ರಾಜ್ಯ

ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಎಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ; 10 ದಿನಗಳಲ್ಲಿ ಮೂರು ಬಲಿ

Shilpa D

ಬೆಂಗಳೂರು: ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿ  ಸಾವನ್ನಪ್ಪಿರುವ ಘಟನೆ ನಡೆದಿದೆ. ಯಶವಂತಪುರ ಗಾರೆಪ್ಪನ ಪಾಳ್ಯ ರಸ್ತೆ ಮಾರ್ಗವಾಗಿ ಹೋಗುತ್ತಿದ್ದ ಬಸ್​ ಹೂವಿನ ಮಾರ್ಕೆಟ್ ಸಮೀಪ ಹಿಂಭಾಗದಿಂದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ.

ಗಂಗಾಧರ್ (21) ಮೃತ ದುರ್ದೈವಿ. ಹೆಚ್​ಎಎಲ್​ಗೆ ಇಂಟರ್ನಿಶಿಫ್ ಸರ್ಟಿಫಿಕೇಟ್ ತರಲು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಗಂಗಾಧರ್​ಗೆ ಹೂವಿನ ಮಾರ್ಕೆಟ್ ಸಮೀಪ ಹಿಂಬಂದಿಯಿಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಹಿಂಬದಿ ಚಕ್ರ ಹರಿದು ಗಂಗಾಧರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಯಶವಂತಪುರ ಸಂಚಾರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಅಪಘಾತ ಎಸಗಿದ್ದ ಬಿಎಂಟಿಸಿ ಬಸ್ ಚಾಲಕನಿಗೆ ಠಾಣೆಗೆ ಬರುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ, ವಿದ್ಯಾರ್ಥಿ ಮೃತದೇಹ ಮರಣೋತ್ತರ ಪರೀಕ್ಷೆಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ರವಾನಿಸಲಾಗಿದೆ.

ಕಳೆದ 10 ದಿನಗಳ ಅಂತರದಲ್ಲಿ ಬಿಎಂಟಿಸಿ ಬಸ್​ ಅಪಘಾತದಲ್ಲಿ ಒಟ್ಟು ಮೂವರ ಬಲಿಯಾಗಿದ್ದಾರೆ. ಅಕ್ಟೋಬರ್ 5 ರಂದು ಸಂಜೆ 5 ಗಂಟೆ ಸುಮಾರಿಗೆ ಓವರ್ ಟೇಕ್ ಮಾಡುವ ವೇಳೆ ಬಿಎಂಟಿಸಿಗೆ ಡಿಕ್ಕಿ ಹೊಡೆದ ಆ್ಯಕ್ಟೀವಾ ಬೈಕ್ ಚಾಲಕ ಭರತ್ ರೆಡ್ಡಿ (23) ಸ್ಥಳದಲ್ಲೇ ಸಾವನ್ನಪ್ಪಿದ್ದನು. ಅಟ್ಟೂರಿನ ಬಳಿಯ ಮದರ್ ಡೈರಿ ಬಳಿ ನಡೆದಿತ್ತು.

SCROLL FOR NEXT