ಶಿವಮೊಗ್ಗ: ಗಲಭೆ ಪೀಡಿತ ಶಿವಮೊಗ್ಗದ ರಾಗಿಗುಡ್ಡದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದ ಹಿಂದೂ ಕಾರ್ಯಕರ್ತ ಅರುಣ್ ಕುಮಾರ್ ಪುತ್ತಿಲ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಕಳೆದ ವಾರ ಜಿಲ್ಲೆಯ ರಾಗಿಗುಡ್ಡ ಪ್ರದೇಶದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಲೆ ಉಂಟಾಗಿದ್ದ ಹಿಂಸಾಚಾರದ ಸಂತ್ರಸ್ತರನ್ನು ಭೇಟಿ ಮಾಡಿದ ನಂತರ, ದಕ್ಷಿಣ ಕನ್ನಡ ಜಿಲ್ಲೆಯ ಖ್ಯಾತ ಹಿಂದೂ ಕಾರ್ಯಕರ್ತ ಅರುಣ್ ಕುಮಾರ್ ಪುತ್ತಿಲ ಅವರು ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.
ಮೆರವಣಿಗೆಯಲ್ಲಿ ಕತ್ತಿ ಝಳಪಿಸಲು ರಾಜ್ಯ ಸರ್ಕಾರವೇ ಅನುಮತಿ ನೀಡಿದೆ ಎಂದು ಪುತ್ತಿಲ ಆರೋಪಿಸಿದ್ದಾರೆ.
'ಅವರಿಗೆ ಯಾವ ರೀತಿಯ ಬೆಂಬಲ ಸಿಗುತ್ತಿದೆ ಎಂಬುದನ್ನು ನೋಡಬಹುದು. ಹಿಂದೂಗಳ ಮೇಲಿನ ದಾಳಿಗೆ ಸರ್ಕಾರ ಬೆಂಬಲ ನೀಡುತ್ತಿದೆ. ಹಿಂದೂಗಳು ಮನೆಯಲ್ಲಿ ತಲ್ವಾರ್ ಇಟ್ಟುಕೊಳ್ಳಬೇಕು. ನಮ್ಮ ಸಮುದಾಯದ ಬಳಿಯೂ ಆಯುಧಗಳು ಮತ್ತು ಕತ್ತಿಗಳಿವೆ. ನವರಾತ್ರಿಯ ಸಂದರ್ಭದಲ್ಲಿ ಆಯುಧಗಳನ್ನು ಪೂಜಿಸಲಾಗುತ್ತದೆ. ಅಂದು ಪ್ರತಿ ಮನೆಯಲ್ಲೂ ಆಯುಧ ಪೂಜೆಯನ್ನು ನೆರವೇರಿಸಬೇಕು. ಜನರು ಸ್ಕ್ರೂಡ್ರೈವರ್, ಸ್ಪ್ಯಾನರ್ಗಳನ್ನು ಪೂಜಿಸುವುದನ್ನು ಬಿಟ್ಟು ಕತ್ತಿಗಳನ್ನು ಪೂಜಿಸಲು ಪ್ರಾರಂಭಿಸಬೇಕು' ಎಂದು ಅವರು ಹೇಳಿದರು.
ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಅರುಣ್ ಕುಮಾರ್ ಪುತ್ತಿಲ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: 2024 ಲೋಕಸಭಾ ಚುನಾವಣೆ ಮೇಲೆ ಅರುಣ್ ಕುಮಾರ್ ಪುತ್ತಿಲ ಕಣ್ಣು; ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಟೀಲ್ ಗೆ ಹೊಸ ಚಿಂತೆ!
ಪುತ್ತಿಲ ಮಾತನಾಡಿ, ಕಾಂಗ್ರೆಸ್ ಸರ್ಕಾರ ಮತ ಸೆಳೆಯಲು ಮೂಲಭೂತ ಶಕ್ತಿಗಳಿಗೆ ಬೆಂಬಲ ನೀಡುತ್ತಿದೆ. ಶಿವಮೊಗ್ಗ ಹಿಂಸಾಚಾರವು ಪೂರ್ವ ಯೋಜಿತ ಕೃತ್ಯವಾಗಿದೆ. ಈ ಪ್ರದೇಶದಲ್ಲಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಹಿಂದೂ ಸಮುದಾಯಕ್ಕೆ ಬೆದರಿಕೆ ಹಾಕುವ ಉದ್ದೇಶದಿಂದ ಮೂಲಭೂತ ಶಕ್ತಿಗಳು ಈ ಕೃತ್ಯವನ್ನು ಆಶ್ರಯಿಸಿವೆ ಎಂದು ಆರೋಪಿಸಿದರು.
ಪುತ್ತಿಲ ಅವರು ಬಿಜೆಪಿ ನಾಯಕರಾಗಿದ್ದರು ಮತ್ತು ಟಿಕೆಟ್ ನಿರಾಕರಿಸಿದ ನಂತರ ಅವರು ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎರಡನೇ ಅತಿ ಹೆಚ್ಚು ಮತಗಳನ್ನು ಪಡೆದಿದ್ದರು.