ರಾಜ್ಯ

ವಿಜಯನಗರ: 2 ಟಿಪ್ಪರ್-ಕ್ರೂಸರ್ ನಡುವೆ ಭೀಕರ ಅಪಘಾತ, 7 ಮಂದಿ ದುರ್ಮರಣ

Vishwanath S

ವಿಜಯನಗರ: ಎರಡು ಟಿಪ್ಪರ್ ಮತ್ತು ಕ್ರೂಸರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ  7 ಜನ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹೊಸಪೇಟೆ ಹೊರವಲಯದಲ್ಲಿ ನಡೆದಿದೆ. 

ಮೃತರನ್ನು ಭೀಮಲಿಂಗ, ಕೆಂಚವ್ವ, ಉಮಾ, ಭಾಗ್ಯ, ಗೋಣಿಬಸಪ್ಪ, ಅನಿಲ್ ಮತ್ತು ಯುವರಾಜ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಹೊಸಪೇಟೆಯ ಉಕ್ಕಡಕೇರಿಯವರು ಎಂದು ಪೊಲೀಸರು ತಿಳಿಸಿದ್ದಾರೆ.

ಟಿಪ್ಪರ್ ಆಕ್ಸಲ್ ಕಟ್ ಆಗಿ ಭೀಕರ ದುರಂತ ಸಂಭವಿಸಿದೆ. ಇನ್ನು ಅಪಘಾತದಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. 

ಹೊಸಪೇಟೆ ನಗರದ ಹೊರವಲಯದ ಸುರಂಗದ ಬಳಿ ಎರಡು ಮೈನಿಂಗ್‌ ಟಿಪ್ಪರ್ ಲಾರಿಗಳು ಹಾಗೂ ಕ್ರೂಸರ್‌ ನಡುವೆ ಭೀಕರ ಅಪಘಾತ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಕ್ರೂಸರ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಮೃತದೇಹಗಳನ್ನು ಹೊರತೆಗೆಯಲು ಹರಸಾಹಸ ಪಡೆಯಬೇಕಾಯಿತು. ಅಪಘಾತದಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗೋಣಿಬಸವೇಶ್ವರ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಹೊಸಪೇಟೆ, ಮರಿಯಮ್ಮನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

SCROLL FOR NEXT