ರಾಜ್ಯ

ಕಾರ್ಯವಿಧಾನದ ಲೋಪದಿಂದಾಗಿ ಒಡಿಶಾದಲ್ಲಿ ಜಿಗಣಿ ಪೊಲೀಸರ ಬಂಧನವಾಗಿದೆ: ಬೆಂಗಳೂರು ಗ್ರಾಮಾಂತರ ಎಸ್'ಪಿ

Manjula VN

ಬೆಂಗಳೂರು: ಕಾರ್ಯವಿಧಾನದಲ್ಲಿ ಲೋಪದೋಷಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಒಡಿಶಾದಲ್ಲಿ ಜಿಗಣಿ ಪೊಲೀಸರ ಬಂಧನವಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಸಂಜಯ್‌ ರಾವುತ್‌ ಸೇರಿದಂತೆ ಮೂವರನ್ನು ಜಿಗಣಿ ಪೊಲೀಸರು ಅಕ್ಟೋಬರ್‌ 13ರಂದು ಬಂಧಿಸಿದ್ದರು. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಒಡಿಶಾದಿಂದ ಗಾಂಜಾ ತಂದಿರುವುದಾಗಿ ಹೇಳಿದ್ದ. ಆತ ನೀಡಿದ್ದ ಮಾಹಿತಿ ಮೇರೆಗೆ ಜಿಗಣಿ ಪೊಲೀಸ್‌ ಠಾಣೆಯ ಆರು ಪೊಲೀಸ್‌ ಸಿಬ್ಬಂದಿ ಮತ್ತು ಒರಿಯಾ ಭಾಷೆ ಬಲ್ಲ ಯುವಕನೊಂದಿಗೆ ಒಡಿಶಾಗೆ ತೆರಳಿದ್ದರು.

ಒಡಿಶಾದ ಕಾಡಂಚಿನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಕಲೆಹಾಕಿ ಕ್ರೈಂ ಕಾನ್‌ಸ್ಟೆಬಲ್‌ ಆನಂದ್‌ ಮತ್ತು ಆರೋಪಿಯ ಪರಿಚಯಸ್ಥ ಶಾಮ್‌ ಹಾಗೂ ಜಿಗಣಿಯ ಯುವಕ ಮಾರುವೇಷದಲ್ಲಿ ಗಾಂಜಾ ಖರೀದಿ ಮಾಡುವ ನೆಪದಲ್ಲಿ ಸ್ಥಳಕ್ಕೆ ತೆರಳುತ್ತಿದ್ದರು.

17 ಕೆ.ಜಿ ಗಾಂಜಾ ವಶಕ್ಕೆ ಪಡೆದು ಕಾಡಿನಿಂದ ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದ ಸಂದರ್ಭದಲ್ಲಿ ಒಡಿಶಾದ ಪೊಲೀಸರು ಜಿಗಣಿಯ ಪೊಲೀಸ್‌ ಕಾನ್‌ಸ್ಟೇಬಲ್‌ ಆನಂದ್‌ ಅವರನ್ನು ವಶಕ್ಕೆ ಪಡೆದಿದ್ದರು. ಈ ಸಂದರ್ಭದಲ್ಲಿ ಗಾಂಜಾ ಸರಬರಾಜು ಮಾಡಲು ಬಂದಿದ್ದ ಒಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ. ಆನಂದ್‌ ಮತ್ತು ಒರಿಯಾ ಭಾಷೆ ಬಲ್ಲ ಜಿಗಣಿಯ ಮತ್ತೊಬ್ಬ ಯುವಕನನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸ್‌ ದಾಖಲೆ ತೋರಿಸಿದರೂ ಒಡಿಶಾ ಪೊಲೀಸರು ನಂಬದೇ ವಶದಲ್ಲಿಟ್ಟುಕೊಂಡಿದ್ದಾರೆಂದು ಹೇಳಲಾಗುತ್ತಿತ್ತು.

ಘಟನೆ ಕುರಿತು ಮಾತನಾಡಿರುವ ಗ್ರಾಮಾಂತರ ಜಿಲ್ಲಾ ಎಸ್‌.ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು, ಆನಂದ್ ಅವರ ತಪ್ಪಿಲ್ಲ. ಕಾರ್ಯವಿಧಾನದಲ್ಲಿ ಮಾಡಲಾಗಿರುವ ಲೋಪದೋಷಗಳಿಂದಾಗಿ ಅವರು ಈ ಪರಿಸ್ಥಿತಿ ಎದುರಿಸುವಂತಾಗಿದೆ. ಪ್ರಸ್ತುತ ಪೊಲೀಸರ ಬಿಡುಗಡೆಗೆ ಕಾನೂನು ಪ್ರಕ್ರಿಯೆಗಳನ್ನು ಆರಂಭಿಸಲಾಗಿದೆ ಎಂದು ಹೇಳಿದ್ದಾರೆ.

SCROLL FOR NEXT