ಮಂಗಳೂರು: ಮಂಗಳೂರಿನ ಪ್ರಸಿದ್ಧ ಮಂಗಳಾದೇವಿ ದೇಗುಲದ ನವರಾತ್ರಿ ಜಾತ್ರೆಗೆ ಬಲಪಂಥೀಯ ಸಂಘಟನೆ ವಿಶ್ವ ಹಿಂದೂ ಪರಿಷತ್(ವಿಎಚ್ ಪಿ) ಹಿಂದೂಯೇತರ ವ್ಯಾಪಾರಿಗಳಿಗೆ ಬಹಿಷ್ಕಾರ ಹಾಕಿದ್ದು, ಅದರ ಬಿಸಿ ಹಿಂದೂ ವ್ಯಾಪಾರಿಗಳಿಗೂ ತಟ್ಟಿದೆ.
ಜಾತ್ರೆ ಆರಂಭವಾಗಿ ಮೂರು ದಿನ ಕಳೆದರೂ ವ್ಯಾಪಾರ ಇನ್ನೂ ಚುರುಕುಗೊಂಡಿಲ್ಲ. ಪ್ರಸ್ತುತ ಅಹಿತಕರ ವಾತಾವರಣವನ್ನು ಗಮನಿಸಿದರೆ, ಉಳಿದ ದಿನಗಳಲ್ಲೂ ಪರಿಸ್ಥಿತಿ ಬದಲಾಗುವ ಯಾವುದೇ ಸಾಧ್ಯತೆ ಇಲ್ಲ ಎಂದು ಅನೇಕ ಮಾರಾಟಗಾರರು ಭಾವಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವ್ಯಾಪಾರದಲ್ಲಿ ಭಾರಿ ಕುಸಿತ ಕಂಡು ಬಂದಿದೆ. ನಾವು ಹಿಂದೆ ಸಾಕಷ್ಟು ಹಿಂದೂಯೇತರ ಗ್ರಾಹಕರನ್ನು ಪಡೆಯುತ್ತಿದ್ದೆವು. ಆದರೆ ಅವರ ಸಂಖ್ಯೆ ಈಗ ಕಡಿಮೆಯಾಗಿದೆ ಎಂದು ಶಿವಮೊಗ್ಗದ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ: ಅಂಗಡಿಗಳಲ್ಲಿ ಕೇಸರಿ ಧ್ವಜ ಕಟ್ಟಿದ ಪ್ರಕರಣ: ವಿಎಚ್ಪಿ ಮುಖಂಡ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲು
ಸಾಮಾನ್ಯವಾಗಿ, ಪಾದರಕ್ಷೆಗಳು, ಉಡುಪುಗಳು, ಅಲಂಕಾರಿಕ ವಸ್ತುಗಳು ಇತ್ಯಾದಿಗಳನ್ನು ಮಾರಾಟ ಮಾಡುವ ಮಳಿಗೆಗಳು ಜನರನ್ನು ಸೆಳೆಯುತ್ತವೆ. ಆದರೆ ಬಹುಪಾಲು ಹಿಂದೂಯೇತರ ಮಾರಾಟಗಾರರು ದೂರ ಉಳಿದಿರುವುದರಿಂದ, ಈ ವಸ್ತುಗಳಿಗೆ ಕೆಲವೇ ಕೆಲವು ಸ್ಟಾಲ್ಗಳಿವೆ, ಇದರಿಂದಾಗಿ ಜಾತ್ರೆ ಹೆಚ್ಚು ಗ್ರಾಹಕರನ್ನು ಸೆಳೆಯುತ್ತಿಲ್ಲ ಎಂದಿದ್ದಾರೆ.
ಫ್ಯಾನ್ಸಿ ಅಂಗಡಿ ನಡೆಸುತ್ತಿರುವ ಹಾವೇರಿ ಜಿಲ್ಲೆಯ ಹಿರೂರಿನ ಸಂಜೀವ್ ಸೇರಿದಂತೆ ಹಲವು ಮಾರಾಟಗಾರರು ಈ ಬಾರಿ ವ್ಯಾಪಾರ ವಹಿವಾಟು ಮಂದವಾಗಿದೆ ಎಂದು ಖಚಿತಪಡಿಸಿದ್ದಾರೆ.