ರಾಜ್ಯ

7ನೇ ವೇತನ ಆಯೋಗದ ಸಮಿತಿಗೆ ಬೇಡಿಕೆ ಸಲ್ಲಿಸಿದ ರಾಜ್ಯ ಸರ್ಕಾರಿ ಸಚಿವಾಲಯದ ನೌಕರರ ಸಂಘ

Vishwanath S

ಬೆಂಗಳೂರು: ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ 7ನೇ ವೇತನ ಆಯೋಗಕ್ಕೆ ರಾಜ್ಯ ಸರ್ಕಾರಿ ಸಚಿವಾಲಯದ ನೌಕರರ ಸಂಘವು ಮನವಿ ಸಲ್ಲಿಸಿದೆ. 

ನಿವೃತ್ತ ಐಎಎಸ್ ಅಧಿಕಾರಿ ಪಿಬಿ ರಾಮಮೂರ್ತಿ, ನಿವೃತ್ತ ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯ ಪ್ರಧಾನ ನಿರ್ದೇಶಕ ಶ್ರೀಕಾಂತ್ ಬಿ ವನಹಳ್ಳಿ ಮತ್ತು ಐಎಎಸ್ ಅಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸದಸ್ಯ-ಕಾರ್ಯದರ್ಶಿಗಳಾಗಿದ್ದು ಮಾಜಿ ಮುಖ್ಯ ಕಾರ್ಯದರ್ಶಿ ಕೆ ಸುಧಾಕರ್ ರಾವ್ ಅವರು ಆಯೋಗದ ನೇತೃತ್ವ ವಹಿಸಿದ್ದಾರೆ. 

ಸಂಘದ ಕೆಲವು ಪ್ರಮುಖ ಬೇಡಿಕೆಗಳೆಂದರೆ ಕನಿಷ್ಠ ವೇತನವನ್ನು ಈಗಿರುವ 17,000 ರೂ.ಗಳಿಂದ 35,000 ರೂ.ಗೆ ಹೆಚ್ಚಿಸುವುದು. ಕೇಂದ್ರ ಸರ್ಕಾರದಂತೆಯೇ ವಾರದಲ್ಲಿ ಐದು ಕೆಲಸದ ದಿನಗಳು, ಸೆಕ್ರೆಟರಿಯೇಟ್ ನೌಕರರಿಗೆ ಪ್ರತಿ ವರ್ಷ ಶೇಕಡ 5ರಷ್ಟು ಹೆಚ್ಚಳ, ಅಧಿವೇಶನ ಭತ್ಯೆ 500 ರಿಂದ 1000 ರೂಪಾಯಿಗೆ ಹೆಚ್ಚಳ. ಬಂಚಿಂಗ್ ಸಿಸ್ಟಮ್ ಅನ್ನು ಕೈಬಿಟ್ಟು ಮತ್ತು ಹಿರಿತನದ ಆಧಾರದ ಮೇಲೆ ವೇತನ ಶ್ರೇಣಿಯನ್ನು ನಿಗದಿಪಡಿಸಬೇಕು ಎಂದು ಒತ್ತಾಯ ಮಾಡಿದೆ.

ರಾಜ್ಯ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಕೆಲವು ಶಿಫಾರಸುಗಳೆಂದರೆ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳಿಗೆ ಸಾರಿಗೆ ಭತ್ಯೆ ಮತ್ತು ತುಟ್ಟಿ ಭತ್ಯೆ ಕನಿಷ್ಠ 2,800 ರೂಪಾಯಿಗಳಿಗೆ ನಿಗದಿಪಡಿಸಲು ಕೇಳಿದೆ. 

"ಕೇಂದ್ರ ಸರ್ಕಾರದಲ್ಲಿ 20 ವರ್ಷಗಳ ನಿರಂತರ ಸೇವೆಯನ್ನು ಪೂರ್ಣಗೊಳಿಸಿದವರು ಪೂರ್ಣ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಅದೇ ರೀತಿ ರಾಜ್ಯ ಸರ್ಕಾರಿ ನೌಕರರಿಗೂ ನೀಡಬೇಕು ಎಂದು ಒತ್ತಾಯ ಮಾಡಲಾಗಿದೆ. 

ಸ್ವಯಂ ನಿವೃತ್ತಿಗಾಗಿ ಕನಿಷ್ಠ ಸೇವಾವಧಿಯನ್ನು ಕಡಿತಗೊಳಿಸುವುದು, ಕನಿಷ್ಠ ಪಿಂಚಣಿ ಮೊತ್ತವನ್ನು ಹೆಚ್ಚಿಸುವುದು ಮತ್ತು ಪೂರ್ಣ ಪಿಂಚಣಿ ಪಡೆಯಲು ನಿಗದಿತ ಸೇವಾವಧಿಯನ್ನು 30 ವರ್ಷದಿಂದ 20 ವರ್ಷಕ್ಕೆ ಇಳಿಸುವುದು ಇತರೆ ಬೇಡಿಕೆಗಳಾಗಿವೆ. ನಿವೃತ್ತ ನೌಕರರಿಗೂ ವೈದ್ಯಕೀಯ ಸೌಲಭ್ಯಗಳು ನೀಡಬೇಕು ಎಂದು ಸಂಘವು ಮನವಿ ಮಾಡಿದೆ.

SCROLL FOR NEXT