ಬಾಪೂಜಿನಗರ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸುತ್ತಿರುವ ಬಿಡಬ್ಲ್ಯುಎಸ್‌ಎಸ್‌ಬಿ
ಬಾಪೂಜಿನಗರ ನಿವಾಸಿಗಳಿಗೆ ಕುಡಿಯುವ ನೀರು ಪೂರೈಸುತ್ತಿರುವ ಬಿಡಬ್ಲ್ಯುಎಸ್‌ಎಸ್‌ಬಿ 
ರಾಜ್ಯ

21 ಐಟಿ ಪಾರ್ಕ್‌ಗಳಿಗೆ ಕಾವೇರಿ ನೀರು ಪೂರೈಸಲು ಸಿದ್ಧ: BWSSB

Manjula VN

ಬೆಂಗಳೂರು: ಮಹದೇವಪುರ ಮತ್ತು ಸುತ್ತಮುತ್ತಲಿನ 21 ಐಟಿ ಪಾರ್ಕ್‌ಗಳಿಗೆ ಕಾವೇರಿ ನೀರು ಪೂರೈಸಲು ಸಿದ್ಧರಿದ್ದೇವೆಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ) ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು ಬುಧವಾರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಐಟಿ ಕಂಪನಿಗಳು ಎದುರಿಸುತ್ತಿರುವ ನೀರಿನ ಕೊರತೆ ನಮ್ಮ ಗಮನಕ್ಕೆ ಬಂದಿದೆ. ಹಲವು ಕಂಪನಿಗಳು ಕಾವೇರಿ ನೀರಿಗಾಗಿ ಮನವಿ ಸಲ್ಲಿಸಿವೆ. ಕಾವೇರಿ ಯೋಜನೆಯ 4ನೇ ಹಂತದಲ್ಲಿ ಬೇಡಿಕೆ ಪೂರೈಸಲು ನಾವು ಸಿದ್ಧರಿದ್ದೇವೆ ಎಂದು ಹೇಳಿದರು.

ಇದಕ್ಕೂ ಮುನ್ನ ಕಾವೇರಿ ನೀರು ಕೋರಿ ಹೊರವರ್ತುಲ ರಸ್ತೆ ಕಂಪನಿಗಳ ಸಂಘದ ಸದಸ್ಯರೊಂದಿಗೆ ಸಭೆ ನಡೆಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, 21 ಐಟಿ ಪಾರ್ಕ್‌ಗಳಿಗೆ 12 ಎಂಎಲ್‌ಡಿ ನೀರು ಬೇಕಾಗುತ್ತದೆ. ಇದಕ್ಕ ಕಾವೇರಿ 4ನೇ ಹಂತದಲ್ಲಿ 5 ಎಂಎಲ್ ಡಿ ನೀರು ಲಭ್ಯವಾಗಲಿದೆ ಎಂದು ಹೇಳಿದರು.

ಆದರೆ ಇದಕ್ಕೆ ಪ್ರೋರೇಟಾ ಶುಲ್ಕ ಮತ್ತು ಇತರ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಅಗತ್ಯವಿರುವ ಶುಲ್ಕವನ್ನು ಪಾವತಿಸಲು ನೀವು ಒಪ್ಪಿದರೆ, 30 ದಿನಗಳಲ್ಲಿ ನೀರು ಸರಬರಾಜು ಮಾಡಲು ವ್ಯವಸ್ಥೆ ಮಾಡಬಹುದು. 5ನೇ ಹಂತ ಕಾರ್ಯಾರಂಭವಾದಾಗ ಹೆಚ್ಚಿನ ನೀರು ಪೂರೈಕೆ ಮಾಡಬಹುದು. ಉಳಿದ ಬೇಡಿಕೆಯನ್ನು ಸಂಸ್ಕರಿಸಿದ ನೀರಿನ ಮೂಲಕ ಪೂರೈಸಿಕೊಳ್ಳಬಹುದು. ಕಂಪನಿಗಳು ತಮ್ಮ ಅವಶ್ಯಕತೆಯ ಕನಿಷ್ಠ 50 ಪ್ರತಿಶತವನ್ನು ಸಂಸ್ಕರಿಸಿದ ನೀರಿನ ಮೂಲಕ ಪೂರೈಸಿಕೊಳ್ಳಬೇಕು ಎಂದು ಹೇಳಿದರು.

BWSSBನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಂಸ್ಕರಿಸಿದ ನೀರಿದೆ. ಸಂಸ್ಕರಿಸಿದ ನೀರನ್ನು ಪೂರೈಸಬಹುದು. ನಮ್ಮ ವೆಬ್‌ಸೈಟ್ ಮೂಲಕ ನಿಮ್ಮ ಅವಶ್ಯಕತೆಗಳನ್ನು ನೀವು ಮುಂದಿಟ್ಟರೆ, ನಾವು ಸಂಸ್ಕರಿಸಿದ ನೀರನ್ನು ಪೂರೈಸುತ್ತೇವೆ. ಶೌಚಾಲಯದ ನೀರನ್ನು ಹೊರತುಪಡಿಸಿ, ಇತರ ಬಳಸಿದ ನೀರನ್ನು ಗ್ರೇ ವಾರಟ್ ಎಂದು ಕರೆಯಲಾಗುತ್ತದೆ. ಈ ನೀರನ್ನು ಸಂಸ್ಕರಿಸಬಹುದು ಈ ನೀರಿನ ಮರುಬಳಕೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ಇದೇ ವೇಳೆ ಮಹದೇವಪುರದ ಇಕೋ ವರ್ಲ್ಡ್ ಮತ್ತು ಇತರ ಐಟಿ ಪಾರ್ಕ್‌ಗಳಿಗೆ ಭೇಟಿ ನೀಡಿದ ಅವರು, ಗ್ರೀನ್ ಸ್ಟಾರ್ ಚಾಲೆಂಜ್ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಜನರಿಗೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದ ಉಪಾಧ್ಯಕ್ಷೆ ಅರ್ಚನಾ ತಾಯಡೆ, ಕಾರ್ಯದರ್ಶಿ ರಮೇಶ್ ವೆಂಕಟರಾಮು, ಪ್ರಧಾನ ವ್ಯವಸ್ಥಾಪಕ ಕೃಷ್ಣಕುಮಾರ್ ಗೌಡ ಉಪಸ್ಥಿತರಿದ್ದರು

SCROLL FOR NEXT