ರಾಜ್ಯ

ವಿಶ್ವವಿದ್ಯಾನಿಲಯಗಳ ಸಿಂಡಿಕೇಟ್ ಸದಸ್ಯರು ಸೇರಿದಂತೆ ವಿವಿಧ ನೇಮಕಾತಿ ರದ್ದುಪಡಿಸಿ: ಸರ್ಕಾರ ಆದೇಶ

Manjula VN

ಬೆಂಗಳೂರು: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವಂತ ನೂತನ ಕಾಂಗ್ರೆಸ್ ಸರ್ಕಾರವು, ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಶ್ವವಿದ್ಯಾಲಯಗಳಲ್ಲಿ ನೇಮಕ ಮಾಡಿದ್ದ ಸಿಂಡಿಕೇಟ್ ಸದಸ್ಯರು ಸೇರಿದಂತೆ ವಿವಿಧ ನೇಮಕಾತಿಯನ್ನು ರದ್ದುಗೊಳಿಸಿ ಆದೇಶಿಸಿದೆ.

ಈ ಕುರಿತಂತೆ ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ.

ಆದೇಶದಲ್ಲಿ ಉನ್ನತ ಶಿಕ್ಷಣ ಅಡಿಯಲ್ಲಿ ಬರುವ ಸಾರ್ವಜನಿಕ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ವಿವಿ ಅಧಿನಿಯಮ 2000 ಹಾಗೂ ಇತರೆ ಪ್ರತ್ಯೇಕ ಅಧಿನಿಯಮಗಳಡಿ ಪ್ರದತ್ತವಾದ ಅಧಿಕಾರವನ್ನು ಜಲಾಯಿಸಿ, ಕರ್ನಾಟಕ ಸರ್ಕಾರವು ಈ ಹಿಂದೆ ದಿನಾಂಕ 22-05-2023ರವರೆಗೆ ವಿವಿಧ ಸಾರ್ವಜನಿಕ ವಿಶ್ವವಿದ್ಯಾಲಯಗಳ ಸಿಂಡಿಕೇಟ್, ಕಾರ್ಯಕಾರಿ ಪರಿಷತ್, ಸಮಿತಿ, ವ್ಯವಸ್ಥಾಪನಾ ಮಂಡಳಿ, ಪ್ರಶಾಸನ ಸಭೆ, ವಿದ್ಯಾ ವಿಷಯಕ ಪರಿಷತ್ ಮತ್ತು ಪ್ರತಿಕ್ಷಣ ಪರಿಷತ್ತು, ಪ್ರಾಧಿಕಾರಿಗಳಿಗೆ ಮಾಡಿರುವ ಎಲ್ಲಾ ಅಧಿಕಾರೇತರ ಸದಸ್ಯರ ನಾಮ ನಿರ್ದೇಶನಗಳನ್ನು ರದ್ದುಗೊಳಿಸಿರುವುದಾಗಿ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ಮಾಡಿರುವ ಎಲ್ಲಾ ಅಧಿಕಾರೇತರ ಸದಸ್ಯರ ನಾಮನಿರ್ದೇಶನಗಳನ್ನು, ಸಾರ್ವಜನಿಕ ವಿಶ್ವರಿದ್ಯಾಲಯಗಳಲ್ಲಿ ಸ್ಥಾಪಿಸಲಾಗಿರುವ ಅಧ್ಯಯನ ಪೀಠಗಳಿಗೆ ಮಾಡಿರುವ ಎಲ್ಲಾ ಅಧಿಕಾರೇತರ ಸದಸ್ಯರ ನಾಮನಿರ್ದೇಶನಗಳನ್ನು ಹಾಗೂ ಉನ್ನತ ಶಿಕ್ಷಣ ಇಲಾಖೆ ಅಡಿ ಬರುವ ಖಾಸಗಿ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಪ್ರಬಂಧಕ ಮಂಡಳಿಗಳಿಗೆ ಮಾಡಿರುವ ಎಲ್ಲಾ ಅಧಿಕಾರೇತರ ಸದಸ್ಯರ ನಾಮನಿರ್ದೇಶನಗಳನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.

SCROLL FOR NEXT