ರಾಜ್ಯ

ರಾಷ್ಟ್ರೀಯವಾದಿ ಮುಸ್ಲಿಮರು, ಕ್ರಿಶ್ಟಿಯನ್ನರು ಮತ್ತು ಹಿಂದೂಗಳು ಅಭಿವೃದ್ಧಿಗಾಗಿ ಬಿಜೆಪಿಗೆ ಮತ ನೀಡುತ್ತಾರೆ: ಕೆಎಸ್ ಈಶ್ವರಪ್ಪ

Srinivasamurthy VN

ಶಿವಮೊಗ್ಗ: ಅಭಿವೃದ್ಧಿಗಾಗಿ ರಾಷ್ಟ್ರೀಯವಾದಿ ಮುಸ್ಲಿಮರು, ಕ್ರಿಶ್ಟಿಯನ್ನರು ಮತ್ತು ಹಿಂದೂಗಳು ಬಿಜೆಪಿಗೆ ಮತ ನೀಡುತ್ತಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದ ಸೈನ್ಸ್ ಪಿಯು ಕಾಲೇಜಿನಲ್ಲಿ ಮಾಜಿ ಸಚಿವ ಈಶ್ವರಪ್ಪ ಕುಟುಂಬಸ್ಥರೊಂದಿಗೆ ಆಗಮಿಸಿ ಮತ ಚಲಾಯಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದರು. ಈ ವೇಳೆ ಕರ್ನಾಟಕದಲ್ಲಿ ಬಿಜೆಪಿಯನ್ನು ಬೆಂಬಲಿಸಲು ರಾಜ್ಯಾದ್ಯಂತ ಜನರು ಸಿದ್ಧರಾಗಿದ್ದಾರೆ. ನಾವು ಸುಮಾರು 140 ಸ್ಥಾನಗಳನ್ನು ಗೆಲ್ಲುತ್ತೇವೆ ಮತ್ತು ಸಂಪೂರ್ಣ ಬಹುಮತ ಪಡೆಯುತ್ತೇವೆ ಎಂದು ಮಾಜಿ ಸಚಿವ ಕೆ ಎಸ್‌ ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮತ್ತು ಜೆಡಿ ಎಸ್ ಮುಸ್ಲಿಮರ ಓಲೈಕೆಗೆ ಯತ್ನಿಸಿವೆ.. ಆದರೆ ರಾಷ್ಟ್ರೀಯವಾದಿ ಮುಸ್ಲಿಮರು ನಮ್ಮೊಂದಿಗಿದ್ದಾರೆ. ಪಿಎಫ್‌ಐನಂತಹ ದೇಶವಿರೋಧಿ ಸಂಘಟನೆಗಳನ್ನು ಬೆಂಬಲಿಸುವವರು ಕಾಂಗ್ರೆಸ್ ಜೊತೆಗಿರುತ್ತಾರೆ. ಶಿವಮೊಗ್ಗ ನಗರದಲ್ಲಿ ನಾವು 100ಕ್ಕೆ 100ರಷ್ಟು ಗೆಲ್ಲುತ್ತೇವೆ, ಇಲ್ಲಿ ಎಲ್ಲಾ ವರ್ಗದವರಿಗೆ ಅಭಿವೃದ್ದಿ ಕೆಲಸ ಮಾಡಿದ್ದೇವೆ, ಇವನ್ನ ಮೆಚ್ಚಿ ಹೆಚ್ಚನ ಮತಗಳಿಂದ ಜನರು ನಮ್ಮನ್ನ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾನು ಪಕ್ಷದ ಶಿಸ್ತಿನ ಸಿಪಾಯಿ.. ಹಾಗಾಗಿ ಪಕ್ಷ ಹೇಳಿದಂತೆ ನಾನು ಕೆಲಸ ಮಾಡಿದ್ದೇನೆ, ನಾನು ಸ್ಪರ್ಧೆ ಮಾಡಿಲ್ಲ. ಮುಂದೆ ಯಾವುದೇ ಜವಾಬ್ದಾರಿ ಕೊಟ್ಟರೂ ನಾನು ನಿಭಾಯಿಸುತ್ತೇನೆ. ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್‌ ಸೋಲ್ತಾರೆ. ನಿನ್ನೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿ ದರ್ಶನ ಪಡೆದಿದ್ದಾರೆ. ಅವರು ಭಕ್ತಿದ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗಿಲ್ಲ, ಹಿಂದೂಗಳ ಪರವಾಗಿದ್ದೇವೆ ಎಂದು ತೋರಿಸಲು ಹೋಗಿದ್ದಾರೆ. ಅವರು ಧರ್ಮ ವಿರೋಧಿಗಳು. ಯಾವುದೇ ಕಾರಣಕ್ಕೂ ಅವರು ರಾಜ್ಯದಲ್ಲಿ ಗೆಲ್ಲುವುದಿಲ್ಲ, ವಿರೋಧ ಪಕ್ಷದಲ್ಲೂ ಇರ್ತಾರೋ ಇಲ್ವೋ ಎಂಬ ಅನುಮಾನ ಇದೆ. ನಿನ್ನೆ, ಇವತ್ತು ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಕಾಂಗ್ರೆಸ್‌ ನವರು ಕೊನೆ ಕ್ಷಣದಲ್ಲಿ ನಾವು ನಿಮ್ಮ ಪರ ಇದ್ದೇವೆ ಎಂದು ತೋರಿಕೆಯ ಪ್ರಚಾರ ಮಾಡುತ್ತಿದ್ದಾರೆ.. ರಾಜ್ಯದಲ್ಲಿ ಕಾಂಗ್ರೆಸ್‌ ಸೋಲುವುದು ಗ್ಯಾರಂಟಿ ಎಂದು ಈಶ್ವರಪ್ಪ ಕಿಡಿಕಾರಿದರು.

SCROLL FOR NEXT