ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ 
ರಾಜ್ಯ

ಬೆಂಗಳೂರು: ಹಣ ಅಕ್ರಮ ವರ್ಗಾವಣೆ ಪ್ರಕರಣ: ವ್ಯಕ್ತಿಗೆ ಐದು ವರ್ಷ ಜೈಲು ಶಿಕ್ಷೆ; ಆಸ್ತಿ ಮುಟ್ಟುಗೋಲಿಗೆ ಆದೇಶ

Ramyashree GN

ಬೆಂಗಳೂರು: ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ 3 ಮತ್ತು 4ರ ಅಡಿಯಲ್ಲಿನ ಅಪರಾಧಗಳಿಗಾಗಿ ವಿಶೇಷ ನ್ಯಾಯಾಲಯವು ಜಾನ್ ಮೈಕೆಲ್‌ಗೆ ಐದು ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಪರಾಧದಿಂದ ಬಂದ ಆದಾಯದಿಂದ ತನ್ನ ಪತ್ನಿಯ ಹೆಸರಿನಲ್ಲಿ ಖರೀದಿಸಿರುವ ಎರಡು ಸೈಟ್‌ಗಳು ಮತ್ತು ಕಾರನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದೆ.

ಆಗಿನ ಮುಖ್ಯಮಂತ್ರಿ ಧರಂ ಸಿಂಗ್ ಅವರ ಆಪ್ತ ಕಾರ್ಯದರ್ಶಿ ಎಂಬ ಸೋಗಿನಲ್ಲಿ ಮೈಕೆಲ್, ಸಿಎಂ ವಿವೇಚನಾ ಕೋಟಾದಡಿಯಲ್ಲಿ ಬಿಡಿಎ ಸೈಟ್‌ಗಳನ್ನು ಒದಗಿಸುವ ನೆಪದಲ್ಲಿ ಸಾರ್ವಜನಿಕರಿಂದ ಅಪಾರ ಪ್ರಮಾಣದ ಹಣವನ್ನು ದೋಚಿದ್ದನು.

ಮಾರ್ಚ್ 14 ರಂದು ವಿಶೇಷ ನ್ಯಾಯಾಲಯವು ಮೈಕೆಲ್‌ಗೆ ಐದು ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 44.10 ಲಕ್ಷ ರೂ. ದಂಡ ವಿಧಿಸಿತ್ತು. ಈಗ, 2010 ರಲ್ಲಿ ಇ.ಡಿ ದಾಖಲಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ, ಏಪ್ರಿಲ್ 6 ರಂದು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್, ಬೆಂಗಳೂರು ಉತ್ತರ ತಾಲೂಕಿನ ಬಿದರಹಳ್ಳಿ ಹೋಬಳಿಯ ಜಿಂಕೇತಿಮ್ಮನಹಳ್ಳಿಯಲ್ಲಿ 1,400 ಚದರ ಅಡಿ ಅಳತೆಯ ವಸತಿ ನಿವೇಶನ ಮತ್ತು ಅಲ್ಲಿನ 3ನೇ ಸಂಖ್ಯೆಯ ಕಟ್ಟಡವನ್ನು ಮುಟ್ಟುಗೋಲು ಹಾಕಿಕೊಳ್ಳಲು ಮತ್ತೊಂದು ಆದೇಶ ನೀಡಿದ್ದಾರೆ. ಹಾಗೂ ಇದೇ ಪ್ರದೇಶದಲ್ಲಿ ಮಂಜುಳಾ ಮೈಕಲ್ ಅವರ ಹೆಸರಿನಲ್ಲಿರುವ 620 ಚದರ ಅಡಿ ವಿಸ್ತೀರ್ಣದ ನಂ 4 ರ ನಿವೇಶನ ಮತ್ತು ಕಾರನ್ನು ಮುಟ್ಟುಗೋಲು ಹಾಕಿಕೊಂಡು ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸುವಂತೆ ಆದೇಶಿಸಿದೆ.

'ಈ ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ, ಆರೋಪಿಯು ಅಪರಾಧದಿಂದ ಬಂದ ಆದಾಯದಲ್ಲಿ ಆಸ್ತಿ ಅಥವಾ ವಸ್ತುಗಳನ್ನು ಖರೀದಿಸಿದ್ದಾರೆ ಎಂಬುದು ಸ್ಪಷ್ಟವಾಗಿ ಸೂಚಿಸುತ್ತದೆ. ಆರೋಪಿ ನಂ 2 ಮಂಜುಳಾ ತಲೆಮರೆಸಿಕೊಂಡಿದ್ದು, ಆಕೆಯ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ' ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

ಬೆಂಗಳೂರಿನ ಟಿಸಿ ಪಾಳ್ಯದ ನಿವಾಸಿ ಮೈಕೆಲ್ (46) ಎಂಬುವರು, ನಿವೇಶನ ಸಂಖ್ಯೆ 3ರಲ್ಲಿರುವ ಮನೆಯ ಅಟ್ಯಾಚ್‌ಮೆಂಟ್ ಅನ್ನು ತೆಗೆದುಹಾಕಲಾಗಿದೆ ಎಂದು ಸೂಚಿಸುವ ಆದೇಶವನ್ನು ನಕಲಿ ಮಾಡುವ ಮೂಲಕ ಕಾನೂನಿನ ಬಗ್ಗೆ ಕಿಂಚಿತ್ತೂ ಗೌರವ ತೋರಿಸಿಲ್ಲ. ಇದಕ್ಕಾಗಿ, 2022 ರಲ್ಲಿಯೂ ಅವರ ವಿರುದ್ಧ ಪ್ರತ್ಯೇಕ ಅಪರಾಧ ಪ್ರಕರಣ ದಾಖಲಿಸಲಾಗಿದೆ. ಆ ಪ್ರಕರಣದ ತೀರ್ಪು ಬಾಕಿ ಉಳಿದಿದೆ.

ಇದನ್ನು ಉಲ್ಲೇಖಿಸಿದ ಇ.ಡಿ, ಮೈಕೆಲ್ ಅಪರಾಧದ ಇತಿಹಾಸ ಹೊಂದಿರುವುದರಿಂದ ಆತನಿಗೆ ಯಾವುದೇ ವಿನಾಯಿತಿ ತೋರಿಸಲು ಸಾಧ್ಯವಿಲ್ಲ ಮತ್ತು ಅದರ ಪ್ರಕಾರ, ಗರಿಷ್ಠ ಶಿಕ್ಷೆಯನ್ನು ವಿಧಿಸಬೇಕು. ಜೊತೆಗೆ, ಅಪರಾಧಗಳ ಆದಾಯದಿಂದ ಅವನ ಹೆಂಡತಿಯ ಹೆಸರಿನಲ್ಲಿ ಖರೀದಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಪ್ರತಿಪಾದಿಸಿತು.

ಈ ಅಪರಾಧವನ್ನು ವೈಟ್ ಕಾಲರ್ ಅಪರಾಧ ಎಂದು ಪರಿಗಣಿಸಿದ ನ್ಯಾಯಾಲಯ, ಇದು ರಾಷ್ಟ್ರದ ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ, ಗರಿಷ್ಠ ಶಿಕ್ಷೆಯನ್ನು ವಿಧಿಸುವ ಅಗತ್ಯವಿದೆ ಎಂದು ಹೇಳಿದೆ.

SCROLL FOR NEXT