ರಾಜ್ಯ

ಬೆಂಗಳೂರಿನಲ್ಲಿ ಮುಂದುವೆರದ ಅಕ್ರಮ ಒತ್ತುವರಿ ಕಾರ್ಯಾಚರಣೆ: 25 ಕೋಟಿ ರೂ ಮೌಲ್ಯದ ಆಸ್ತಿ ಬಿಡಿಎ ವಶಕ್ಕೆ

Srinivasamurthy VN

ಬೆಂಗಳೂರು: ಅಕ್ರಮ ಒತ್ತುವರಿ ವಿರುದ್ಧದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಾರ್ಯಾಚರಣೆ ಮುಂದುವರೆಸಿದ್ದು, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ (Kempegowda Layout) ಸುಮಾರು 25 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಬಿಡಿಎ ಮರು ವಶಪಡಿಸಿಕೊಂಡಿದೆ.

ಮಂಗಳವಾರ ಬೆಳ್ಳಂಬೆಳಗ್ಗೆಯೇ ಬಿಡಿಎ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದು, ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅನಧಿಕೃತವಾಗಿ ತಲೆ ಎತ್ತಿದ್ದ ನಿರ್ಮಾಣಗಳನ್ನು ತೆರವುಗೊಳಿಸಿ ಪ್ರಾಧಿಕಾರದ ಆಸ್ತಿಯನ್ನು ಮರುವಶ ಮಾಡಿಕೊಳ್ಳಲಾಗಿದೆ. ಕೊಡಿಗೇಹಳ್ಳಿ ಗ್ರಾಮದ ಸರ್ವೆ ನಂ. 108ರಲ್ಲಿನ 5 ಎಕರೆ ಪ್ರದೇಶವನ್ನು ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೂಸ್ವಾಧೀನಪಡಿಸಿಕೊಂಡಿದ್ದು, ಈ ಪ್ರದೇಶದ ಪೈಕಿ 3 ಎಕರೆ 35 ಗುಂಟೆಯಲ್ಲಿ ರೆವಿನ್ಯೂ ನಿವೇಶನಗಳನ್ನು ರಚಿಸಲಾಗುತ್ತಿತ್ತು. ಇದಕ್ಕೆ ಸಂಬಂಧಪಟ್ಟಂತೆ ಅನೇಕ ಬಾರಿ ನೋಟೀಸ್​​ಗಳನ್ನು ನೀಡಿದ್ದರೂ ಸಹ ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತಿತ್ತು. 

ಮಂಗಳವಾರ ಬೆಳಿಗ್ಗೆ 3 ಎಕರೆ 35 ಗುಂಟೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣಗೊಂಡಿದ್ದ 7 ಶೆಡ್ ಹಾಗೂ 3 ಕಾಂಕ್ರೀಟ್ ಕಟ್ಟಡವನ್ನು ತೆರವುಗೊಳಿಸಿ, ಪ್ರಾಧಿಕಾರವು ಸುಮಾರು 25 ಕೋಟಿ ರೂ. ಮೌಲ್ಯದ ಆಸ್ತಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಅಲ್ಲದೇ ಅಕ್ರಮ ಎಸಗಿದವರ ವಿರುದ್ಧ ಭೂಕಬಳಿಕೆ ಕೇಸನ್ನು ಸಹ ದಾಖಲಿಸಲಾಗಿದೆ. ಈ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾನ್ಯ ಆಯುಕ್ತರ ನಿರ್ದೇಶನದಂತೆ ಪ್ರಾಧಿಕಾರದ ಆರಕ್ಷಕ ಅಧೀಕ್ಷಕರಾದ ಕೆ ನಂಜುಂಡೇಗೌಡ ಅವರ ನೇತೃತ್ವದಲ್ಲಿ ಪಶ್ಚಿಮ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಅಶೋಕ್, ಸಹಾಯಕ ಕಾರ್ಯಪಾಲಕ ಅಭಿಯಂತರರುಗಳನ್ನೊಳಗೊಂಡಂತೆ ತಾವರೆಕೆರೆಯ ಸ್ಥಳೀಯ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ನಡೆಸಲಾಯಿತು.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಒತ್ತುವರಿ ಮಾಡಲಾಗಿದ್ದ ಸುಮಾರು 5 ಎಕರೆ ಪ್ರದೇಶವನ್ನು ಕೆಲವು ದಿನಗಳ ಹಿಂದಷ್ಟೇ ಬಿಡಿಎ ತೆರವುಗೊಳಿಸಿತ್ತು. ಬೆಂಗಳೂರು ದಕ್ಷಿಣ ತಾಲೂಕು, ಕೆಂಗೇರಿ ಹೋಬಳಿ, ಚಲ್ಲಘಟ್ಟ ಗ್ರಾಮದ ಸರ್ವೆ ನಂ. 4 ಮತ್ತು 8 ಅನ್ನು ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಹಾಗೂ ಉದ್ದೇಶಿತ ಎಂಎಆರ್‌ಗೆ ಭೂಸ್ವಾಧೀನಪಡಿಸಿಕೊಳ್ಳಲಾಗಿತ್ತು.

ಬಿಡಿಎ ಪ್ರಕಟಣೆ
ಒಟ್ಟು ಮೂರು ಎಕರೆ 25 ಗುಂಟಾ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಮುಂಜಾನೆ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮೂರು ಕಾಂಕ್ರೀಟ್ ಕಟ್ಟಡಗಳು ಮತ್ತು 7 ಶೆಡ್‌ಗಳನ್ನು ನೆಲಸಮಗೊಳಿಸಲಾಗಿದೆ ಎಂದು ಬಿಡಿಎ ಅಧಿಕೃತ ಪ್ರಕಟಣೆ ತಿಳಿಸಿದೆ. ಈ ಕುರಿತು ಹಲವು ಬಾರಿ ನೋಟಿಸ್‌ ನೀಡಿದ್ದರೂ ಅನಧಿಕೃತ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹೇಳಿದೆ. ಅಕ್ರಮವಾಗಿ ನಿವೇಶನ ಪಡೆದವರ ವಿರುದ್ಧವೂ ಭೂಕಬಳಿಕೆ ಪ್ರಕರಣ ದಾಖಲಾಗಿದೆ. ತಾವರಕೆರೆ ಸ್ಥಳೀಯ ಪೊಲೀಸರೊಂದಿಗೆ ಕಾರ್ಯಾಚರಣೆಯಲ್ಲಿ ಬಿಡಿಎ ಕಾರ್ಯಪಡೆ ಎಸ್ಪಿ ನಂಜುಡೇಗೌಡ, ಪಶ್ಚಿಮ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಬಗ್ಗಿ ಪಾಲ್ಗೊಂಡಿದ್ದರು.
 

SCROLL FOR NEXT