ರಾಜ್ಯ

ಚಿಕ್ಕಬಳ್ಳಾಪುರ: ಫೋನ್ ಬಳಸದಂತೆ ಬೈದ ಪೋಷಕರು; ಮನನೊಂದು ಬಾಲಕ ಆತ್ಮಹತ್ಯೆ

Ramyashree GN

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯ ಹಳ್ಳಿಯೊಂದರಲ್ಲಿ ಮೊಬೈಲ್ ಫೋನ್ ಚಟದ ಬಗ್ಗೆ ಪೋಷಕರು ಗದರಿಸಿದ್ದರಿಂದ ಮನನೊಂದು 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಮೃತನನ್ನು 15 ವರ್ಷದ ಲೋಕೇಶ್ ಎಂದು ಗುರುತಿಸಲಾಗಿದ್ದು, ಚಿಟ್ಟಾವಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಲೋಕೇಶ್‌ನ ತಂದೆ ತನ್ನ ಮಗ ಹೆಚ್ಚಿನ ಸಮಯವನ್ನು ಮೊಬೈಲ್ ಫೋನ್‌ನಲ್ಲಿ ಕಳೆಯುವುದರ ಬಗ್ಗೆ ಚಿಂತಿತರಾಗಿದ್ದರು ಮತ್ತು ಆತ ಅಧ್ಯಯನದತ್ತ ಗಮನ ಹರಿಸಬೇಕೆಂದು ಬಯಸಿದ್ದರು.

ಇದೇ ವಿಚಾರವಾಗಿ ಸೋಮವಾರ ತಂದೆ ಮೊಬೈಲ್ ಬಳಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದಾಗ, ಇಬ್ಬರೂ ಜಗಳವಾಡಿದ್ದಾರೆ. ಈ ವೇಳೆ ಬಾಲಕ ಕೋಪದಿಂದ ಮನೆಯಿಂದ ಹೊರಬಂದಿದ್ದಾನೆ.

ಬಳಿಕ ಗ್ರಾಮದ ನಿರ್ಜನ ಪ್ರದೇಶಕ್ಕೆ ತೆರಳಿದ ಲೋಕೇಶ್, ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

SCROLL FOR NEXT