ರಾಜ್ಯ

ಬೆಂಗಳೂರು ಕಂಬಳಕ್ಕೆ ಬ್ರಿಜ್ ಭೂಷಣ್ ಸಿಂಗ್ ಬರುವುದಿಲ್ಲ: ಕಂಬಳ ಸಮಿತಿ ಅಧ್ಯಕ್ಷ ಶಾಸಕ ಅಶೋಕ್‌ ರೈ ಹೇಳಿದ್ದೇನು?

Sumana Upadhyaya

ಬೆಂಗಳೂರು: ಕರಾವಳಿ ಮೂಲದ ಜನಪ್ರಿಯ ಸಾಂಪ್ರದಾಯಿಕ ಕ್ರೀಡೆ ಕಂಬಳ ಇದೇ ಮೊದಲ ಬಾರಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮುಂದಿನ ವಾರಾಂತ್ಯ ಅಂದರೆ ನವೆಂಬರ್ 25 ಮತ್ತು 26ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿರುವ ಕಂಬಳಕ್ಕೆ ಮೂಲತಃ ಕ್ರೀಡಾಪಟುವಾಗಿರುವ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಅವರನ್ನು ಆಯೋಜಕರು ಆಹ್ವಾನಿಸಿ ಆಹ್ವಾನ ಪತ್ರಿಕೆ ಸಹ ಮುದ್ರಣವಾಗಿತ್ತು.

ಸಂಘಟಕರು ನವೆಂಬರ್ 26 ರಂದು ಕುಸ್ತಿಪಟುಗಳ ಅಭಿನಂದನಾ ಸಮಾರಂಭಕ್ಕೆ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಆಹ್ವಾನಿಸಿದ್ದರು. ಕಾರ್ಯಕ್ರಮದ ಅತಿಥಿಗಳ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ ದರ್ಶನ್ ತೂಗುದೀಪ, ಬಿಜೆಪಿ ನಾಯಕ ಅರವಿಂದ ಲಿಂಬಾವಳಿ ಮತ್ತು ಇತರರು ಇದ್ದಾರೆ.

ಮಹಿಳಾ ಕುಸ್ತಿ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವನ್ನು ಬ್ರಿಜ್ ಭೂಷಣ್ ಶರಣ್‌ ಸಿಂಗ್‌ ಎದುರಿಸುತ್ತಿದ್ದು, ದೆಹಲಿಯಲ್ಲಿ ಅವರ ವಿರುದ್ಧ ಮಹಿಳಾ ಕುಸ್ತಿಪಟುಗಳು ವಾರಗಟ್ಟಲೆ ಪ್ರತಿಭಟನೆ ನಡೆಸಿದ್ದು ಬಹಳ ಸುದ್ದಿಯಾಗಿತ್ತು. ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವವರನ್ನು ಕಂಬಳ ಕ್ರೀಡೆಗೆ ಆಹ್ವಾನಿಸುವುದು ಎಷ್ಟು ಸರಿ ಎಂದು ಈ ಬಗ್ಗೆ ತೀವ್ರ ಕಟು ಟೀಕೆ ವ್ಯಕ್ತವಾಗಿತ್ತು. 

ಇದರಿಂದಾಗಿ ಈಗ ಕಂಬಳ ಆಯೋಜಕರು ಬ್ರಿಜ್ ಭೂಷಣ್ ಸಿಂಗ್ ಅವರ ಹೆಸರನ್ನು ಕೈಬಿಟ್ಟಿದೆ. ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಪುತ್ತೂರಿನ ಕಾಂಗ್ರೆಸ್‌ ಶಾಸಕ ಹಾಗೂ ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷ ಅಶೋಕ್‌ ರೈ, ಬ್ರಿಜ್‌ ಭೂಷಣ್‌ ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದಿದ್ದಾರೆ.

ಕಂಬಳ ಒಂದು ಕ್ರೀಡೆ. ಇದು ದೊಡ್ಡ ಕಾರ್ಯಕ್ರಮ. ಇದರಲ್ಲಿ ಕಾಂಗ್ರೆಸ್-ಬಿಜೆಪಿ ಎಂದು ರಾಜಕೀಯ ಇಲ್ಲ. ಬ್ರಿಜ್‌ ಭೂಷಣ್‌ ಆಹ್ವಾನಕ್ಕೆ ಸಿದ್ದಿ ಜನಾಂಗದವರು ಬಂದು ಕೋರಿದ್ದರು. ಆದರೆ, ಅವರು ಮೊನ್ನೆಯೇ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ. ಆಹ್ವಾನ ಪತ್ರಿಕೆಯನ್ನು ನಾವು ಬದಲಿಸುತ್ತೇವೆ ಎಂದು ತಿಳಿಸಿದ್ದಾರೆ. 

ಸಮಿತಿಯು ಬೆಂಗಳೂರಿನಲ್ಲಿ ಮೊದಲ ಬಾರಿಗೆ ಕಂಬಳ ಆಯೋಜಿಸುತ್ತಿದೆ. ಕಂಬಳ ಕಾರ್ಯಕ್ರಮವು ನವೆಂಬರ್ 25 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಉದ್ಘಾಟನೆಗೊಳ್ಳಲಿದೆ. ಎರಡು ದಿನಗಳ ಕಾರ್ಯಕ್ರಮದಲ್ಲಿ ಸುಮಾರು ಆರರಿಂದ ಏಳು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ. 

ಕಂಬಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಧಾನವಾಗಿ ಆಚರಿಸಲಾಗುವ ವಾರ್ಷಿಕ ಹಬ್ಬವಾಗಿದೆ. ಈ ಹಬ್ಬವು ಸಾಂಪ್ರದಾಯಿಕ ಕೋಣಗಳ ಓಟವನ್ನು ಒಳಗೊಂಡಿರುತ್ತದೆ, ಇದು ರಾಜ್ಯದ ರೈತ ಸಮುದಾಯದಲ್ಲಿ ಜನಪ್ರಿಯ ಮತ್ತು ವಿಶಿಷ್ಟ ಕ್ರೀಡೆಯಾಗಿದೆ. ನವೆಂಬರ್ 25 ರಂದು ಬೆಳಗ್ಗೆ ಬೆಂಗಳೂರು ಕಂಬಳ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರು ಉದ್ಘಾಟಿಸಿದರೆ ಸಂಜೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.

SCROLL FOR NEXT