ರಾಜ್ಯ

ಕರ್ನಾಟಕದಲ್ಲಿ 45 ಲಕ್ಷ ಅಸಂಘಟಿತ ವಲಯ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಯೋಜನೆ

Sumana Upadhyaya

ಬೆಂಗಳೂರು: ಕರ್ನಾಟಕ ಸರ್ಕಾರವು 45 ಲಕ್ಷಕ್ಕೂ ಹೆಚ್ಚು ಅಪ್ಲಿಕೇಶನ್ ಆಧಾರಿತ ಸಾರಿಗೆ ಮತ್ತು ಆಹಾರ ವಿತರಣಾ ಕಾರ್ಮಿಕರಿಗೆ ಮತ್ತು ಅಸಂಘಟಿತ ವಲಯದ ಇತರ ಉದ್ಯೋಗಿಗಳಿಗೆ ಉದ್ಯೋಗ-ಸಂಬಂಧಿತ ಭದ್ರತೆಗಳನ್ನು ವಿಸ್ತರಿಸಲು ಯೋಜಿಸುತ್ತಿದೆ.

ಅಸಂಘಟಿತ ವಲಯ ಕಾರ್ಮಿಕರ ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣ ಯೋಜನೆಗಳಿಗೆ ಸೂಕ್ತ ಭದ್ರತೆ ಒದಗಿಸುವ ಮೂಲಕ ಸಾಮಾಜಿಕ-ಆರ್ಥಿಕ ದುರ್ಬಲತೆಯನ್ನು ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಈ ನಿರ್ಧಾರ ಪ್ರಕಟಿಸಿದರು. ಚಾಲಕರು, ಕಂಡಕ್ಟರ್‌ಗಳು, ಕ್ಲೀನರ್‌ಗಳು ಮತ್ತು ಮೆಕ್ಯಾನಿಕ್‌ಗಳು ಸೇರಿದಂತೆ ಖಾಸಗಿ ವಲಯದಲ್ಲಿ ಸುಮಾರು 40 ಲಕ್ಷ ಜನರು ಸಾರಿಗೆ ಉದ್ಯಮದಲ್ಲಿ ರಾಜ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ.

ಒಲಾ, ಉಬರ್ ನಂತಹ ಅಪ್ಲಿಕೇಶನ್‌ಗಳಲ್ಲಿ ಕೆಲಸ ಮಾಡುವ ಗಿಗ್ ಕಾರ್ಮಿಕರು ಸುಮಾರು 40 ಲಕ್ಷ ಮಂದಿ ಉದ್ಯೋಗ ಆಧಾರಿತ ಸಾಮಾಜಿಕ ಭದ್ರತೆ ಪ್ರಯೋಜನಗಳನ್ನು ಹೊಂದಿಲ್ಲ.ಆರೋಗ್ಯ, ಶಿಕ್ಷಣಕ್ಕೆ ಮತ್ತು ಆರ್ಥಿಕ ಅಪಾಯ ತಗ್ಗಿಸುವ ಕ್ರಮಗಳನ್ನು ಸುಧಾರಿಸಲು ಅವರಿಗೆ ಪ್ರಯೋಜನಗಳನ್ನು ವಿಸ್ತರಿಸಲು ಸರ್ಕಾರ ಯೋಜಿಸಿದೆ ಎಂದರು. 

ಹೊಸ ವಾಹನ ಖರೀದಿದಾರರಿಗೆ ವಿಧಿಸಲಾಗುವ ಶೇಕಡಾ 5ರಷ್ಟು ಸೆಸ್ ನ್ನು ಬಳಸಿಕೊಳ್ಳುವ ಮೂಲಕ ಖಾಸಗಿ ಸಾರಿಗೆ ಉದ್ಯಮದಲ್ಲಿ ಗಿಗ್ ಕಾರ್ಮಿಕರಿಗೆ ಪ್ರಯೋಜನಗಳನ್ನು ವಿಸ್ತರಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಸಂತೋಷ್ ಲಾಡ್ ಹೇಳಿದರು.

ಹೋಮ್ ಡೆಲಿವರಿ ಸೇವೆಗಳನ್ನು ಒದಗಿಸುವ ಸ್ವಿಗ್ಗಿ ಮತ್ತು ಜೊಮಾಟೊದಂತಹ ಅಪ್ಲಿಕೇಶನ್‌ಗಳಿಗಾಗಿ ಸುಮಾರು ನಾಲ್ಕು ಲಕ್ಷ ಜನರು ಗಿಗ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾ ಉದ್ಯಮದಲ್ಲಿ 20,000 ಕ್ಕೂ ಹೆಚ್ಚು ಕೆಲಸಗಾರರಿದ್ದಾರೆ, ಅವರು ಸಹ ಆರ್ಥಿಕವಾಗಿ ದುರ್ಬಲರಾಗಿರುತ್ತಾರೆ. 

ಈ ಯೋಜನೆಗೆ ಸರ್ಕಾರದಿಂದ ಹಣ ವಿನಿಯೋಗಿಸುವ ಬಗ್ಗೆ ಮಾತನಾಡಿದ ಅವರು, ಭವಿಷ್ಯ ನಿಧಿ ಸ್ಥಾಪಿಸಲು ಇಂತಹ ಕಂಪೆನಿಗಳಿಗೆ ಸೆಸ್ ಪಾವತಿಸಲು ಸೂಚಿಸಲಾಗುವುದು ಎಂದರು. ಸಂಗ್ರಹಿಸಿದ ಮೊತ್ತದೊಂದಿಗೆ ಸರ್ಕಾರದ ಹಣವನ್ನು ಕೂಡ ಸೇರಿಸಲಾಗುತ್ತದೆ ಎಂದರು.

ಸಿನಿಮಾ ಇಂಡಸ್ಟ್ರಿಯಲ್ಲಿ ಕಾರ್ಮಿಕರಿಗೆ ಭದ್ರತೆ ಒದಗಿಸಲು ಸಿನಿಮಾ ಟಿಕೆಟ್‌ನ ಇಂತಿಷ್ಟು ಶೇಕಡಾವನ್ನು ಮೀಸಲಿಟ್ಟು ಅದರಲ್ಲಿ ಕೆಲಸ ಮಾಡುವ ಕಾರ್ಮಿಕರ ಜೀವನ ಭದ್ರತೆಗೆ ನೀಡಲಾಗುವುದು. ಪ್ರತಿ ವರ್ಷ ಐದು ಕೋಟಿ ಸಿನಿಮಾ ಟಿಕೆಟ್‌ಗಳು ಮಾರಾಟವಾಗುತ್ತವೆ ಎಂದು ಸರ್ಕಾರ ಅಂದಾಜಿಸಿದೆ.

ಕಾರ್ಮಿಕರಿಗಾಗಿ ರಾಜ್ಯದ ವಿವಿಧೆಡೆ 50 ಹಾಸಿಗೆಗಳ ಹೈಟೆಕ್ ಆಸ್ಪತ್ರೆ ನಿರ್ಮಿಸುವ ಪ್ರಸ್ತಾವನೆಯನ್ನೂ ಸರ್ಕಾರ ಮುಂದಿಟ್ಟಿದ್ದು, ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಸಚಿವರು ತಿಳಿಸಿದರು.

ಪ್ರಸ್ತುತ, ಇಎಸ್‌ಐ ಆಸ್ಪತ್ರೆಗಳಿಗೆ ಭೇಟಿ ನೀಡುವ ಕಾರ್ಮಿಕರನ್ನು ಹೆಚ್ಚಾಗಿ ಖಾಸಗಿ ಆಸ್ಪತ್ರೆಗಳಿಗೆ ಉಲ್ಲೇಖಿಸಲಾಗುತ್ತದೆ, ಇದರಿಂದ ಆರೋಗ್ಯ ವೆಚ್ಚ ಹೆಚ್ಚಾಗುತ್ತದೆ. ಇಎಸ್‌ಐ ಆಸ್ಪತ್ರೆಗಳಿಗೆ ಸಾಕಷ್ಟು ಮೂಲಸೌಕರ್ಯ ಮತ್ತು ಉಪಕರಣಗಳನ್ನು ಪೂರೈಸಿದರೆ ಪರಿಸ್ಥಿತಿ ಸುಧಾರಿಸುತ್ತದೆ ಎಂದರು.

ರಾಜ್ಯದಲ್ಲಿ ಕಾರ್ಮಿಕ ಕಾರ್ಡ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. 44 ಲಕ್ಷ ಜನರು ಕಾರ್ಮಿಕ ಕಾರ್ಡ್ ಪಡೆದಿದ್ದಾರೆ. ಈಗ ಸುಮಾರು 12 ಲಕ್ಷ ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂದರು.

SCROLL FOR NEXT