ಬೆಂಗಳೂರು: ವಂಚನೆಯಿಂದಾಗಿ ಅನಿವಾಸಿ ಭಾರತೀಯರು ಅಪಾರ ಪ್ರಮಾಣದ ಆರ್ಥಿಕ ನಷ್ಟ ಅನುಭವಿಸುತ್ತಿದ್ದು, ತಮ್ಮ ಹೂಡಿಕೆ, ಉಳಿತಾಯ ಹಾಗೂ ಆಸ್ತಿ-ಪಾಸ್ತಿಗಳ ರಕ್ಷಣೆಗೆ ವಿಶೇಷ ಮಸೂದೆ ಜಾರಿಗೆ ತರುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ NRI ಗಳು ಮನವಿ ಮಾಡಿಕೊಂಡಿದ್ದಾರೆ.
ಈ ಸಂಬಂಧ ವಿಜಯಪುರದ ಬಿಜೆಪಿ ಸಂಸದ ಹಾಗೂ ಕೇಂದ್ರದ ಮಾಜಿ ಸಚಿವ ರಮೇಶ ಜಿಗಜಿಣಗಿ ಅವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದು, ಮಸೂದೆ ಕುರಿತು ಚರ್ಚಿಸಲು ತುರ್ತು ಸಭೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.
NRI ಕುಂದುಕೊರತೆಗಳ ಗುಂಪಿನ ಅಂತರರಾಷ್ಟ್ರೀಯ ಸಂಚಾಲಕ ಮತ್ತು ಅರಿಜೋನಾದ ಫೀನಿಕ್ಸ್ ನಗರದ ಮೂಲದ ಟೆಕ್ ವೃತ್ತಿಪರ ಸುಭಾಸ್ ಬಾಳಪ್ಪನವರ್ ಅವರು ಮಾತನಾಡಿ, ಅನಿವಾಸಿಗಳ ಭಾರತೀಯರ ಹೂಡಿಕೆ ಹಾಗೂ ಆಸ್ತಿ ರಕ್ಷಣೆಗೆ ವಿಶೇಷ ಮಸೂದೆ ಜಾರಿಗೆ ತರುವಂತೆ ಪ್ರಧಾನಿ ಮೋದಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಈ ಬಗ್ಗೆ ಅವರ ಸಂಪುಟದ ಸಚಿವರೊಂದಿಗೆ ಸಭೆ ನಡೆಸುವಂತೆಯೂ ಒತ್ತಾಯಿಸುತ್ತಿದ್ದೇವೆಂದು ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಅನಿವಾಸಿ ಭಾರತೀಯರ ಬಗ್ಗೆ ಆಳವಾದ ಕಾಳಜಿಯನ್ನು ತೋರಿಸುತ್ತಲೇ ಬಂದಿದ್ದಾರೆ. ನಮ್ಮ ಈ ಮನವಿಯನ್ನು ಪರಿಗಣಿಸುವ ವಿಶ್ವಾಸವಿದೆ. ಮಸೂದೆಯು ಒಮ್ಮೆ ಜಾರಿಗೆ ಬಂದರೆ ಎನ್ಆರ್ಐಗಳನ್ನು ವಂಚಕರಿಂದ ರಕ್ಷಣೆ ಮಾಡಿದಂತಾಗುತ್ತದೆ ಎಂದು ಹೇಳಿದ್ದಾರೆ.
NRI ಕುಂದುಕೊರತೆಗಳ ಗುಂಪಿನನಲ್ಲಿ 70 ಕ್ಕೂ ಹೆಚ್ಚು ದೇಶಗಳ 1,000 ಕ್ಕೂ ಹೆಚ್ಚು ಸದಸ್ಯರಿದ್ದಾರೆ. ನಮ್ಮ ಗುಂಪಿನ ಸದಸ್ಯರು ಈಗಾಗಲೇ 50 ಕ್ಕೂ ಹೆಚ್ಚು ದೇಶಗಳಲ್ಲಿನ ಭಾರತೀಯ ರಾಯಭಾರ ಕಚೇರಿಗಳಿಗೆ ಮನವಿ ಸಲ್ಲಿಸಿದ್ದಾರೆ, ಇದೀಗ ನಮ್ಮ ಹೂಡಿಕೆಗಳು ಮತ್ತು ಉಳಿತಾಯವನ್ನು ರಕ್ಷಿಸಲು ಭಾರತ ಸರ್ಕಾರವು ಮಸೂದೆಯನ್ನು ಜಾರಿಗೆ ತರುವಂತೆ ಒತ್ತಾಯಿಸುತ್ತಿದ್ದೇವೆಂದು ತಿಳಿಸಿದ್ದಾರೆ.
ಭಾರತದಲ್ಲಿ ಪ್ರಸ್ತುತದ ಕ್ರಿಮಿನಲ್ ನ್ಯಾಯ ಮತ್ತು ಕಾನೂನು ವ್ಯವಸ್ಥೆಗಳು ಎನ್ಆರ್ಐಗಳನ್ನು ಆನ್ಲೈನ್ ವಿಚಾರಣೆಗಳಲ್ಲಿ ಭಾಗವಹಿಸಲು ಅನುಮತಿಸುತ್ತಿಲ್ಲ. ಯಾವುದೇ ಕಾನೂನು ತೊಡಕುಗಳು ಎದುರಾದರೂ ನಾವು ವರ್ಷಾನುಗಟ್ಟಲೆ ಭಾರತದಲ್ಲಿ ಇರಬೇಕಾಗುತ್ತಿದೆ. ಇದು ಪ್ರಮುಖ ಸಮಸ್ಯೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಾಳಪ್ಪನವರ್ ಎಂಬುವವರು ಮಾತನಾಡಿ, ಭಾರತದ ಕಾನೂನು ವ್ಯವಸ್ಥೆಯು ನಿಧಾನವಾಗಿದ್ದು, ಪ್ರಕರಣಗಳು ಇತ್ಯರ್ಥಗೊಳ್ಳಳು 20 ಅಥವಾ 40 ವರ್ಷಗಳ ಕಾಲ ತೆಗೆದುಕೊಳ್ಳುತ್ತದೆ. ಅಂತಹ ವಿಸ್ತೃತ ಅವಧಿಗೆ NRI ರಜೆಯನ್ನು ಹೇಗೆ ತೆಗೆದುಕೊಳ್ಳಲು ಸಾಧ್ಯ? ಎನ್ಆರ್ಐಗಳಿಗೆ ಆನ್ಲೈನ್ನಲ್ಲಿ ಈ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದ್ದಾರೆ.