ರಾಜ್ಯ

ಸಾಮಾಜಿಕ ಮಾಧ್ಯಮದಲ್ಲಿ 100ಕ್ಕೂ ಹೆಚ್ಚು ಅಭ್ಯರ್ಥಿ/ಪಕ್ಷಗಳಿಂದ ನಿಯಮ ಉಲ್ಲಂಘನೆ; ಪ್ರಧಾನಿ ಮೋದಿ, ಸಿದ್ದು ವಿರುದ್ಧ ದೂರು

Lingaraj Badiger

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದ ನಂತರ ಮತ್ತು  ಮತದಾನಕ್ಕೂ ಮುನ್ನ 48 ಗಂಟೆಗಳ 'ಮೌನ ಅವಧಿಯಲ್ಲಿ' ಸಾಮಾಜಿಕ ಮಾಧ್ಯಮ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸುಮಾರು 100ಕ್ಕೂ ಹೆಚ್ಚು ದೂರುಗಳನ್ನು ಚುನಾವಣಾ ಅಧಿಕಾರಿಗಳು ದಾಖಲಿಸಿದ್ದಾರೆ.

ಕಾಂಗ್ರೆಸ್‌ಗೆ ಮತ ನೀಡಿ: "ಕಾಂಗ್ರೆಸ್ ಗೆಲುವು ನಿಮ್ಮ ಗೆಲುವು" ಎಂದು ಟ್ವೀಟ್ ಮಾಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಮತ್ತು ಮೌನ ಅವಧಿಯಲ್ಲಿ ಕರ್ನಾಟಕದ ನಾಗರಿಕರಿಗೆ ಬರೆದ ಬಹಿರಂಗ ಪತ್ರದಲ್ಲಿ ಕರ್ನಾಟಕದ ಪ್ರತಿಯೊಬ್ಬ ನಾಗರಿಕನ ಕನಸು ನನ್ನ ಕನಸು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮ ಮೇಲ್ವಿಚಾರಕ ಆನಂದ್ ವಿ ಅವರು ಹೇಳಿದ್ದಾರೆ.

ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು 'ಮೌನ ಅವಧಿಯಲ್ಲಿ' ಯಾವುದೇ ವೀಡಿಯೊಗಳು ಅಥವಾ ಪೋಸ್ಟರ್‌ಗಳ ಮೂಲಕ ನಾಗರಿಕರಿಗೆ ಮತ ನೀಡುವಂತೆ ಕೇಳಿಕೊಳ್ಳುವುದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಎಂಸಿಎಂಸಿಯ ನೋಡಲ್ ಅಧಿಕಾರಿ ಪ್ರೀತಿ ಗೆಹ್ಲೋಟ್ ಅವರು ತಿಳಿಸಿದ್ದಾರೆ.

ಮತದಾನಕ್ಕೂ 48 ಗಂಟೆಗಳ ಮುನ್ನ ಮರುಹಂಚಿಕೆಯಾದ ಹಳೆಯ ವೀಡಿಯೊಗಳು/ಪೋಸ್ಟರ್‌ಗಳು ಸಹ ನಿಯಮ ಉಲ್ಲಂಘಿಸಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ಆನ್‌ಲೈನ್ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ನಿಯಮಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸದ ಕಾರಣ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಿಯಮ ಉಲ್ಲಂಘನೆಗಳ ಮೇಲ್ವಿಚಾರಣೆ ಮಾಡುವುದು ಸವಾಲಿನ ಸಂಗತಿಯಾಗಿದೆ ಎಂದು ಗೆಹ್ಲೋಟ್ ವಿವರಿಸಿದ್ದಾರೆ.

ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸುತ್ತಿರುವ ಯುಗದಲ್ಲಿ ಅದನ್ನು ನಿಯಂತ್ರಿಸುವುದು ಅಧಿಕಾರಿಗಳಿಗೆ ಕಷ್ಟಕರವಾಗಿದೆ. ರಾಜಕೀಯ ಪಕ್ಷಗಳು ರ್ಯಾಲಿಗಳು, ರೋಡ್ ಶೋಗಳು ಮತ್ತು ಮನೆ-ಮನೆಗೆ ಪ್ರಚಾರ ಮಾಡುವ ರೀತಿಯಲ್ಲಿಯೇ ಆನ್‌ಲೈನ್ ಪ್ರಚಾರಗಳನ್ನು ನಡೆಸುತ್ತಿವೆ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಪಾಲಿಸಿ ಅಂಡ್ ಗವರ್ನೆನ್ಸ್‌ನ ನಾರಾಯಣ ಎ ಅವರು ಹೇಳಿದ್ದಾರೆ.

SCROLL FOR NEXT