ರಾಜ್ಯ

ಬೆಂಗಳೂರು: ಬಸ್, ರೈಲು ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಮೂವರ ಬಂಧನ

Ramyashree GN

ಬೆಂಗಳೂರು: ಬಸ್ ಮತ್ತು ರೈಲು ಪ್ರಯಾಣಿಕರನ್ನು, ಮುಖ್ಯವಾಗಿ ದಿನಗೂಲಿ ಕಾರ್ಮಿಕರು ಮತ್ತು ಕೂಲಿ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಕೈಗೆಟಕುವ ದರದಲ್ಲಿ ಪೂಲ್-ಕ್ಯಾಬ್ ಸೇವೆಗಳನ್ನು ನೀಡುವ ನೆಪದಲ್ಲಿ, ಅವರ ಮೇಲೆ ಹಲ್ಲೆ ಮಾಡಿದ ನಂತರ ಅವರಿಂದ ಬೆಲೆಬಾಳುವ ವಸ್ತುಗಳನ್ನು ದೋಚುತ್ತಿದ್ದರು.

ನಂಜುಂಡ, ಗಿರೀಶ್ ಮತ್ತು ಚಾಲಕ ನವೀನ್ ಕುಮಾರ್ ಎಂಬ ಮೂವರನ್ನು ಪೊಲೀಸರು ಬಂಧಿಸಿದ್ದು, ಇವರು ಕಾರನ್ನು ಬಳಸಿ ನಗರದ ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳ ಬಳಿ ಕಾಯುತ್ತಿದ್ದರು. ಪೂಲ್ ಕ್ಯಾಬ್ ಸೇವೆಗಳನ್ನು ಹುಡುಕುವ ದೈನಂದಿನ ಕೂಲಿ ಕಾರ್ಮಿಕರು ಮತ್ತು ಕಾರ್ಮಿಕರನ್ನು ಗುರಿಯಾಗಿಸಿಕೊಳ್ಳುತ್ತಿದ್ದರು. ಇತರ ಪೂಲ್ ಕ್ಯಾಬ್‌ಗಳು ನೀಡುವ ದರಕ್ಕಿಂತ ಕಡಿಮೆ ದರದ ಆಮಿಷ ಒಡ್ಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನವೀನ್ ಕುಮಾರ್ ಕಾರು ಚಲಾಯಿಸಿದರೆ, ನಂಜುಂಡ ಮತ್ತು ಗಿರೀಶ್ ಪ್ರಯಾಣಿಕರಂತೆ ಪೋಸ್ ನೀಡುತ್ತಿದ್ದರು. ಇವರು ಮಾಗಡಿ ರಸ್ತೆಯ ಉದ್ದಕ್ಕೂ ಪೂಲ್-ಕ್ಯಾಬ್ ಸೇವೆಯನ್ನು ಒದಗಿಸುತ್ತಿದ್ದರು. ಕಡಿಮೆ ದರದ ಆಸೆಗೆ ಬರುವ ಸಂತ್ರಸ್ತರನ್ನು ನಂತರ ಮಾಗಡಿ ರಸ್ತೆಯ ಪ್ರತ್ಯೇಕ ಸ್ಥಳಗಳಿಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಅವರ ಮೇಲೆ ಹಲ್ಲೆ ನಡೆಸಿ, ದರೋಡೆ ಮಾಡಲಾಗುತ್ತಿತ್ತು.

ಆರೋಪಿಗಳು ಮೂವರೂ ಕೆಲ ಸಮಯದಿಂದ ಈ ವಿಧಾನವನ್ನು ಅನುಸರಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಸೆಪ್ಟೆಂಬರ್ 2ರಂದು ಅವರ ಅದೃಷ್ಟ ಕೈಕೊಟ್ಟಿತು. ಈ ಮೂವರು ದಿನಗೂಲಿ ಕಾರ್ಮಿಕನನ್ನು (ಹೆಸರು ಬಹಿರಂಗಪಡಿಸಲಾಗಿಲ್ಲ) ಗುರಿಯಾಗಿಸಿಕೊಂಡು ಹಲ್ಲೆ ನಡೆಸಿ, ದರೋಡೆ ಮಾಡಿ ಕಾಮಾಕ್ಷಿಪಾಳ್ಯದಲ್ಲಿ ಬಿಟ್ಟು ಹೋಗಿದ್ದರು. ಸಂತ್ರಸ್ತನ ದೂರಿನ ಮೇರೆಗೆ ಕಾಮಾಕ್ಷಿಪಾಳ್ಯ ಪೊಲೀಸರು ಬಸ್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳ ಬಳಿ ಬಲೆ ಬೀಸಿ ಮೂವರನ್ನು ಸೆಪ್ಟೆಂಬಪ್ 5 ರಂದು ಬಂಧಿಸಿದ್ದರು.

ಆರೋಪಿಗಳ ಬಳಿ ಮೂರು ಮೊಬೈಲ್ ಫೋನ್‌ಗಳು, ಒಂದು ಚಿನ್ನದ ಕಿವಿಯೋಲೆ, 10,000 ರೂ. ನಗದು ಮತ್ತು ಅಪರಾಧಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 397 (ದರೋಡೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

SCROLL FOR NEXT