ರಾಜ್ಯ

ತನ್ನ ವೈಫಲ್ಯ ಮುಚ್ಚಿಹಾಕಲು ಕಾಂಗ್ರೆಸ್ ಕಾವೇರಿ ವಿವಾದವನ್ನು ರಾಜಕೀಯಗೊಳಿಸುತ್ತಿದೆ, ಸರ್ಕಾರ ಮಧ್ಯಂತರ ಅರ್ಜಿ ಸಲ್ಲಿಸಲಿ: ಬೊಮ್ಮಾಯಿ

Sumana Upadhyaya

ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯ ಸರ್ಕಾರ ಕರ್ನಾಟಕದ ಹಿತಾಸಕ್ತಿ ಕಡೆಗಣಿಸಿದರೆ ಮಠಾಧೀಶರು, ರೈತರು, ಬೆಂಗಳೂರಿನ ನಾಗರಿಕರು ದಂಗೆ ಏಳಲಿದ್ದಾರೆ ಎಂದು ಮಾಜಿ ಸಿಎಂ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 

ಕಾವೇರಿ ವಿಚಾರವಾಗಿ ಮುಂದಿನ ಕ್ರಮದ ಕುರಿತು ಕಾವೇರಿ ಜಲಾನಯನ ಜಿಲ್ಲೆಗಳ ಪಕ್ಷದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ, ಸರ್ಕಾರ ಮೊದಲ ದಿನದಿಂದಲೇ ತಪ್ಪು ಮಾಡುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥವಾಗಿ ಪ್ರಕರಣವನ್ನು ಮಂಡಿಸದ ಕಾರಣ ರಾಜ್ಯವು ತಮಿಳು ನಾಡಿಗೆ 7.5 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಬೇಕಾಗಿತ್ತು.

ಇದಾದ ನಂತರವೂ ಕರ್ನಾಟಕದ ಜನತೆಯ ಮುಂದೆ ಸರ್ಕಾರ ತನ್ನ ಕ್ರಮವನ್ನು ಬಹಿರಂಗಪಡಿಸಿಲ್ಲ. ಬಿಜೆಪಿ ಇದನ್ನು ಗಂಭೀರವಾಗಿ ಪರಿಗಣಿಸಿ ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಿದೆ ಎಂದರು.

ಮಧ್ಯಂತರ ಅರ್ಜಿ ಸಲ್ಲಿಸಬೇಕು: ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ರಾಜಕೀಯ ಮಾಡುತ್ತಿದೆ ಎಂದು ಆರೋಪಿಸಿದರು. ನಮ್ಮ ರಾಜ್ಯದ ಕಾಂಗ್ರೆಸ್ ನಾಯಕರು ತಮಿಳು ನಾಡು ಸಿಎಂ ಎಂಕೆ ಸ್ಟಾಲಿನ್ ಅವರೊಂದಿಗೆ ಮಾತನಾಡಲು ಸಿದ್ಧರಿಲ್ಲ. ಬದಲಿಗೆ ಅವರು ಕೇಂದ್ರದ ಕಡೆಗೆ ಬೆರಳು ತೋರಿಸುತ್ತಾರೆ ಎಂದು ಸಹ ಅಸಮಾಧಾನ ಹೊರಹಾಕಿದರು. ಬೆಂಗಳೂರಿಗೆ ಕುಡಿಯುವ ನೀರು ಮತ್ತು ತಮಿಳುನಾಡು ಹೆಚ್ಚುವರಿ ನೀರಿನ ಬಳಕೆ ಕುರಿತು ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಬೇಕು ಎಂದು ಅವರು ಹೇಳಿದರು.

'ಅನಂತ್ ಕುಮಾರ್ ಯಾವಾಗಲೂ ಸಂರಕ್ಷಕ': ನಿನ್ನೆ ಕೇಂದ್ರದ ಮಾಜಿ ಸಚಿವ ಎಚ್‌ಎನ್‌ ಅನಂತ್‌ಕುಮಾರ್‌ ಅವರ ಜನ್ಮದಿನದ ‘ಅನಂತ್‌ಕುಮಾರ್‌ 64’ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಕೇಂದ್ರ ಸರ್ಕಾರದ ಮಟ್ಟದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಬಂದಾಗಲೂ ಅನಂತ್‌ಕುಮಾರ್‌ ಸದಾ ಸಂರಕ್ಷಕರಾಗಿದ್ದರು. ಕೃಷ್ಣಾ ನೀರು ಹಂಚಿಕೆ ವಿಷಯದಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ಎರಡೂ ಪ್ರತ್ಯೇಕ ನೀರು ಹಂಚಿಕೆಗೆ ಒತ್ತಾಯಿಸಿದಾಗ, ಅನಂತ್ ಕುಮಾರ್ ಅವರು ಕರ್ನಾಟಕದ ಪರವಾಗಿ ಪತ್ರ ಬರೆಯುವಂತೆ ಕಾನೂನು ಕಾರ್ಯದರ್ಶಿಗೆ ಸೂಚಿಸಿದ್ದರು. ಅಧಿಕಾರಿ ನಿರಾಕರಿಸಿದಾಗ, ಅವರನ್ನು ಬದಲಾಯಿಸುವುದಾಗಿ ಅನಂತ್ ಕುಮಾರ್ ಹೇಳಿದರು ಎಂದು ಬೊಮ್ಮಾಯಿ ಸ್ಮರಿಸಿಕೊಂಡರು.

SCROLL FOR NEXT