ರಾಜ್ಯ

ಮೊಬೈಲ್ ಕಳ್ಳತನ ಜಾಲವನ್ನು ಭೇದಿಸಿದ ಪೊಲೀಸರು: 1,037 ಮೊಬೈಲ್ ಗಳು ವಶಕ್ಕೆ

Manjula VN

ಬೆಂಗಳೂರು: ದುಬಾರಿ ಮೌಲ್ಯದ ಮೊಬೈಲ್ ಕಳವು ಮಾಡಿಸಿ ಬಳಿಕ ಹೊರ ರಾಜ್ಯಗಳಲ್ಲಿ ಅವುಗಳನ್ನು ಮಾರಾಟ ಮಾಡುತ್ತಿದ್ದ ಖದೀಮರ ತಂಡದ ನಾಯಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಬನ್ನೇರುಘಟ್ಟ ಠಾಣೆ ಪೊಲೀಸರು ಬಂಧನಕ್ಕಳಪಡಿಸಿದ್ದಾರೆ.

ಆರೋಪಿಗಳನ್ನು ಮೊಹಮ್ಮದ್ ಮಹ್ಮದ್ ಪಾಷಾ ಅಲಿಯಾಸ್ ಆರೀಫ್ ಪಾಷಾ ಹಾಗೂ ಈತನ ಸಹಚರರಾದ ಮೊಹಮದ್ ಉಮರ್, ಐಯಾನ್‌ ಅಲಿಯಾಸ್ ಅಲೀಂ ಪಾಷ ಮತ್ತು ಮೊಹಮದ್‌ ಸಲೀಂ ಎಂದು ಗುರ್ತಿಸಲಾಗಿದೆ. ಆರೋಪಿಗಳಿಂದ ರೂ.2 ಕೋಟಿ ಮೌಲ್ಯದ 1037 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚೆಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಎಎಂಸಿ ಕಾಲೇಜಿನ ಸಮೀಪ ಕದ್ದ ಮೊಬೈಲ್ ಮಾರಾಟಕ್ಕೆ ಆರೀಫ್‌ ಪಾಷ ಹಾಗೂ ಆತನ ಸಹಚರ ಯತ್ನಿಸಿದ್ದಾಗ ಖಚಿತ ಮಾಹಿತಿ ಪಡೆದು ಇನ್‌ಸ್ಪೆಕ್ಟರ್‌ ಸಿ.ಕೃಷ್ಣಕುಮಾರ್‌ ನೇತೃತ್ವದ ತಂಡ ದಾಳಿ ನಡೆಸಿ, ಆರೋಪಿಗಳನ್ನು ಬಂಧನಕ್ಕೊಳಪಡಿಸಿದೆ.

ಆರೀಫ್ ಪಾಷ ವೃತ್ತಿಪರ ಮೊಬೈಲ್ ಕಳ್ಳನಾಗಿದ್ದು, ಈತನ ಮೇಲೆ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. 2016ರಲ್ಲಿ ಮೊಬೈಲ್ ಕಳವು ಪ್ರಕರಣ ಸಂಬಂಧ ಆತನನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಆದರೆ, ಜಾಮೀನು ಪಡೆದು ಹೊರಬಂದ ನಂತರ ಮತ್ತೆ ಆತ ದಂಧೆ ಮುಂದುವರೆಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗೋರಿಪಾಳ್ಯಗ ನಿವಾಸಿಯಾಗಿರುವ ಆರೀಫ್ ಪಾಷಾ ಈ ದಂಧೆಯ ಪ್ರಮುಖ ನಾಯಕನಾಗಿದ್ದು, ಕಳೆದ ಒಂದು ವರ್ಷದಿಂದ ಮೊಬೈಲ್ ಕಳ್ಳತನ ಮಾಡುತ್ತಿದ್ದ. 10,000 ರೂ.ಗಳಿಂದ 1 ಲಕ್ಷ ರೂ. ವರೆಗಿನ ಬೆಲೆಯ ಫೋನ್‌ಗಳನ್ನು ಕದಿಯಲು ನಗರದಾದ್ಯಂತ ಸಹಚರರನ್ನು ನೇಮಿಸಿಕೊಳ್ಳುತ್ತಿದ್ದ.  ಕದ್ದ ಮೊಬೈಲ್‌ಗಳಿಗೆ ತಲಾ ಒಂದಕ್ಕೆ ತನ್ನ ಸಹಚರರಿಗೆ ರೂ.2-3 ಸಾವಿರ ನೀಡಿ ಖರೀದಿಸುತ್ತಿದ್ದ. ಬಳಿಕ ಆ ಮೊಬೈಲ್‌ಗಳನ್ನು ಒಂದೆಡೆ ಸಂಗ್ರಹಿಸಿ ನಂತರ ಕೇರಳ ಮತ್ತು ತಮಿಳುನಾಡಿನ ಮೊಬೈಲ್ ಮಾರಾಟ ದಂಧೆಕೋರರಿಗೆ 6 ರಿಂದ 8 ಸಾವಿರ ರು.ಗಳಿಗೆ ವಿಲೇವಾರಿ ಮಾಡುತ್ತಿದ್ದ.

ಕದ್ದ ಮೊಬೈಲ್‌ಗಳನ್ನು ಬಾಕ್ಸ್‌ಗಳಲ್ಲಿ ತುಂಬಿ ಹೊರ ರಾಜ್ಯಗಳಿಗೆ ಬಸ್‌ಗಳ ಮೂಲಕ ಪಾಷ ಕಳುಹಿಸುತ್ತಿದ್ದ. ಎಲೆಕ್ಟ್ರಿಕಲ್‌ ಬಿಡಿ ಭಾಗಗಳೆಂದು ಆತ ಪಾರ್ಸಲ್‌ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

SCROLL FOR NEXT