ಹಾಸನ: ಜಗಳ ವಿಕೋಪಕ್ಕೆ ತಿರುಗಿ ತನ್ನ ಗೆಳತಿಯನ್ನು ಚಾಕುವಿನಿಂದ ಕತ್ತು ಸೀಳಿ ಕೊಂದ ಆರೋಪದ ಮೇಲೆ 23 ವರ್ಷದ ಯುವಕನನ್ನು ಶುಕ್ರವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತೇಜಸ್ ಎಂಬ ಯುವಕ ಕಳೆದ ಆರು ತಿಂಗಳಿನಿಂದ ಯುವತಿ ಜೊತೆ ಸಂಬಂಧ ಹೊಂದಿದ್ದ. ಅವಳು ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಳು. ಆರೋಪಿಯೂ ಅದೇ ಕಾಲೇಜಿನಲ್ಲಿ ಪದವಿ ಪಡೆದಿದ್ದು, ಆಕೆಯ ಸೀನಿಯರ್ ಆಗಿದ್ದ. ಇಬ್ಬರಲ್ಲಿ ಪರಿಚಯವಾಗಿ ಅದು ಸ್ನೇಹಕ್ಕೆ ತಿರುಗಿ ಪ್ರೀತಿಯುಂಟಾಗಿತ್ತು. ಇಬ್ಬರ ಮಧ್ಯೆ ಆಗಾಗ ಜಗಳಗಳಾಗುತ್ತಿದ್ದವು.
ಇತ್ತೀಚೆಗಷ್ಟೇ ಯುವತಿಯ ಹಿಂದಿನ ಸಂಬಂಧದ ಬಗ್ಗೆ ತಿಳಿದು ಇಬ್ಬರ ನಡುವೆ ಜಗಳವಾಗಿತ್ತು. ಇದನ್ನು ತನ್ನಿಂದ ಮರೆಮಾಚಿದ್ದೀಯ ಎಂದು ತೇಜಸ್ ಆಕೆಯ ಬಳಿ ಜಗಳ ತೆಗೆಯುತ್ತಿದ್ದ. ಇದು ಇಬ್ಬರ ಮಧ್ಯೆ ಭಾರೀ ವಾದಕ್ಕೆ ಕಾರಣವಾಗಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹಿಂಸಾತ್ಮಕ ತಿರುವು ಪಡೆದ ಬಾಡಿ ಶೇಮಿಂಗ್; ಜಿಮ್ ನಲ್ಲಿ ಯುವಕನಿಗೆ ಚಾಕುವಿನಿಂದ ಹಲ್ಲೆ, ದೂರು ದಾಖಲು
ಯುವತಿ ಆತ ತನ್ನ ವಿಚಾರದಲ್ಲಿ ನಿರಂತರ ಹಸ್ತಕ್ಷೇಪ ಮಾಡುತ್ತಿದ್ದಾನೆ ಎಂದು ಬೇಸರಗೊಂಡಿದ್ದಳು ಹಾಗೂ ಅವನೊಂದಿಗಿನ ತನ್ನ ಸಂಬಂಧವನ್ನು ಕೊನೆಗೊಳಿಸಲು ಬಯಸುವುದಾಗಿ ತಿಳಿಸಿದಳು. ತೇಜಸ್ ತನ್ನ ಹಿನ್ನೆಲೆ ಮತ್ತು ಹಿಂದಿನ ಸಂಬಂಧವನ್ನು ಪದೇ ಪದೇ ತೆಗೆಯುವ ಬಗ್ಗೆ ಮತ್ತು ಆ ವಿಷಯವನ್ನಿಟ್ಟುಕೊಂಡು ಜಗಳ ಮಾಡುತ್ತಿದ್ದುದಕ್ಕೆ ಅವಳು ಅಸಮಾಧಾನಗೊಂಡು ಆತನೊಂದಿಗೆ ಸ್ನೇಹವನ್ನು ಕೊನೆಗೊಳಿಸಲು ಬಯಸಿದ್ದಳು.
ನಿನ್ನೆ ಗುರುವಾರ ತಮ್ಮ ನಡುವಿನ ಸಮಸ್ಯೆಗಳನ್ನು ಚರ್ಚಿಸುವ ನೆಪದಲ್ಲಿ, ಅವನು ಅವಳನ್ನು ಮುಖ್ಯ ಪಟ್ಟಣಕ್ಕೆ ಕರೆದು ಅಲ್ಲಿಂದ ತನ್ನ ಬೈಕ್ ನಲ್ಲಿ ನಗರದಿಂದ ಸುಮಾರು 13 ಕಿ.ಮೀ ದೂರದ ಕುಂತಿ ಬೆಟ್ಟದ ಬಳಿ ಕರೆದೊಯ್ದನು. ಅಲ್ಲಿಗೆ ಬಂದ ನಂತರ ಕೂಡ ಇಬ್ಬರೂ ಮತ್ತೆ ಜಗಳವಾಗಿದೆ. ಈ ವೇಳೆ ತೇಜಸ್ ಅವನ ಬ್ಯಾಗಿನಲ್ಲಿದ್ದ ಚಾಕು ತೆಗೆದು ಅವಳ ಕತ್ತು ಸೀಳಿದ್ದಾನೆ.
ಘಟನೆ ನಡೆದ ಕೂಡಲೇ ವ್ಯಕ್ತಿ ಗಾಯಗೊಂಡ ಯುವತಿಯನ್ನು ಬಿಟ್ಟು ತನ್ನ ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ಥಳೀಯ ಕೆಲವರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು,ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 ರ ಅಡಿಯಲ್ಲಿ ಆರೋಪಿ ತೇಜಸ್ ವಿರುದ್ಧ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ.