ರಾಜ್ಯ

ಅಗತ್ಯ ಔಷಧಗಳ ಬೆಲೆಯಲ್ಲಿ ಶೇ 12.12 ರಷ್ಟು ಹೆಚ್ಚಳ: ಜನೌಷಧಿ ಕೇಂದ್ರಗಳ ಬಳಕೆ ಮಾಡುವಂತೆ ತಜ್ಞರ ಸಲಹೆ

Manjula VN

ಬೆಂಗಳೂರು: ಅಗತ್ಯ ಔಷಧಗಳ ಬೆಲೆಯನ್ನು ಶೇ 12.12 ರಷ್ಟು ಏರಿಕೆ ಮಾಡಲು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ ಸೋಮವಾರ ಅನುಮೋದನೆ ನೀಡಿದ್ದು, ಬೆಲೆ ಏರಿಕೆ ಹಿನ್ನೆಲೆಯಲ್ಲಿ ಜನೌಷಧಿ ಕೇಂದ್ರಗಳಲ್ಲಿ ಔಷಧಿಗಳ ಖರೀದಿ ಮಾಡುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಖಾಸಗಿ ಮತ್ತು ಸರ್ಕಾರಿ ವ್ಯವಸ್ಥೆಗಳಲ್ಲಿ ಚಿಕಿತ್ಸಾ ವೆಚ್ಚವನ್ನು ಹೆಚ್ಚಳ ಮಾಡಿರುವುದರಿಂದ ಇದು ಗ್ರಾಹಕರ ಮೇಲೆ ಹೆಚ್ಚಿನ ಪರಿಣಾಮ ಬೀರಲಿದೆ ಎಂದು ಫಾರ್ಮಸಿ ಕೌನ್ಸಿಲ್ ಆಫ್ ಇಂಡಿಯಾ (ಪಿಸಿಐ) ನಿವೃತ್ತ ಉಪ ನಿರ್ದೇಶಕ ಪಿಎಸ್ ಭಗವಾನ್ ಅವರು ಹೇಳಿದ್ದಾರೆ.

ವಿಶೇಷವಾಗಿ ಬಡ ಹಾಗೂ ಮಧ್ಯಮ ಕುಟುಂಬಗಳ ಮೇಲೆ ಇದರ ಪರಿಣಾಮ ಹೆಚ್ಚಾಗಿ ಬೀರಲಿದ್ದು, ಇಂತಹವರು ಜನೌಷಧಿ ಕೇಂದ್ರಗಳಲ್ಲಿ ಔಷಧಿಗಳನ್ನು ಖರೀದಿ ಮಾಡಬೇಕು. ಜನೌಷಧಿ ಕೇಂದ್ರಗಳಲ್ಲಿನ ಔಷಧಿಯೂ ಬ್ರ್ಯಾಂಡೆಡ್ ಔಷಧಿಗಳಂತೆಯೇ ಉತ್ತಮವಾಗಿರುತ್ತದೆ ಮತ್ತು ಹೆಚ್ಚು ಅಗ್ಗವಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಆಸ್ಪತ್ರೆಗಳು ಔಷಧಿಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುವುದರಿಂದ ಅವರಿಗೆ ರಿಯಾಯಿತಿ ದರದಲ್ಲಿ ಔಷಧಿಗಳನ್ನು ನೀಡಲಾಗುತ್ತದೆ. ಆದರೆ, ಇದರ ಬರೆ ಸಾಮಾನ್ಯ ಜನರ ಮೇಲೆ ಬೀಳುತ್ತದೆ ಎಂದು ಭಗವಾನ್ ಅವರು ತಿಳಿಸಿದ್ದಾರೆ.

ಸಗಟು ಬೆಲೆ ಸೂಚ್ಯಂಕ (ಡಬ್ಲ್ಯುಪಿಐ), ಅಂತಾರಾಷ್ಟ್ರೀಯ ಮಾರುಕಟ್ಟೆಯ ಮೂಲಕ ಔಷಧಗಳ ಲಭ್ಯತೆ/ಆಮದು ಮತ್ತು ಮಾರುಕಟ್ಟೆ ವೆಚ್ಚಗಳಿಂದಾಗಿ ಬ್ರಾಂಡೆಡ್ ಔಷಧಗಳ ಬೆಲೆಯಲ್ಲಿ ಏರಿಕೆಗಳು ಕಂಡು ಬಂದಿದೆ ಎಂದು ಭಗವಾನ್ ಅವರು ವರಿಸಿದ್ದಾರೆ.

ಬೆಂಗಳೂರಿನ ಫೀಲ್ಡ್ ಆಫೀಸರ್ ಅನುಪಮ್ ಪಾಠಕ್ ಅವರು ಮಾತನಾಡಿ, ಜನೌಷಧಿ ಕೇಂದ್ರಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಹಲವು ಕೇಂದ್ರಗಳ ವಾರ್ಷಿಕ ಆದಾಯ 1 ಕೋಟಿಗೂ ಹೆಚ್ಚು ದಾಟಿವೆ ಎಂದು ತಿಳಿಸಿದ್ದಾರೆ.

ಕೈಗೆಟಕುವ ದರದಲ್ಲಿ ಗುಣಮಟ್ಟದ ಔಷಧಗಳನ್ನು ಪೂರೈಸುವುದು ಈ ಕೇಂದ್ರಗಳ ಉದ್ದೇಶವಾಗಿತ್ತು. ಬೆಲೆ ಏರಿಕೆಯು ಕಡಿಮೆ ಆದಾಯವುಳ್ಳ, ಬಡವರ ಮೇಲೆ ಪರಿಣಾಮ ಬೀರಲಿದೆ. ಬಹುತೇಕ ಜನರು ತಾವು ಗಳಿಸುವ ಹಣವನ್ನು ದುಬಾರಿ ಔಷಧಿಗಳ ಖರೀದಿಗೆ ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.

ಆರ್ಥಿಕವಾಗಿ ಹಿಂದುಳಿದ ಜನರಿಗೆ ಅನುಕೂಲವಾಗುವಂತೆ ಇಂತಹ ಔಷಧಿ ಕೇಂದ್ರಗಳನ್ನು ದೇಶಾದ್ಯಂತ ವಿಸ್ತರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಪ್ರಸ್ತುತ, ಕರ್ನಾಟಕದ 31 ಜಿಲ್ಲೆಗಳಲ್ಲಿ 1,050 ಕೇಂದ್ರಗಳಿದ್ದು, ಈ ಕೇಂದ್ರಗಳಲ್ಲಿ 1,076 ಔಷಧಿಗಳು ಮತ್ತು 145 ಶಸ್ತ್ರಚಿಕಿತ್ಸಾ ವಸ್ತುಗಳನ್ನು ಅಗ್ಗದ ದರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

SCROLL FOR NEXT