ಶೂನ್ಯ ನೆರಳಿನ ದಿನ
ಶೂನ್ಯ ನೆರಳಿನ ದಿನ 
ರಾಜ್ಯ

Zero Shadow Day: ಬೆಂಗಳೂರಿನಲ್ಲಿ ಇಂದು ಶೂನ್ಯ ನೆರಳಿನ ದಿನ: ಆ 6 ನಿಮಿಷಗಳ ಖಗೋಳ ವಿಸ್ಮಯವನ್ನು ಮಿಸ್ ಮಾಡಿಕೊಳ್ಳಬೇಡಿ!

Srinivasamurthy VN

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಸಿಲಬೇಗೆ ಏರಿರುವಂತೆಯೇ ಇತ್ತ ಉದ್ಯಾನನಗರಿಯಲ್ಲಿ ಖಗೋಳ ವಿಸ್ಮಯವೊಂದು ನಡೆಯುತ್ತಿದ್ದು, ಆ ನಿಮಿಷಗಳ ವಿಶೇಷ ಸಂದರ್ಭದಲ್ಲಿ ನಮ್ಮ ನೆರಳೇ ನಮಗೆ ಕಾಣುವುದಿಲ್ಲ.

ಹೌದು.. ಬೆಂಗಳೂರಿಗರು ವಿಶಿಷ್ಟ ವಿದ್ಯಾಮಾನವೊಂದಕ್ಕೆ ಇಂದು ಸಾಕ್ಷಿಯಾಗಲಿದ್ದು, ಪ್ರತಿ ಕ್ಷಣವೂ ನಿಮ್ಮೊಂದಿಗೆ ಇರುವ ನೆರಳು ಕೆಲ ಹೊತ್ತು ನಿಮ್ಮನ್ನು ಬಿಟ್ಟು ದೂರ ಹೋಗಲಿದೆ. ಅಂದರೆ ಯಾವುದೇ ಲಂಬ ವಸ್ತುವೂ ನೆರಳನ್ನು ಹೊಂದಿರುವುದಿಲ್ಲ! ಇದನ್ನೇ ʼಶೂನ್ಯ ನೆರಳಿನ ದಿನʼ (Zero Shadow Day) ಎಂದು ಕರೆಯುತ್ತಾರೆ.

ಇಂದು ಮಧ್ಯಾಹ್ನ 12.17ರಿಂದ 12.23ರ ನಡುವೆ ಈ ವಿದ್ಯಾಮಾನ ಸಂಭವಿಸಲಿದ್ದು, ಈ ವೇಳೆ ಸೂರ್ಯನ ಸ್ಥಾನವು ನಿಖರವಾಗಿ ಉತ್ತುಂಗದಲ್ಲಿರುತ್ತದೆ. ಹೀಗಾಗಿ ಎಲ್ಲ ವಸ್ತುಗಳ ನೆರಳು ಕಣ್ಮರೆಯಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಏನಿದು ʼಶೂನ್ಯ ನೆರಳಿನ ದಿನʼ ?

ಸೂರ್ಯನು ಮಧ್ಯಾಹ್ನ ನಡು ನೆತ್ತಿಯ ಮೇಲಿರುವಾಗ ಲಂಬವಾಗಿರುವ ವಸ್ತುವಿಗೆ ಸ್ವಲ್ಪ ಮಾತ್ರವಾದರೂ ನೆರಳು ಇದ್ದೇ ಇರುತ್ತದೆ. ಆದರೆ ಇಂದು ಅಂಥ ಯಾವುದೇ ನೆರಳು ಇರುವುದಿಲ್ಲ. ತಜ್ಞರು ಹೇಳುವಂತೆ ಉಷ್ಣವಲಯದ ಸ್ಥಳಗಳಲ್ಲಿ (ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ) ವರ್ಷಕ್ಕೆ ಎರಡು ಬಾರಿ ಈ ಶೂನ್ಯ ನೆರಳು ದಿನ ಸಂಭವಿಸುತ್ತದೆ.

ಇದು ಸೂರ್ಯನ ನಿಖರವಾದ ಸ್ಥಾನವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ. ಜತೆಗೆ ವಿಜ್ಞಾನಿ ಮತ್ತು ಖಗೋಳಶಾಸ್ತ್ರಜ್ಞರಿಗೆ ಸೂರ್ಯನ ಬೆಳಕಿನ ನಡವಳಿಕೆ ಮತ್ತು ಭೂಮಿಯ ವಾತಾವರಣದ ಮೇಲೆ ಅದು ಬೀರುವ ಪರಿಣಾಮಗಳ ಬಗ್ಗೆ ಸಂಶೋಧನೆ ನಡೆಸಲು ಅವಕಾಶವನ್ನು ಕಲ್ಪಿಸುತ್ತದೆ. ಸಾಮಾನ್ಯವಾಗಿ ಶೂನ್ಯ ನೆರಳು ಸುಮಾರು ಒಂದೂವರೆ ನಿಮಿಷ ಕಾಲ ಅನುಭವಕ್ಕೆ ಬರುತ್ತದೆ.

ಬೆಂಗಳೂರಿನಲ್ಲಿ ಏಪ್ರಿಲ್ 24 ಅಂದರೆ ಇಂದು ಮಧ್ಯಾಹ್ನ: 12.17 PMಗೆ ಮತ್ತು ಆಗಸ್ಟ್ 18 ರಂದು, 12.25PMಕ್ಕೆ ಸಂಭವಿಸುತ್ತದೆ.

ಬೆಂಗಳೂರು ಮಾತ್ರವಲ್ಲದೇ ಹೈದರಾಬಾದ್ ನಲ್ಲಿ ಮೇ 9 ಮಧ್ಯಾಹ್ನ: 12.12 ಮತ್ತು ಆಗಸ್ಟ್ 5 ಮಧ್ಯಾಹ್ನ 12.19ಕ್ಕೆ, ಮುಂಬೈನಲ್ಲಿ ಮೇ 15 ಮಧ್ಯಾಹ್ನ: 12.34ಕ್ಕೆ ಮತ್ತು ಜೂನ್ 27ಮದ್ಯಾಹ್ನ 12.45ಕ್ಕೆ ಮತ್ತು ಭೋಪಾಲ್ ನಲ್ಲಿ ಜೂನ್ 13 ಮಧ್ಯಾಹ್ನ 12.20ಕ್ಕೆ ಮತ್ತು ಜೂನ್ 28 ಮಧ್ಯಾಹ್ನ 12.23ಕ್ಕೆ, ಕನ್ಯಾಕುಮಾರಿಯಲ್ಲಿ ಏಪ್ರಿಲ್ 10 ಮಧ್ಯಾಹ್ನ: 12.21 ಮತ್ತು ಸೆಪ್ಟೆಂಬರ್ 1 ಮಧ್ಯಾಹ್ನ 12.22ಕ್ಕೆ ಸಂಭವಿಸಲಿದೆ.

SCROLL FOR NEXT