ಕೇಂದ್ರ ಸಚಿವ ವಿ ಸೋಮಣ್ಣ 
ರಾಜ್ಯ

ಕನ್ನಡದಲ್ಲೂ ರೈಲ್ವೇ ಪರೀಕ್ಷೆ ಬರೆಯಲು ಅವಕಾಶ: ಕೇಂದ್ರ ಸಚಿವ V Somanna!

ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ನೀಡಿ ಸುತ್ತೋಲೆ ಹೊರಡಿಸುವಂತೆ ರೈಲ್ವೆ ಬೋರ್ಡ್‌ ಪ್ರಧಾನ ವ್ಯವಸ್ಥಾಪಕ ರಿಗೆ ಸೂಚನೆ ನೀಡಲಾಗಿದೆ. ಲೋಕೊ ಪೈಲೆಟ್‌ ಹುದ್ದೆಗಳ ಪರೀಕ್ಷಾ ಸುತ್ತೋಲೆ ಕನ್ನಡದಲ್ಲಿ ಇಲ್ಲದೇ ಇರುವುದನ್ನು ಸಂಸದ ತೇಜಸ್ವಿ ಸೂರ್ಯ ಗಮನಕ್ಕೆ ತಂದಿದ್ದರು.

ಬೆಂಗಳೂರು: ರೈಲ್ವೆ ನೇಮಕಾತಿ ಮಂಡಳಿ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕನ್ನಡದಲ್ಲಿಯೂ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.

ಶನಿವಾರ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ, ಎನ್‌ಎಚ್‌ಎಐ ಮತ್ತು ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ರಾಜ್ಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇಲಾಖೆಯಲ್ಲಿ ಬಡ್ತಿ ನೀಡಲು ನಡೆಸುವ ‘ಸಾಮಾನ್ಯ ವಿಭಾಗ ಸ್ಪರ್ಧಾತ್ಮಕ ಪರೀಕ್ಷೆ’ (ಜಿಡಿಸಿಇ) ಬರೆಯಲು ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು. ಕನ್ನಡದಲ್ಲಿಯೂ ಅವಕಾಶ ಇರಬೇಕು ಎಂದು ಒತ್ತಾಯ ಬಂದಿರುವುದರಿಂದ ಪರೀಕ್ಷೆಯನ್ನು ಮುಂದಕ್ಕೆ ಹಾಕಲಾಗಿದೆ ಎಂದರು.

ಅಂತೆಯೇ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ನೀಡಿ ಸುತ್ತೋಲೆ ಹೊರಡಿಸುವಂತೆ ರೈಲ್ವೆ ಬೋರ್ಡ್‌ ಪ್ರಧಾನ ವ್ಯವಸ್ಥಾಪಕ ರಿಗೆ ಸೂಚನೆ ನೀಡಲಾಗಿದೆ. ಲೋಕೊ ಪೈಲೆಟ್‌ ಹುದ್ದೆಗಳ ಪರೀಕ್ಷಾ ಸುತ್ತೋಲೆ ಕನ್ನಡದಲ್ಲಿ ಇಲ್ಲದೇ ಇರುವುದನ್ನು ಸಂಸದ ತೇಜಸ್ವಿ ಸೂರ್ಯ ಗಮನಕ್ಕೆ ತಂದಿದ್ದರು. ಕನ್ನಡದಲ್ಲಿಯೂ ಸುತ್ತೋಲೆ ಹೊರಡಿಸಲು ತಿಳಿಸಿದ್ದೇನೆ. ಸೀಮಿತ ವಿಭಾಗದ ಸ್ಪರ್ಧಾತ್ಮಕ ಪರೀಕ್ಷೆ (ಎಲ್‌ಡಿಸಿಇ) ಸೇರಿದಂತೆ ರೈಲ್ವೆಯ ಎಲ್ಲ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲಿಯೂ ನಡೆಸಲು ಅವಕಾಶ ಕಲ್ಪಿಸಲಾಗುವುದು’ ಎಂದು ಸೋಮಣ್ಣ ಭರವಸೆ ನೀಡಿದರು.

ಇದೇ ವೇಳೆ ಬೆಂಗಳೂರು ಉಪನಗರ ರೈಲು ಯೋಜನೆ ಮಂದಗತಿಯಲ್ಲಿದೆ. ತ್ವರಿತ ಗೊಳಿಸಲು ತಿಂಗಳಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಗುವುದು. ಬಡ ಸಮುದಾಯದ ಪ್ರಯಾಣಿಕ ರನ್ನು ಗಮನದಲ್ಲಿ ಇಟ್ಟುಕೊಂಡು ಪ್ರಯಾಣಿಕರ ರೈಲಿಗೆ ಸಾಮಾನ್ಯ ಬೋಗಿಗಳನ್ನು ಹೆಚ್ಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಮತ್ತು ರಾಷ್ಟ್ರೀಯ ಹೆದ್ದಾರಿ (ಲೋಕೋಪಯೋಗಿ) ಅಧಿಕಾರಿಗಳೊಂದಿಗೆ ಸಭೆ ನಡೆಸಿ ತುಮಕೂರು ಜಿಲ್ಲೆಗೆ ಸಂಬಂಧಿಸಿದ ಕಾಮಗಾರಿಗಳ ಬಗ್ಗೆ ಚರ್ಚಿಸಲಾಗಿದೆ ಎಂದರು.

ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತುಮಕೂರು–ನೆಲಮಂಗಲ ರಸ್ತೆ ಕಾಮಗಾರಿ, ಎನ್‌ಎಚ್‌ 206ರ ಮಲ್ಲಸಂದ್ರ–ಕರಡಿ ಚತುಷ್ಪಥ ಕಾಮಗಾರಿ, ಎನ್‌ಎಚ್‌ 234ರ ಹುಳಿಯಾರು–ಶಿರಾ ದ್ವಿಪಥ ರಸ್ತೆ ಸಹಿತ ಒಟ್ಟು ₹ 6,400 ಕೋಟಿ ವೆಚ್ಚದಲ್ಲಿ 12 ರಸ್ತೆಗಳಲ್ಲಿ 375 ಕಿ.ಮೀ. ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿ 150 (ಎ)ಯಲ್ಲಿ ಕೆ.ಬಿ. ಕ್ರಾಸ್‌ ಬಳಿ ಸ್ವಾಧೀನ ಪಡೆದಿರುವ 2 ಎಕರೆ 2 ಗುಂಟೆ ಜಮೀನಿಗೆ ಸಂಬಂಧಿಸಿ ಸಂತ್ರಸ್ತರಿಗೆ ಪರಿಹಾರ ನೀಡಲು ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.

ಗೂಡ್ಸ್‌ ರೈಲಿನಲ್ಲಿ ಕಟ್ಟುನಿಟ್ಟಿನ ತಪಾಸಣೆ

‘ಗೂಡ್ಸ್‌ ರೈಲುಗಳಲ್ಲಿ ಬರುವ ಎಲ್ಲ ವಸ್ತುಗಳನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಬೇಕು. ಕಾನೂನು ಬಾಹಿರವಾಗಿ ಆಹಾರ ಪದಾರ್ಥವೂ ಸೇರಿದಂತೆ ಯಾವುದೇ ವಸ್ತುಗಳು ಬಾರದಂತೆ ನೋಡಿಕೊಳ್ಳಬೇಕು ಎಂದು ಆರ್‌ಪಿಎಫ್ ತಂಡದ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ರೈಲ್ವೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಅಂತೆಯೇ ತುಮಕೂರಿನಲ್ಲಿ 358 ಕೋಟಿ ರೂ ವೆಚ್ಚದಲ್ಲಿ ನಡೆಯುತ್ತಿರುವ ರೈಲ್ವೆ ಕೆಳ ಮತ್ತು ಮೇಲ್ಸೇತುವೆಗಳ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ಹಣ ಕೇಳದಂತೆ ಸೂಚಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ. ವ್ಯಾಪಾರದ ಗುರಿ

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಬೆಂಗಳೂರು: ತಾಯಿ, ಅಜ್ಜಿ, ಮಾವನನ್ನು ಕೊಂದು ಆರೋಪಿ ಆತ್ಮಹತ್ಯೆ!

ಪ್ರಿಯಾಂಕ್ ಖರ್ಗೆ RSS ಸಚಿವರು- ಪರಮೇಶ್ವರ್ 'ಗೊತ್ತಿಲ್ಲ' ಸಚಿವರು: ಶೋಭಾ ಕರಂದ್ಲಾಜೆ

ಪೋಕ್ಸೋ ಕೇಸ್​ ಆರೋಪಿಯ ಭೀಭತ್ಸ ಕೃತ್ಯ: ಜಾಮೀನಿನ ಮೇಲೆ ಬಿಡುಗಡೆಯಾದ ಕೂಡಲೇ ಸಂತ್ರಸ್ತೆ ಸೇರಿ 6 ಮಂದಿಯ ಭೀಕರ ಹತ್ಯೆ!