ರಾಜ್ಯ

ಎಂಇಎಸ್ ಕಿಡಿಗೇಡಿಗಳ ಸಂಘಟನೆ: ಸಿಎಂ ಬೊಮ್ಮಾಯಿ

Manjula VN

ಹುಬ್ಬಳ್ಳಿ: ಎಂಇಎಸ್ ಕಿಡಿಗೇಡಿಗಳ ಸಂಘಟನೆಯಾಗಿದ್ದು, ಚುನಾವಣೆ ವೇಳೆ ಎಂಇಎಸ್‌ನವರು ಜನರ ಮನಸ್ಸ‌ನ್ನು ಕೆಡಿಸುವ ಗಿಮಿಕ್ ಮಾಡುತ್ತಾರೆ. ಬೆಳಗಾವಿ ಜನರಿಗೆ ಇದೆಲ್ಲಾ ಗೊತ್ತಿದೆ. ಇದಕ್ಕೆ ಜನರೇ ಉತ್ತರ ಕೊಡುತ್ತಾರೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಚುನಾವಣೆ ಸಂದರ್ಭದಲ್ಲಿ ಎಂಇಎಸ್ ಕಾರ್ಯಕರ್ತರು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಾರೆ, ಆದರೆ ಅವರಿಗೆ ತಕ್ಕ ಉತ್ತರ ನೀಡುವುದು ಹೇಗೆ ಎಂಬುದು ಬೆಳಗಾವಿ ಜನತೆಗೆ ಗೊತ್ತಿದೆ ಎಂದು ಹೇಳಿದರು.

ಬೆಳಗಾವಿ ಮತದಾರರು ಬಿಜೆಪಿಯನ್ನು ಆಯ್ಕೆ ಮಾಡುವ ಮೂಲಕ ಕನಿಷ್ಠ ಐದು ವರ್ಷಗಳ ಅವಧಿಗೆ ಎಂಇಎಸ್ ಅನ್ನು ಮನೆಗೆ ಕಳುಹಿಸುತ್ತಾರೆಂಬ ವಿಶ್ವಾಸ ನನಗಿದೆ.

ಮೋದಿ ಅವರು ಕಾಂಗ್ರೆಸ್ ಪಕ್ಷದಲ್ಲಿದ್ದ ಪ್ರಧಾನಿಯಂತಲ್ಲ. ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿಗಳು ಹಳ್ಳಿಗಳಿಗೆ ಭೇಟಿ ನೀಡುತ್ತಿರಲಿಲ್ಲ. ದೆಹಲಿಯಲ್ಲಿ ಮಾತ್ರ ಉಳಿಯಲು ಬಯಸುತ್ತಿದ್ದರು. ರಾಜ್ಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರಿಗೂ ಇದೇ ರೀತಿಯ ಮನಸ್ಥಿತಿ ಇದೆ. ಅದರಿಂದ ಹೊರಬರಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಆಶ್ಚರ್ಯವಾಗುವಂತೆ, ಕಾಂಗ್ರೆಸ್ಸೇತರ ಪ್ರಧಾನಿ (ನರೇಂದ್ರ ಮೋದಿ) ಜನರು ಕಷ್ಟದಲ್ಲಿದ್ದಾಗ ಹೆಚ್ಚಿನ ಪರಿಹಾರ ನೀಡಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಅತಿ ಹೆಚ್ಚು ರೈತರ ಆತ್ಮಹತ್ಯೆಗಳು ನಡೆದಿದ್ದವು. ಆ ಸಮಯದಲ್ಲಿ ಮನಮೋಹನ್ ಸಿಂಗ್ ಅಥವಾ ರಾಹುಲ್ ಗಾಂಧಿ ಕರ್ನಾಟಕಕ್ಕೆ ಭೇಟಿ ನೀಡಿದ್ದರೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ನೋಡಿ ಬಿಜೆಪಿಗೆ ಭಯ ಶುರುವಾಗಿದೆ ಎಂಬುದು ಹಾಸ್ಯಸ್ಪದವಾಗಿದೆ. ಎಲ್ಲಿಯವರೆಗೆ ಕಾಂಗ್ರೆಸ್ ಪಕ್ಷವು ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂತೋಷವಾಗಿಡುವಲ್ಲಿ ನಿರತವಾಗಿರುತ್ತದೆಯೋ, ಅಲ್ಲಿಯವರೆಗೆ ಬಜರಂಗದಳ ನಿಷೇಧದ ವಿಚಾರ ಜನರಲ್ಲಿ ಜೀವಂತವಾಗಿರುತ್ತದೆ ಎಂದು ಹೇಳಿದರು.

ಇದೇ ವೇಳೆ ಪಕ್ಷಕ್ಕೆ ಲಿಂಗಾಯತ ಮತಗಳ ಅಗತ್ಯವಿಲ್ಲ ಎಂಬ ಬಿಜೆಪಿಯ ಹಿರಿಯ ನಾಯಕ ಬಿಎಲ್ ಸಂತೋಷ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ಮುಖ್ಯಮಂತ್ರಿಗಳು ನಿರಾಕರಿಸಿದರು. ಅದರ ಬಗ್ಗೆ ಈಗ ಚರ್ಚೆ ಬೇಡ ಎಂದು ತಿಳಿಸಿದರು.

SCROLL FOR NEXT