ಚಿತ್ರದುರ್ಗ: ಹೊಸ ಮೊಬೈಲ್ ಫೋನ್ ಕೊಡಿಸಲು ಅಜ್ಜ ನಿರಾಕರಿಸಿದ ಹಿನ್ನೆಲೆಯಲ್ಲಿ 20 ವರ್ಷದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕೊಳಾಳ್ ಗ್ರಾಮದಲ್ಲಿ ನಡೆದಿದೆ.
ಅಕ್ಟೋಬರ್ 8 ರಂದು ಕೊಳಾಳ್ ಗ್ರಾಮದಲ್ಲಿ 'ಮಹಾಗಣಪತಿ ಶೋಭಾಯಾತ್ರೆ' ಸಮಯದಲ್ಲಿ ಮೃತ ಯಶವಂತ್ ತನ್ನ ಮೊಬೈಲ್ ಫೋನ್ ಕಳೆದುಕೊಂಡಿದ್ದು, ನಂತರ ತನ್ನ ಅಜ್ಜನಿಗೆ ಹೊಸ ಮೊಬೈಲ್ ಕೊಡಿಸುವಂತೆ ಕೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿ: ಬಿಜೆಪಿ ಕಾರ್ಯಕರ್ತನ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಸಾಲ ತೀರಿಸಲಾಗದೆ ಸಾವಿಗೆ ಶರಣು; ಪತ್ನಿಯಿಂದ ದೂರು ದಾಖಲು
ಪೊಲೀಸರ ಪ್ರಕಾರ, ರೈತನಾಗಿರುವ ಯಶವಂತ್ ಅಜ್ಜ, ಈರುಳ್ಳಿ ಬಂದ ಬಳಿಕ ಹೊಸ ಸೆಲ್ ಫೋನ್ ಕೊಡಿಸುವುದಾಗಿ ಭರವಸೆ ನೀಡಿದ್ದರು.
ಆದರೆ, ಕೂಡಲೇ ಹೊಸ ಮೊಬೈಲ್ ಕೊಡಿಸುವಂತೆ ಅಕ್ಟೋಬರ್ 18ರಂದು ಯಶವಂತ ತನ್ನ ಅಜ್ಜನಿಗೆ ಒತ್ತಾಯಿಸಿದ್ದರು. ಆದರೆ ಅಜ್ಜ ನಿರಾಕರಿಸಿದಾಗ ವಿಷ ಸೇವಿಸಿದ್ದಾರೆ. ತಕ್ಷಣ ಯಶವಂತ್ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ ಗುರುವಾರ ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ಸಾಗಿಸುವಾಗ ಯಶವಂತ್ ಮೃತಪಟ್ಟಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಲವು ವರ್ಷಗಳ ಹಿಂದೆಯೇ ತಂದೆ ತೀರಿಕೊಂಡಿದ್ದು, ಯಶವಂತ್ ತನ್ನ ತಾಯಿ ಮತ್ತು ಅಜ್ಜಿಯೊಂದಿಗೆ ಗ್ರಾಮದಲ್ಲಿ ವಾಸಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.