂಧನ ಕೇಂದ್ರದಲ್ಲಿ ಬಂಧಿಸಿ, ಸೋಮವಾರ ಹೊಸ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನು ಮುಂದೆ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಮಹಿಳೆಯರನ್ನು ನಿರ್ಬಂಧ ಕೇಂದ್ರಕ್ಕೆ ಕಳುಹಿಸಲಾಗುವುದು. ಅವರನ್ನು ಗಡಿಪಾರು ಮಾಡಲು ವ್ಯವಸ್ಥೆ ಮಾಡುವವರೆಗೆ ಅವರು ಅಲ್ಲಿಯೇ ಇರುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮತ್ತು ಹಿರಿಯ ಅಧಿಕಾರಿಗಳು ಬಂಧನ ಕೇಂದ್ರಗಳ ಬಲವರ್ಧನೆ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಕುರಿತು ಚರ್ಚಿಸಲು ಸಭೆ ನಡೆಸಿದರು. ಅಕ್ರಮವಾಗಿ ವಾಸ ಮಾಡುವ ಮತ್ತು ಅಕ್ರಮವಾಗಿ ನೆಲೆಸಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅವರಿಗಾಗಿಯೇ ಪ್ರತ್ಯೇಕ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಅದರಂತೆ ಸಮಾಜ ಕಲ್ಯಾಣ ಇಲಾಖೆ ಕೇಂದ್ರ ಸ್ಥಾಪಿಸಿದೆ.

SCROLL FOR NEXT