ರಾಜ್ಯ

ದೆವ್ವ ಯಾವಾಗ ದೇವರಾಯ್ತು ಗೊತ್ತಿಲ್ಲ, ಮಹಿಷಾ ದಸರಾ ಆಚರಣೆ ವಿರೋಧಿಸಿ ಅ.13 ರಂದು ಚಾಮುಂಡಿ ಬೆಟ್ಟ ಚಲೋ ಜಾಥಾ: ಪ್ರತಾಪ್ ಸಿಂಹ

Sumana Upadhyaya

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆ ವಿರೋಧಿಸಿ ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟ ಚಲೋ ಜಾಥಾ ನಡೆಸಲಾಗುವುದು. ಇದರಲ್ಲಿ 5 ಸಾವಿರ‌ ನಾಗರಿಕರು ಪಾಲ್ಗೊಳ್ಳುತ್ತಾರೆ ಎಂದು ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟಿಪ್ಪು ಹೈದರಾಲಿ ಕಾಲ ಬಿಟ್ಟರೆ 414 ವರ್ಷದಿಂದ ನಿರಂತರವಾಗಿ ಮೈಸೂರು ದಸರಾ ನಡೆದುಕೊಂಡು ಬರುತ್ತಿದೆ. ಮೈಸೂರು ಜನರಿಗೆ ದಸರಾ ಅಂದ್ರೆ ಏನು, ನವರಾತ್ರಿ ಅಂದ್ರೆ ಏನು ಅಂತ ಗೊತ್ತು. 2015-16 ರಲ್ಲಿ ಮಹಿಷ ದಸರಾ ಎನ್ನುವ ಅಸಹ್ಯ ಹುಟ್ಟುಹಾಕಿದ್ದಾರೆ.

ಆಗ ಇದ್ದವರು ಉದಾಸೀನ ತೋರಿದರು. ಚಾಮುಂಡಿ ಬೆಟ್ಟಕ್ಕೆ ಹೋಗಿ ದೆವ್ವವನ್ನ ದೇವರು ಅಂತ, ದೇವರನ್ನು ದೆವ್ವ ಅಂತ ಹೇಳುವ ಕೆಲಸ ನಡೆಯಿತು. ನಂತರ ಮೆರವಣಿಗೆ ಮಾಡಲಾಯಿತು. ದೆವ್ವ ಯಾವಾಗ ದೇವರಾಯ್ತು ಗೊತ್ತಿಲ್ಲ, ಮಹಿಷಾ ದಸರ ಆಚರಣೆಗೆ ಬಿಡುವುದಿಲ್ಲ, ಆಗಿನ ಸಿದ್ದರಾಮಯ್ಯ ಸರ್ಕಾರ ಅದನ್ನು ನಿಲ್ಲಿಸಲಿಲ್ಲ. ಇಲ್ಲಿ ಭಕ್ತರ ಭಾವನೆಗೆ ನೋವಾಗುವ ಅಸಹ್ಯವನ್ನು ನಿಲ್ಲಿಸುವ ಮನವಿಗೆ ಸಚಿವ ಸೋಮಣ್ಣ ಸ್ಪಂದಿಸಿ ನಿಲ್ಲಿಸಲು ನಾಂದಿ ಹಾಡಿದರು. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರದಲ್ಲಿ ಇಂತಹ ಅಸಹ್ಯವನ್ನು ಮಟ್ಟ ಹಾಕುವ ಕೆಲಸ ಆಗಿದೆ. ಈಗ ಸಿದ್ದರಾಮಯ್ಯ ಸರ್ಕಾರ ಬಂದಾಗ ಅವರು ಮತ್ತೆ ಹೆಚ್ಚಿಕೊಂಡಿದ್ದಾರೆ ಎಂದು ಆಕ್ರೋಶ ಹೊರಹಾಕಿದರು. 

ಮೈಸೂರಿನ ನಾಗರಿಕರು ಪಾಲ್ಗೊಳ್ಳಿ: ಚಾಮುಂಡಿ ಬೆಟ್ಟದಲ್ಲಿ ಮಹಿಷಾ ಆಚರಣೆ ಮಾಡುವ ಮಾತು ಆಡುತ್ತಿದ್ದಾರೆ. ಇದನ್ನ ತಡೆಯುವ ನಿಟ್ಟಿನಲ್ಲಿ ಅಕ್ಟೋಬರ್ 13 ರಂದು ಚಾಮುಂಡಿ ಬೆಟ್ಟ ಚಲೋ ಜಾಥಾ ನಡೆಸುತ್ತೇವೆ. ಚಾಮುಂಡಿ ಬೆಟ್ಟದ ಪಾದ ಹಾಗೂ ವಿಶ್ವವಿದ್ಯಾಲಯದ ಆವರಣದಿಂದ ಜನ ತೆರಳುತ್ತಾರೆ. ಚಾಮುಂಡಿ ಬೆಟ್ಟಕ್ಕೆ ತೆರಳಿ, ದೇವಿಗೆ ಪೂಜೆ ಸಲ್ಲಿಸಿ ದಿನವಿಡೀ ಕಾರ್ಯಕ್ರಮ ನಡೆಸುತ್ತೇವೆ. ಜಿಲ್ಲಾಧಿಕಾರಿ ಹಾಗು ನಗರ ಪೊಲೀಸ್ ಕಮಿಷನರ್‌ ಬಳಿ ತೆರಳಿ ಮಹಿಷಾ ದಸರಾಗೆ ಅನುಮತಿ ನೀಡದಂತೆ ಮನವಿ ಮಾಡುತ್ತೇವೆ.

ಇದು ಭಾರತೀಯ ಜನತಾ ಪಕ್ಷದ ಕಾರ್ಯಕ್ರಮ ಅಲ್ಲ. ಮತ್ತೆ ಮಹಿಷಾ ದಸರಾ ತಡೆಗಟ್ಟುವ ಕಾರ್ಯಕ್ರಮ. ಇದರಲ್ಲಿ ಮೈಸೂರಿನ ಎಲ್ಲಾ ಪ್ರಜ್ಞಾವಂತ ನಾಗರಿಕರು ಭಾಗಿಯಾಗಬೇಕು. ಬಹುಸಂಖ್ಯಾತರ ಭಾವನೆ ರಕ್ಷಣೆ ಮಾಡುವ ಕೆಲಸ ಮಾಡೊಣ. ಇದು ಬಿಜೆಪಿ ಜಿಲ್ಲಾಧ್ಯಕ್ಷ, ಶಾಸಕ ಶ್ರೀವತ್ಸ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. 

SCROLL FOR NEXT