ರಾಜ್ಯ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸುಟ್ಟಗಾಯಗಳಿಂದ ದಾಖಲಾಗುತ್ತಿರುವವರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳ!

Manjula VN

ಬೆಂಗಳೂರು: ವಿದ್ಯುತ್ ಶಾಕ್ ಮತ್ತು ಸಿಲಿಂಡರ್ ಸ್ಫೋಟ ಪ್ರಕರಣಗಳಿಂದಾಗಿ ವಿಕ್ಟೋರಿಯಾ ಆಸ್ಪತ್ರೆಯ ಮಹಾಬೋಧಿ ಸುಟ್ಟಗಾಯಗಳ ಕೇಂದ್ರಕ್ಕೆ ದಾಖಲಾಗುತ್ತಿರುವವ ಸಂಖ್ಯೆಯದಲ್ಲಿ ಹೆಚ್ಚಳವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ವೈಟ್‌ಫೀಲ್ಡ್‌ನಲ್ಲಿ ಆಕಸ್ಮಿಕವಾಗಿ ಫುಟ್‌ಪಾತ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಹಿಳೆ ಮತ್ತು ಆಕೆಯ 9 ತಿಂಗಳ ಮಗು ವಿದ್ಯುತ್ ಶಾಕ್ ನಿಂದಾಗಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಕಲಬುರಗಿಯ 2 ವರ್ಷದ ಮಗು ಬಿಸಿ ಸಾಂಬಾರ್ ಪಾತ್ರೆಗೆ ಬಿದ್ದು, ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದ ಘಟನೆ ವರದಿಯಾಗಿತ್ತು. ಕಳೆದ 5-6 ತಿಂಗಳುಗಳಲ್ಲಿ ಇಂತಹ ಪ್ರಕರಣಗಳಲ್ಲಿ ಏರಿಕೆಗಳು ಕಂಡು ಬರುತ್ತಲೇ ಇವೆ.

ವಿಕ್ಟೋರಿಯಾ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಮತ್ತು ಸುಟ್ಟಗಾಯಗಳ ವಿಭಾಗದ ಮುಖ್ಯಸ್ಥ ಡಾ.ರಮೇಶ್ ಟಿ ಅವರು ಮಾತನಾಡಿ, ಕಳೆದ ಕೆಲವು ತಿಂಗಳುಗಳಲ್ಲಿ ಆಸ್ಪತ್ರೆಯಲ್ಲಿ ಪ್ರತಿ ವಾರ 4-5 ವಿದ್ಯುತ್ ಶಾಕ್ ನಿಂದಾಗಿ ಗಾಯಗೊಂಡಿರುವವರು ದಾಖಲಾಗುತ್ತಿರುವುದು ಕಂಡುಬರುತ್ತಿವೆ. ಅದೇ ರೀತಿ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಕುಟುಂಬಗಳು ಗಾಯಗೊಂಡಿರುವ ಪ್ರಕರಣಗಳು ಕೂಡ ದಾಖಲಾಗುತ್ತಿರುವುದು ಸಾಮಾನ್ಯವಾಗಿ ಹೋಗಿದೆ ಎಂದು ಹೇಳಿದ್ದಾರೆ.'

ಕಲಬುರಗಿಯ ಬಾಲಕಿಗೆ ಶೇ.40 ರಷ್ಟು ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಗಿದೆ, ಆದರೆ, ದಾಖಲಾದ ಕೆಲವೇ ಗಂಟೆಗಳಲ್ಲಿ ಮಗು ಸಾವನ್ನಪ್ಪಿತು. ವಿದ್ಯುತ್ ಶಾಕ್ ನಿಂದ ಕಾರ್ಮಿಕರು ಹೆಚ್ಚು ಗಾಯಗೊಳ್ಳುತ್ತಿರುವುದು ಕಂಡು ಬರುತ್ತಿದೆ. ಸೂಕ್ತ ಸಲಕರಣೆಗಳಿಲ್ಲದೆ ಕೆಲಸ ಮಾಡುವ ಹಿನ್ನೆಲೆಯಲ್ಲಿ ಆಕಸ್ಮಿಕವಾಗಿ ಗಾಯಗೊಳ್ಳುತ್ತಿದ್ದಾರೆಂದು ತಿಳಿಸಿದರು.

ವಿಕ್ಟೋರಿಯಾ ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ (ಚರ್ಮದ) ನಾಗರಾಜ್ ಬಿಎನ್ ಅವರು ಮಾತನಾಡಿ, ಇಂತಹ ಪ್ರಕರಣಗಳು ಹೆಚ್ಚುತ್ತಿರುವ ನಡುವಲ್ಲೇ ಜನರು ಚರ್ಮದಾನದ ಬಗ್ಗೆ ವಿಚಾರಿಸುತ್ತಿದ್ದಾರೆ. ಪ್ರತೀ ತಿಂಗಳೂ 40-50 ಮಂದಿ ಚರ್ಮದಾನದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಆದರೆ, ದೇಹ ವಿಕಾರವಾಗುವ ಹಿನ್ನೆಲೆಯಲ್ಲಿ ಚರ್ಮದಾನಕ್ಕೆ ಯಾವುದೇ ಕುಟುಂಬಗಳೂ ಮುಂದೆ ಬರುತ್ತಿಲ್ಲ. ಸಾಮಾನ್ಯವಾಗಿ ತೊಡೆ ಮತ್ತು ಹಿಂಭಾಗದಿಂದ ಚರ್ಮವನ್ನು ತೆಗೆದುಕೊಳ್ಳಲಾಗುತ್ತದೆ. ಒಬ್ಬ ವ್ಯಕ್ತಿ ಸತ್ತ 6 ಗಂಟೆಗಳ ಒಳಗೆ ಚರ್ಮವನ್ನು ತೆಗೆಯಬೇಕು. ಇದು ಸರಳ ಪ್ರಕ್ರಿಯೆಯಾಗಿದ್ದು, 30 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ಹೇಳಿದರು.

SCROLL FOR NEXT