ರಾಜ್ಯ

ಬೆಂಗಳೂರು: ವಿಕೋಪಕ್ಕೆ ತಿರುಗಿದ ಶ್ರೀರಾಮನವಮಿ ಆಚರಣೆ; ಯಲಹಂಕ ಪ್ರೆಸಿಡೆನ್ಸಿ ಕಾಲೇಜು ಮಂಡಳಿ ವಿರುದ್ಧ ಪ್ರತಿಭಟನೆ

Sumana Upadhyaya

ಯಲಹಂಕ(ಬೆಂಗಳೂರು): ರಾಮನವಮಿ ಆಚರಣೆ ಕೋಮು ಗಲಭೆಗೆ ಕಾರಣವಾದ ಘಟನೆ ಬೆಂಗಳೂರಿನ ಯಲಹಂಕದ ರಾಜಾನುಕುಂಟೆಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ನಿನ್ನೆ ನಡೆದಿದೆ.

ಶ್ರೀರಾಮನವಮಿಯಂದು ಹೆಸರುಬೇಳೆ ಪಾನಕ ಮಜ್ಜಿಗೆ ವಿತರಿಸಲು ಮುಂದಾದ ವಿದ್ಯಾರ್ಥಿಗಳನ್ನು ತಡೆದು ತಿಲಕ ಅಳಿಸಿ ಕೇಸರಿ ಶಾಲನ್ನು ಕಿತ್ತು ವಿದ್ಯಾರ್ಥಿಗಳ ಗುರುತಿನ ಕಾರ್ಡ್ ಕಿತ್ತುಕೊಂಡ ಘಟನೆ ಕಾಲೇಜಿನಲ್ಲಿ ನಡೆದಿದ್ದು ಘಟನೆಯನ್ನು ಖಂಡಿಸಿ ವಿದ್ಯಾರ್ಥಿಗಳು ಸ್ಥಳೀಯ ನಾಗರಿಕರು ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸೇರಿ ನೂರಾರು ಜನರು ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. 

ನಿನ್ನೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಹಿಂದೂ ಕಾರ್ಯಕರ್ತರು, ಗ್ರಾಮಸ್ಥರು ಸೇರಿ ರಾಮನವಮಿ ಪ್ರಯುಕ್ತ ಪ್ರಸಾದ ಹಂಚಲು ಮುಂದಾಗಿದ್ದರು. ಈ ವೇಳೆ ಸೆಕ್ಯೂರಿಟಿ ಗಾರ್ಡ್ ಗಳು ಮತ್ತು ಸಿಬ್ಬಂದಿ ವರ್ಗ ಆಕ್ಷೇಪಣೆ ಮಾಡಿ ವಿದ್ಯಾರ್ಥಿಗಳು ಹಣೆಗೆ ಹಚ್ಚಿದ್ದ ಕುಂಕುಮ ಅಳಿಸಿ, ಹೆಗಲ ಮೇಲೆ ಧರಿಸಿದ ಶಾಲುಗಳನ್ನು ಮತ್ತು ವಿದ್ಯಾರ್ಥಿಗಳ ಗುರುತು ಚೀಟಿಯನ್ನು ಪಡೆದು ನಾಳೆ ಪೋಷಕರನ್ನು ಕಾಲೇಜಿಗೆ ಕರೆದುಕೊಂಡು ಬರಬೇಕೆಂದು ತಿಳಿಸಿದರು. 

ಇದು ಹೊರಗೆ ಸ್ಥಳೀಯರಿಗೆ ಗೊತ್ತಾಗಿ ಹಿಂದೂಜಾಗರಣ ವೇದಿಕೆ ಕಾರ್ಯಕರ್ತರು, ಗ್ರಾಮಸ್ಥರು,ಆಟೋಚಾಲಕರು ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು. ಮಾತಿಗೆ ಮಾತು ಬೆಳೆಯಿತು. ಆಗ ರಾಜಾನುಕುಂಟೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಿ ಸಭೆ ನಡೆಸುವುದಾಗಿ ತಿಳಿಸಿದರು.

ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಮುಸ್ಲಿಂ-ಕ್ರಿಸ್ತಿಯನ್ ಹಬ್ಬಗಳಿಗೆ ಅವಕಾಶ ಕೊಡುತ್ತಾರೆ, ಹಿಂದೂ ಹಬ್ಬಗಳಿಗೆ ಆಕ್ಷೇಪ ಮಾಡುತ್ತಾರೆ ಎಂಬುದು ವಿದ್ಯಾರ್ಥಿಗಳ, ಸ್ಥಳೀಯರ ಆಕ್ಷೇಪವಾಗಿದೆ.

SCROLL FOR NEXT