ಮತದಾನ ಬಹಿಷ್ಕಾರ
ಮತದಾನ ಬಹಿಷ್ಕಾರ 
ರಾಜ್ಯ

ಲೋಕಸಭಾ ಚುನಾವಣೆ 2024: ಮೂಲ ಸೌಕರ್ಯ ಕೊರತೆ ಆರೋಪ; ಉಡುಪಿ, ಹಾಸನ ಜಿಲ್ಲಾ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರ!

Srinivasamurthy VN

ಬೆಂಗಳೂರು: ಲೋಕಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಭಾರಿ ಕಸರತ್ತು ನಡೆಸುತ್ತಿರುವಂತೆಯೇ ಇತ್ತ ಉಡುಪಿ ಮತ್ತು ಹಾಸನ ಜಿಲ್ಲೆಗಳ ಕೆಲ ಗ್ರಾಮಸ್ಥರು ಮೂಲ ಸೌಕರ್ಯ ಕೊರತೆ ಆರೋಪಿಸಿ ಮತದಾನವನ್ನು ಬಹಿಷ್ಕರಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಪು ವಿಧಾನಸಭಾ ಕ್ಷೇತ್ರದ ಮೂಡುಬೆಳ್ಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಿಂಗೇರಿ ಗ್ರಾಮಸ್ಥರು ಮತ್ತು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕು ಚೌಡೇನಹಳ್ಳಿಯ ನೆಲಗಹಳ್ಳಿ ಹಾಗೂ ಬೇಲೂರು ತಾಲೂಕಿನ ಜೋಗಿಕೊಪ್ಪಲು ಭಾಗದ ಜನರು ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸಿದ್ದಾರೆ.

ಸಮಸ್ಯೆ ಈಡೇರುವವರೆಗೂ ಮತದಾನ ಮಾಡಲ್ಲ

ತಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೆ ಲೋಕಸಭೆ ಚುನಾವಣೆ ಸೇರಿದಂತೆ ಮುಂಬರುವ ಯಾವುದೇ ಚುನಾವಣಾ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ನಿರಾಕರಿಸುವುದಾಗಿ ಗ್ರಾಮಸ್ಥರು ಘೋಷಿಸಿದ್ದು, ರಸ್ತೆಗಳು, ಸೇತುವೆಗಳು ಮತ್ತು ಕ್ರಿಯಾತ್ಮಕ ಸಾರ್ವಜನಿಕ ಸಾರಿಗೆ ಸಂಪರ್ಕದಂತಹ ಅಗತ್ಯ ಸೌಕರ್ಯಗಳ ಕೊರತೆಯನ್ನು ಕಟ್ಟಿಂಗೇರಿ ಗ್ರಾಮ ಎದುರಿಸುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಗಳು ಭೇಟಿ ನೀಡಿದ್ದು, ಸ್ಪಷ್ಟವಾದ ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಹಿಂದೆ ಅಧಿಕಾರಿಗಳೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದರೂ ಸೂಕ್ತ ಪರಿಹಾರ ನೀಡುವಲ್ಲಿ ವಿಫಲರಾಗಿದ್ದಾರೆ.

ಈ ಕುರಿತು ಬೆಳ್ಳೆ ಗ್ರಾಮ ಪಂಚಾಯತ್‌ನ ಮಾಜಿ ಅಧ್ಯಕ್ಷ ಶಿವಾಜಿ ಎಸ್ ಸುವರ್ಣ ಅವರು ಕಟ್ಟಿಂಗೇರಿಯಲ್ಲಿ ಗಣನೀಯ ಪ್ರಮಾಣದ ಮತದಾರರು ಮತದಾನ ಬಹಿಷ್ಕರಿಸಿದ್ದು, ಆದಾಗ್ಯೂ, ಮೂಲಭೂತ ಮೂಲಸೌಕರ್ಯಗಳ ಅನುಪಸ್ಥಿತಿಯು ಒಂದು ಜ್ವಲಂತ ಸಮಸ್ಯೆಯಾಗಿ ಉಳಿದಿದೆ. ವಿಶೇಷವಾಗಿ ರಸ್ತೆಗಳು ಮತ್ತು ಸೇತುವೆಗಳ ಅನುಪಸ್ಥಿತಿಯು ಕಳೆದ ಆರು ವರ್ಷಗಳಿಂದ ಜನರ ಪ್ರಮುಖ ಸೇವೆಗಳ ಪ್ರವೇಶಕ್ಕೆ ಅಡ್ಡಿಯಾಗಿದೆ ಎಂದು ಅವರು ಹೇಳಿದರು.

ಇನ್ನು ಗ್ರಾಮಸ್ಥರ ನಡೆಗೆ ಬೆಂಬಲ ಸೂಚಿಸಿರುವ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಅವರು, ಚುನಾಯಿತ ಪ್ರತಿನಿಧಿಗಳು ಸೂಕ್ತ ಭರವಸೆ ನೀಡಿ ಸಮಸ್ಯೆ ಪರಿಹರಿಸಿದರೆ, ಗ್ರಾಮಸ್ಥರು ಮತದಾನ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳಬಹುದು. ಈ ಬಾರಿ ಗ್ರಾಮಸ್ಥರು ಬಾಹ್ಯ ಒತ್ತಡ, ಆಮಿಷಗಳ ವಿರುದ್ಧ ಸೆಟೆದು ನಿಂತಿದ್ದು, ಸಭೆಯಲ್ಲಿ ಕೈಗೊಂಡ ನಿರ್ಣಯಗಳಿಗೆ ಬದ್ಧರಾಗಿದ್ದಾರೆ. ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಕಟ್ಟಿಂಗೇರಿ ಗ್ರಾಮಕ್ಕೆ ಬಸ್ ಸಂಚಾರ ಆರಂಭಿಸಿದರೆ ಮಾತ್ರ ಚುನಾವಣೆಯಲ್ಲಿ ಮತ ಹಾಕುತ್ತೇವೆ ಎಂದರು.

ಸ್ಥಳೀಯ ಶಾಸಕರು ಮತ್ತು ಸಂಸದರು ಗ್ರಾಮದ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ಅವರ ಬಗ್ಗೆ ಗ್ರಾಮಸ್ಥರಿಗೆ ಭ್ರಮನಿರಸನವಾಗಿದೆ. ಬಹಿಷ್ಕಾರದ ಕುರಿತು ಜಿಲ್ಲಾ ಚುನಾವಣಾಧಿಕಾರಿ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ವ್ಯವಹಾರದ ಮೂಲಕ ಅವರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಪ್ರಯತ್ನಿಸಲಾಗುತ್ತಿದೆ ಎಂದು ಬೆಳ್ಳೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರಂಜನಿ ಹೆಗಡೆ ಹೇಳಿದರು.

ಹಾಸನದಲ್ಲೂ ಇದೇ ಪರಿಸ್ಥಿತಿ

ಉಡುಪಿ ಮಾತ್ರವಲ್ಲದೇ ಹಾಸನದಲ್ಲೂ ಇದೇ ಪರಿಸ್ಥಿತಿ ಎದುರಾಗಿದ್ದು, ಜಿಲ್ಲೆಯ ಸಕಲೇಶಪುರ ತಾಲೂಕು ಚೌಡೇನಹಳ್ಳಿಯ ನೆಲಗಹಳ್ಳಿ ಹಾಗೂ ಬೇಲೂರು ತಾಲೂಕಿನ ಜೋಗಿಕೊಪ್ಪಲು ಭಾಗದ ಜನರು ಕೂಡ ಮೂಲಭೂತ ಸೌಕರ್ಯಗಳ ಕೊರತೆಯಿಂದ ಕಂಗೆಟ್ಟಿರುವ ಕಾರಣ ಮತದಾನದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಚುನಾಯಿತ ಪ್ರತಿನಿಧಿಗಳು ನೀಡಿದ ಭರವಸೆಗಳು ಫಲ ನೀಡುತ್ತಿಲ್ಲ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ರಸ್ತೆಗಳ ದಯನೀಯ ಸ್ಥಿತಿ, ಕುಡಿಯುವ ನೀರಿನ ಕೊರತೆ, ಒಳಚರಂಡಿ, ಸಾರಿಗೆ ಸೌಲಭ್ಯಗಳ ಕೊರತೆ, ಬೀದಿದೀಪಗಳು ಮತ್ತು ಕಳಪೆ ವಿದ್ಯುತ್ ಪೂರೈಕೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅವರು ಎದುರಿಸುತ್ತಿದ್ದಾರೆ. ಚುನಾಯಿತ ಜನಪ್ರತಿನಿಧಿಗಳು ಕಳೆದೆರಡು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದರೂ ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ರಾಜಕೀಯ ಪಕ್ಷಗಳಿಗೆ ನಿಷೇಧ

ಮತ ಕೇಳಲು ಗ್ರಾಮಕ್ಕೆ ಬರದಂತೆ ಚುನಾಯಿತ ಪ್ರತಿನಿಧಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರಿಗೆ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದು, ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಲು ಯುವಕರು ಪ್ರವೇಶ ದ್ವಾರದಲ್ಲಿ ಬ್ಯಾನರ್ ಕೂಡ ಹಾಕಿದ್ದಾರೆ. ಇತ್ತೀಚೆಗೆ ಸಭೆ ನಡೆಸಿ ಗ್ರಾಮಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT