ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕೃತವಾಗಿ ವಾಟ್ಸಪ್ ಚಾನೆಲ್ ಆರಂಭಿಸಿದ್ದಾರೆ. ಈ ಮೂಲಕ ಇಡೀ ದೇಶದ ಇತರೆ ರಾಜ್ಯಗಳ ಮುಖ್ಯಮಂತ್ರಿಗಳ ಪೈಕಿ ವಾಟ್ಸಾಪ್ ಚಾನಲ್ ಆರಂಭಿಸಿದವರಲ್ಲಿ ಸಿದ್ದರಾಮಯ್ಯ ಮೊದಲಿಗರಾಗಿದ್ದಾರೆ.
ಕಳೆದ ವಾರ ವಾಟ್ಸಪ್ ಚಾನೆಲ್ ಎಂಬ ಹೊಸ ಆವಿಷ್ಕಾರವನ್ನು ಮೇಟಾ ಕಂಪನಿ (ವಾಟ್ಸಪ್ ಸಂಸ್ಥೆ) ಪರಿಚಯಿಸಿತು. ಸೆಪ್ಟೆಂಬರ್ 12 ರಂದು ಸಿಎಂ ಸಿದ್ದರಾಮಯ್ಯ ಅವರು ಈ ಚಾನಲ್ ಆರಂಭಿಸಿದರು. ಆ ಬಳಿಕ ನಿರಂತರವಾಗಿ ಸಾರ್ವಜನಿಕರು ಚಾನೆಲ್ ಸೇರ್ಪಡೆಗೊಳ್ಳುತ್ತಿದ್ದು, ಸೆಪ್ಟೆಂಬರ್ 19ಕ್ಕೆ 54,000ಕ್ಕೂ ಅಧಿಕ ಮಂದಿ ಈ ಚಾನೆಲ್ ಸೇರ್ಪಡೆಯಾಗಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ https://twitter.com/siddaramaiah ಖಾತೆ ಮೂಲಕ ಟ್ವಿಟರ್ನಲ್ಲಿ, https://www.facebook.com/Siddaramaiah.Official ಖಾತೆ ಮೂಲಕ ಫೇಸ್ಬುಕ್ನಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೇ ಮುಖ್ಯಮಂತ್ರಿಗಳ ಕಛೇರಿ ಸಹ ತನ್ನ ಅಧಿಕೃತ ಖಾತೆ ಮೂಲಕ ಮುಖ್ಯಮಂತ್ರಿಗಳ ಕುರಿತಾದ ಅಪ್ಡೇಟ್ ನೀಡುತ್ತದೆ. ಈಗ ವಾಟ್ಸಪ್ ಚಾನಲ್ ಮೂಲಕ ಸಿದ್ದರಾಮಯ್ಯ ತಮ್ಮ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಜನರನ್ನು ಸುಲಭವಾಗಿ ತಲುಪುತ್ತಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ನೀಡಿರುವ ಮುಖ್ಯಮಂತ್ರಿ, ನಿಮ್ಮ ಮೊಬೈಲ್ನ ಒಂದೇ ಕ್ಲಿಕ್ ನಲ್ಲಿ ನಮ್ಮ ಸರ್ಕಾರದ ಯೋಜನೆಗಳು ಮತ್ತು ಸಾಧನೆಗಳ ಮಾಹಿತಿಯನ್ನು ತಲುಪಿಸುವ ಉದ್ದೇಶದೊಂದಿಗೆ ವಾಟ್ಸ್ಆ್ಯಪ್ ಚಾನಲ್ ಅನ್ನು ಆರಂಭಿಸಿದ್ದೇನೆ. ಈ ಕೆಳಗಿನ ಲಿಂಕ್ ಬಳಸಿ Chief Minister of Karnataka ಚಾನಲ್ ಫಾಲೋ ಮಾಡುವ ಮೂಲಕ ನಮ್ಮೊಂದಿಗೆ ನಿರಂತರ ಸಂಪರ್ಕ ಸಾಧಿಸಬಹುದಾಗಿದೆ ಎಂದು ತಿಳಿಸಿದ್ದಾರೆ.