ರಾಜ್ಯ

ಬೆಂಗಳೂರು ಟ್ರಾಫಿಕ್: ದೆಹಲಿ ಮಾದರಿಯ ಪ್ರೀಮಿಯಂ ಬಸ್ ಸೇವೆ ಆರಂಭಿಸಿ, ಎಎಪಿ ಒತ್ತಾಯ

Nagaraja AB

ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ನಿಯಂತ್ರಿಸಲು ದೆಹಲಿ ಮಾದರಿ ಪ್ರೀಮಿಯಂ ಬಸ್ ಸೇವೆಯನ್ನು ರಾಜ್ಯದಲ್ಲಿ ಆರಂಭಿಸಬೇಕು ಎಂದು ಎಎಪಿ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ರಾಜ್ಯದ ಆಪ್ ಹಿರಿಯ ನಾಯಕ ಜಗದೀಶ್ ವಿ ಸೇಡಂ, ದೆಹಲಿ ಮಾದರಿಯನ್ನು ಬೆಂಗಳೂರಿನಲ್ಲಿ ಅನುಕರಿಸಬೇಕು ಎಂದು ಒತ್ತಾಯಿಸಿದ್ದಾರೆ. ಬೆಂಗಳೂರು ನಗರದ ಟ್ರಾಫಿಕ್ ಮತ್ತು ಮಾಲಿನ್ಯ ನಿಯಂತ್ರಣದ ದೃಷ್ಟಿಯಿಂದ ದೆಹಲಿ ಮಾದರಿಯ ಪ್ರೀಮಿಯಂ ಬಸ್‌ಗಳನ್ನು ಬೆಂಗಳೂರಿನಂತಹ ನಗರಗಳಲ್ಲಿ ಪ್ರಾರಂಭಿಸಬೇಕು ಎಂದು ಮನವಿ ಮಾಡಿದ್ದಾರೆ. 

ಮೇಲ್ಮಧ್ಯಮ ವರ್ಗದವರನ್ನು ಸಾರ್ವಜನಿಕ ಸಾರಿಗೆಗೆ ಉತ್ತೇಜಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶುಕ್ರವಾರ ಬಹು ನಿರೀಕ್ಷಿತ 'ಪ್ರೀಮಿಯಂ ಬಸ್ ಅಗ್ರಿಗೇಟರ್ ಪಾಲಿಸಿ 2023'ನ್ನು ಅನುಮೋದಿಸಿದ್ದಾರೆ. ಈ ಯೋಜನೆಯು ದೆಹಲಿಯ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸುತ್ತದೆ ಮತ್ತು ಸಂಚಾರ ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಎಂದು ಅವರು ಪತ್ರದಲ್ಲಿ ತಿಳಿಸಲಾಗಿದೆ.

''ಬಡವರು ಮತ್ತು ಮಧ್ಯಮ ವರ್ಗದವರು ಬಸ್‌ನಲ್ಲಿ ಪ್ರಯಾಣಿಸುತ್ತಾರೆ. ಅಲ್ಲದೇ, ಮೇಲ್ಮಧ್ಯಮ ವರ್ಗದವರು ದಿನನಿತ್ಯ ಬಸ್‌ಗಳನ್ನು ಬಳಸಲು ಉತ್ತೇಜಿಸಲು ರಾಜ್ಯದ ಬೆಂಗಳೂರಿನಂತಹ ನಗರಗಳಲ್ಲಿ ದೆಹಲಿ ಮಾದರಿಯ ಪ್ರೀಮಿಯಂ ಬಸ್‌ಗಳನ್ನು ಪರಿಚಯಿಸಬೇಕು. ಖಾಸಗಿ ವಾಹನಗಳಲ್ಲಿ ಇರುವಂತೆ ಎಸಿ, ವೈಫೈ, ಜಿಪಿಎಸ್, ಸಿಸಿಟಿವಿ ಸೇರಿದಂತೆ ಎಲ್ಲ ರೀತಿಯ ವ್ಯವಸ್ಥೆಗಳೊಂದಿಗೆ ಆಧುನಿಕ ಬಸ್ ಗಳು ಸಂಚರಿಸಲು ಆರಂಭಿಸಿದರೆ ಅನೇಕರು ಖಾಸಗಿ ವಾಹನಗಳನ್ನು ಬಿಟ್ಟು ಸಾರ್ವಜನಿಕ ಬಸ್ ಗಳತ್ತ ಮುಖ ಮಾಡುತ್ತಾರೆ. ಈ ಮೂಲಕ ಟ್ರಾಫಿಕ್, ವಾಯು ಮಾಲಿನ್ಯದಂತಹ ಪ್ರಮುಖ ಸಮಸ್ಯೆಗಳನ್ನು ನಿಯಂತ್ರಣಕ್ಕೆ ತರಬಹುದು ಎಂದು ಅವರು ತಿಳಿಸಿದ್ದಾರೆ.

ಪ್ರೀಮಿಯಂ ಬಸ್‌ಗಳಲ್ಲಿ ಸೀಟು ಕಾಯ್ದಿರಿಸುವಿಕೆ ಮತ್ತು ಪಾವತಿಯನ್ನು  ಆನ್‌ಲೈನ್‌ನಲ್ಲಿ ಮಾಡಬಹುದು. ಸೀಟುಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಬುಕ್ ಮಾಡಬಹುದು, ವ್ಯಕ್ತಿಗಳು ತಮ್ಮ ಸೀಟುಗಳನ್ನು ಏರ್‌ಲೈನ್ ಸೀಟ್‌ಗಳಂತೆ ಆಪ್ ನಲ್ಲಿ ಬುಕ್ ಮಾಡಬಹುದು. ಈ ಬಸ್‌ಗಳು ಆಗಾಗ್ಗೆ ನಿಲ್ಲುವುದಿಲ್ಲ ಮತ್ತು ಪ್ರಯಾಣಿಕರು ತಾವು ಬಯಸಿದ ಸ್ಥಳದಿಂದ ಕರೆದೊಯ್ಯಲಾಗುತ್ತದೆ. ಪ್ರಯಾಣಿಕರು ತಮ್ಮ ಖಾಸಗಿ ವಾಹನಗಳಲ್ಲಿ ಪ್ರಯಾಣಿಸದಂತಹ ಅನುಭವ ನೀಡುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಈ ಬಗ್ಗೆ ವಿಶೇಷ ಗಮನ ಹರಿಸಿ ಬೆಂಗಳೂರು ನಗರದ ಟ್ರಾಫಿಕ್ ಮತ್ತು ಮಾಲಿನ್ಯ ಸಮಸ್ಯೆ ಬಗೆಹರಿಸುತ್ತಾರೆ ಎಂಬ ಸಂಪೂರ್ಣ ಭರವಸೆ ನಮಗಿದೆ ಎಂದು ಜಗದೀಶ್ ಸದಾಂ ಹೇಳಿದ್ದಾರೆ. 

SCROLL FOR NEXT