ರಾಜ್ಯ

ವಾಹನ ಕದಿಯುತ್ತಿದ್ದ ನಾಲ್ವರ ಬಂಧನ: 1.2 ಕೋಟಿ ರೂ. ಮೌಲ್ಯದ 75 ಬೈಕ್-ಸ್ಕೂಟರ್'ಗಳು ವಶಕ್ಕೆ

Manjula VN

ಬೆಂಗಳೂರು: ನಗರದೆಲ್ಲೆಡೆ ದುಬಾರಿ ಬೆಲೆಯ ಬೈಕ್‌, ಸ್ಕೂಟರ್‌ಗಳನ್ನು ಕದ್ದು ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದ ಅಂತಾರಾಜ್ಯ ಖದೀಮರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.

ಆರೋಪಿಗಳಿಂದ ಕಳೆದ ಐದು ತಿಂಗಳ ಅವಧಿಯಲ್ಲಿ ಕಳ್ಳತನವಾಗಿದ್ದ 1.2 ಕೋಟಿ ರೂಪಾಯಿ ಮೌಲ್ಯದ 72 ಬೈಕ್‌ಗಳು ಮತ್ತು ಸ್ಕೂಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

4 ಮಂದಿಯ ಗ್ಯಾಂಗ್ ತಮಿಳುನಾಡಿನಿಂದ ರಾತ್ರಿ ಬಸ್ ನಲ್ಲಿ ನಗರಕ್ಕೆ ಬಂದು ಗಾರ್ವೆಬಾವಿ ಪಾಳ್ಯದಲ್ಲಿ ಇಳಿಯುತ್ತಿದ್ದರು. ಬೊಮ್ಮನಹಳ್ಳಿ, ಬೇಗೂರು, ಮೈಕೋ ಲೇಔಟ್, ಪರಪ್ಪನ ಅಗ್ರಹಾರ, ಹೆಬ್ಬಗೋಡಿ, ಅತ್ತಿಬೆಲೆ, ಚಂದಾಪುರದಲ್ಲಿ ಮನೆಯ ಹೊರಗೆ ಪಾರ್ಕಿಂಗ್ ಮಾಡಿರುತ್ತಿದ್ದ ಐಷಾರಾಮಿ ದ್ವಿಚಕ್ರ ವಾಹನಗಳನ್ನು ಪತ್ತೆ ಮಾಡಿ ಖದಿಯುತ್ತಿದ್ದರು.

ಗ್ಯಾಂಗ್ ನಲ್ಲಿದ್ದ ಇಬ್ಬರು ಸದಸ್ಯರು ವಾಹನದ ಬೀಗವನ್ನು ಒಡೆದರು, ಖದಿಯಲು ಮುಂದಾದರೆ, ಮತ್ತಿಬ್ಬರು ಕಾವಲು ಕಾಯುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವಾಹನಗಳ ಕಳ್ಳತನ ಮಾಡಿದ ನಂತರ ತಿರುಪ್ಪತ್ತೂರು, ವಾಣಿಯಂಬಾಡಿ, ವೆಲ್ಲೂರು, ಅಂಬೂರು, ಮತ್ತು ತಮಿಳುನಾಡಿನ ಇತರ ಭಾಗಗಳಿಗೆ ತೆರಳಿ, ಯಾವುದೇ ದಾಖಲೆಗಳನ್ನು ನೀಡದೆ, ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು.

ಈ ಸಂಬಂಧ ಹಲವು ದೂರುಗಳು ದಾಖಲಾದ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ತಂಡವನ್ನು ರಚನೆ ಮಾಡಿದ್ದರು.

ಎಪ್ರಿಲ್‌ ತಿಂಗಳಿನಲ್ಲಿ ರಾತ್ರಿ ಗಸ್ತಿನಲ್ಲಿ ತಿರುಗುತ್ತಿಲ್ಲ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದರು. ಬಳಿಕ ಆತ ನೀಡಿದ ಮಾಹಿತಿ ಮೇರೆಗೆ ಇತರರನ್ನು ಬಂಧನಕ್ಕೊಳಪಡಿಸಿದ್ದಾರೆ.

ಪೊಲೀಸರು ವಶಪಡಿಸಿಕೊಂಡ ಬೈಕ್‌ಗಳಲ್ಲಿ 12 ರಾಯಲ್ ಎನ್‌ಫೀಲ್ಡ್, 22 ಬಜಾಜ್ ಪಲ್ಸರ್, 6 ಯಮಹಾ ಆರ್ 15 ಮತ್ತು ಎಂಟು ಪಲ್ಸರ್ ಎನ್‌ಎಸ್ 200 ಬೈಕ್‌ಗಳು ಸೇರಿವೆ.

SCROLL FOR NEXT