ರಾಜ್ಯ

ದಸರಾ ಉತ್ಸವ: ಪಂಡಿತ್ ರಾಜೀವ್ ತಾರಾನಾಥ್ ಕಾರ್ಯಕ್ರಮ ನಿಗದಿ: ಅ.21 ಕ್ಕೆ ಕಾರ್ಯಕ್ರಮ 

Srinivas Rao BV

ಮೈಸೂರು: ದಸರಾ ಉತ್ಸವದಲ್ಲಿ ಸರೋದ್ ವಾದಕ  ಪಂಡಿತ್ ರಾಜೀವ್ ಕಾರ್ಯಕ್ರಮದ ವಿಷಯವಾಗಿ ಹಲವು ಗೊಂದಲ, ಆರೋಪಗಳು ಕೇಳಿಬಂದಿದ್ದವು. ಈಗ ಜಿಲ್ಲಾ ಪಂಚಾಯಿತಿ ಸಿಇಒ ಗಾಯತ್ರಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಅನಾರೋಗ್ಯ ಹಿನ್ನೆಲೆ ಕಾರ್ಯಕ್ರಮಕ್ಕೆ ರಾಜೀವ್ ತಾರಾನಾಥ್ ಒಪ್ಪಿರಲಿಲ್ಲ. ಇದೀಗ ಕಾರ್ಯಕ್ರಮ ನೀಡಲು ಪಂಡಿತ್ ರಾಜೀವ್ ತಾರಾನಾಥ್ ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ. 

ಇನ್ನು ಪಂಡಿತ್ ರಾಜೀವ್ ತಾರಾನಾಥ ಅವರಿಗೆ ದಸರಾ ಉತ್ಸವದಲ್ಲಿ ಕಾರ್ಯಕ್ರಮ ನೀಡಲು ಆಹ್ವಾನಿಸಿದ್ದ ಅಧಿಕಾರಿಗಳು ಕಮಿಷನ್ ಬೇಡಿಕೆ ಇಟ್ಟಿದ್ದಾರೆ, ಸಂಭಾವನೆಗಿಂತ 3 ಲಕ್ಷ ರೂ. ಹೆಚ್ಚು ನೀಡಲಾಗುತ್ತದೆ. ಹೆಚ್ಚುವರಿಯಾಗಿ ಜಮೆಯಾಗಿರುವ 3 ಲಕ್ಷ ರೂ. ಹಣವನ್ನು ನಮಗೆ ವಾಪಾಸ್ ನೀಡಬೇಕು ಎಂದು ಅಧಿಕಾರಿಗಳು ಕೇಳಿದ್ದರು ಇದಕ್ಕೆ ಪಂಡಿತ್ ರಾಜೀವ್ ತಾರಾನಾಥ್ ಅವರು ಇದಕ್ಕೆ ನಿರಾಕರಿಸಿದ್ದ ಹಿನ್ನೆಲೆಯಲ್ಲಿ ಅವರ ಹೆಸರನ್ನು ಕೈಬಿಡಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಈ ಆರೋಪದ ಬಗ್ಗೆ ಮಾಹಿತಿ ಪಡೆಯಲು ಮೈಸೂರು ಜಿಲ್ಲಾಧಿಕಾರಿ ಅಧಿಕಾರಿಗಳನ್ನು ಪಂಡಿತ್ ತಾರಾನಾಥ್ ಅವರ ಬಳಿ ಕಳುಹಿಸಲಾಗಿತ್ತು. ತಪ್ಪಿತಸ್ಥರ ಮೇಲೆ ತಕ್ಷಣ ಎಫ್​​ಐಆರ್ ದಾಖಲು ಮಾಡುವಂತೆ ಸಚಿವ ಹೆಚ್ ಸಿ ಮಹದೇವಪ್ಪ ಮೌಖಿಕ ಸೂಚನೆ ನೀಡಿದ್ದರು.

ಆರೋಪದ ವಿಷಯವಾಗಿ ಈಗಾಗಲೇ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದ್ದು, ಸಾಂಸ್ಕೃತಿಕ ನಗರಿಯ ಹೆಸರಿಗೆ ಕಳಂಕ ತರುವ ಕೆಲಸ ಯಾರೇ ಮಾಡಿದ್ದರೂ ಅವರ ವಿರುದ್ಧ ಸೂಕ್ತ ತನಿಖೆ ಕೈಗೊಳ್ಳಲಾಗುತ್ತದೆ. ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ. ನಾಡಹಬ್ಬ ದಸರಾದಲ್ಲಿ ಇಂತಹ ಘಟನೆಗಳು ಕಂಡು ಬಂದಲ್ಲಿ ಅದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತನ್ನಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

SCROLL FOR NEXT