ಹೈಕೋರ್ಟ್‌
ಹೈಕೋರ್ಟ್‌ 
ರಾಜ್ಯ

ಷರತ್ತುಗಳ ಅನ್ವಯ ರೈತರಿಗೆ ಶಸ್ತ್ರಾಸ್ತ್ರಗಳ ಹಿಂದಿರುಗಿಸಲಾಗಿದೆ; ಹೈಕೋರ್ಟ್‌ಗೆ ಸರ್ಕಾರ ಮಾಹಿತಿ

Manjula VN

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿರುವ ಭಾಗಗಳ ಪರವಾನಗಿ ಹೊಂದಿರುವ ರೈತರಿಂದ ಸ್ವಾಧೀನಕ್ಕೆ ಪಡೆದಿದ್ದ ಶಸ್ತ್ರಾಸ್ತ್ರಗಳನ್ನು ಷರತ್ತುಗಳ ಅನ್ವಯ ಹಿಂದಿರುಗಿಸಲಾಗಿದೆ ಎಂದು ರಾಜ್ಯ ಸರ್ಕಾರವು ಹೈಕೋರ್ಟ್ ಗೆ ಮಾಹಿತಿ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಐವರನಾಡು ಗ್ರಾಮದ ಕೃಷಿಕ ಕೆ ವಿ ಪ್ರಸಾದ್ ಸೇರಿದಂತೆ ಹಲವು ಮಂದಿ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಸರ್ಕಾರದ ಪರವಾಗಿ ಹಾಜರಾಗಿದ್ದ ಅಡ್ವೋಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರ ವಾದ ಆಲಿಸಿದ ಪೀಠವು ಇದನ್ನು ದಾಖಲಿಸಿಕೊಂಡು ಪರವಾನಗಿ ಹೊಂದಿರುವ ಶಸ್ತ್ರಾಸ್ತ್ರಗಳನ್ನು ಚುನಾವಣಾ ಸಂದರ್ಭದಲ್ಲಿ ಸರ್ಕಾರದ ಸುಪರ್ದಿಗೆ ಒಪ್ಪಿಸುವಂತೆ ಆದೇಶ ನೀಡಲು ಅಧಿಕಾರವಿದೆಯೇ ಎಂಬುದರ ಕುರಿತು ವಾದ ಆಲಿಸಲು ವಿಚಾರಣೆ ಮುಂದೂಡಿತು.

ಅರ್ಜಿದಾರರು ತಾನು ಕೃಷಿಕನಾಗಿದ್ದು, ಜನ ವಿರಳವಾದ ಬೆಳ್ಳಾರೆ ಗ್ರಾಮದಲ್ಲಿ ವಾಸ ಮಾಡುತ್ತಿದ್ದೇನೆ. ಜೀವ ರಕ್ಷಣೆ ಮತ್ತು ಕೃಷಿ ಚಟುವಟಿಕೆ ವೇಳೆ ವನ್ಯಪ್ರಾಣಿಗಳಿಂದ ಆತ್ಮರಕ್ಷಣೆ ಮಾಡಿಕೊಳ್ಳಲು ಬಂದೂಕಿನ ಅಗತ್ಯವಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬಂದೂಕನ್ನು ತನ್ನ ಸುಪರ್ದಿಗೆ ಪಡೆದಿದೆ. ಆಯುಧ ಸುಪರ್ದಿಗೆ ಪಡೆಯುವ ಆದೇಶದಿಂದ ವಿನಾಯಿತಿ ನೀಡುವಂತೆ ಕೋರಲಾದ ಮನವಿಯನ್ನು ತಿರಸ್ಕರಿಸಲಾಗಿದೆ. ಇದು ಸಹಜ ನ್ಯಾಯತತ್ವ ಹಾಗೂ ಸಂವಿಧಾನದ 14, 16 ಮತ್ತು 21ನೇ ವಿಧಿಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ಸರ್ಕಾರ ಈ ಸಂಬಂಧ 2024ರ ಮಾರ್ಚ್ 26ರಂದು ಹೊರಡಿಸಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಸರ್ಕಾರ ವಿಧಿಸಿರುವ ಷರತ್ತುಗಳು ಇಂತಿವೆ...

  • ಚುನಾವಣಾ ಪ್ರಚಾರ ಸಭೆ, ಮೆರವಣಿಗೆ, ಪಾದಯಾತ್ರೆಗಳಲ್ಲಿ ಶಸ್ತ್ರಾಸ್ತ್ರ ಒಯ್ಯಲು ಅವಕಾಶವಿಲ್ಲ.

  • ಮತದಾನದ ದಿನದಂದು ಶಸ್ತ್ರಾಸ್ತ್ರವನ್ನು ಮತಗಟ್ಟೆಗೆ ತೆಗೆದುಕೊಂಡು ಹೋಗುವಂತಿಲ್ಲ.

  • ಶಸ್ತ್ರಾಸ್ತ್ರಕ್ಕೆ ಪರವಾನಗಿ ಹೊಂದಿರುವವರು ಬಹಿರಂಗ ಪ್ರದರ್ಶನ ಮಾಡುವುದಕ್ಕೆ ಅವಕಾಶವಿಲ್ಲ.

  • ಸಾರ್ವಜನಿಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆದರಿಕೆ ಹಾಕುವುದಕ್ಕೆ ಬಳಸಬಾರದು.

  • ಪೊಲೀಸರ ತಪಾಸಣೆ ವೇಳೆ ಹಾಜರುಪಡಿಸಿದ ದಾಖಲೆಗಳನ್ನು ಒದಗಿಸಬೇಕು.

  • ಷರತ್ತುಗಳನ್ನು ಉಲ್ಲಂಘಿಸಿದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಶಸ್ತ್ರಾಸ್ತ್ರ ವಶಕ್ಕೆ ಪಡೆದುಕೊಳ್ಳಬಹುದಾಗಿದೆ.

  • ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವಂತಿಲ್ಲ.

SCROLL FOR NEXT