ಬೆಂಗಳೂರು: ಮನೆಯೊಂದರ ಎದುರು ಗುಂಪೊಂದು ದೊಡ್ಡ ಆಸ್ತಿಯ ಮೇಲೆ ಹಕ್ಕು ಸಾಧಿಸಿ, ಅದನ್ನು ಧ್ವಂಸಗೊಳಿಸಿ ನಿವಾಸಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ವೈಟ್ಫೀಲ್ಡ್ನ ಬೋರ್ವೆಲ್ ರಸ್ತೆಯಲ್ಲಿ ನಡೆದಿದೆ.
1990 ರಿಂದ ಇಲ್ಲಿ ನೆಲೆಸಿರುವ ಬಾಳಿಗಾ ಕುಟುಂಬ ತಮ್ಮ ವಿರುದ್ಧ ಬೆದರಿಕೆ, ಕಿರುಕುಳ ಮತ್ತು ಹಲ್ಲೆ ನಡೆಸಿದ್ದಕ್ಕಾಗಿ ದಾಳಿಕೋರರ ವಿರುದ್ಧ ವೈಟ್ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದೆ.
ಎಫ್ಐಆರ್ನಲ್ಲಿ ಉದ್ಯಮಿ ಜವಾಹರ್ ಗೋಪಾಲ್ ಮತ್ತು ಇತರ ಹಲವರ ಹೆಸರುಗಳಿವೆ. ತಮ್ಮ ಕುಟುಂಬವನ್ನು ಗುಂಪೊಂದು ಸುತ್ತುವರೆದು ಬೆದರಿಕೆ ಹಾಕಿದಾಗ ಕುಟುಂಬದ ಹಿರಿಯ ನಾಗರಿಕರೊಬ್ಬರು ತಮ್ಮ ಮನೆಯ ಹೊರಗೆ ಗುಂಪನ್ನು ಚದುರಿಸುವ ಪ್ರಯತ್ನದಲ್ಲಿ 12-ಬೋರ್ ರೈಫಲ್ನಿಂದ ಬುಲೆಟ್ ನ್ನು ಹಾರಿಸಿದ್ದಾರೆ.
ನಗರದಲ್ಲಿ ರೆಸ್ಟೋರೆಂಟ್ಗಳ ಸಮೂಹವನ್ನು ನಡೆಸುತ್ತಿರುವ ವಿಶಾಲ್ ಬಾಳಿಗಾ ಅವರು TNIE ಜೊತೆ ಮಾತನಾಡಿದ್ದು, “ನಮ್ಮ ಮತ್ತು ಜವಾಹರ್ ಅವರ ಕುಟುಂಬದ ನಡುವೆ ಹೈಕೋರ್ಟ್ನಲ್ಲಿ ಸಾಕಷ್ಟು ಸಮಯದಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಮುಂದಿನ ವಿಚಾರಣೆಯನ್ನು ಡಿಸೆಂಬರ್ 20 ಕ್ಕೆ ನಿಗದಿಪಡಿಸಲಾಗಿದೆ. ಅವರು ಸುಮಾರು 80 ಜನರೊಂದಿಗೆ ಏಕಾಏಕಿ ನಮ್ಮ ಮೇಲೆ ದಾಳಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
2 ಎಕರೆ ಮತ್ತು 6 ಗುಂಟಾ ಅಳತೆಯ ಆಸ್ತಿಯನ್ನು ಹಾಗೂ ನಿರ್ಮಿಸಿದ ಮನೆಯನ್ನು ಬಾಳಿಗಾ ಕುಟುಂಬ 1990 ರಲ್ಲಿ ಖರೀದಿಸಿತು, ನಂತರ ಆ ಕುಟುಂಬದವರು ಅಲ್ಲಿಗೆ ತೆರಳಿದರು. “ನನ್ನ ಅಜ್ಜಿಯ ಆಸ್ತಿಯ ಮೂಲ ದಾಖಲೆಗಳು ನಮ್ಮ ಬಳಿ ಇವೆ. ಆಕೆಯ ಸಾವಿನ ನಂತರ ಸೃಷ್ಟಿಸಿದ ಸೇಲ್ ಡೀಡ್ ನಲ್ಲಿ ಆಕೆಯ ಸಹಿಯನ್ನು ನಕಲಿ ಮಾಡಿದ್ದಾರೆ. ಆಕೆ ಸತ್ತು 8 ವರ್ಷಗಳ ನಂತರ ಅದನ್ನು ಸಿದ್ಧಗೊಳಿಸಲಾಗಿದೆ,'' ಎಂದು ಆರೋಪಿಸಿದರು. ವೈಟ್ಫೀಲ್ಡ್ ಠಾಣೆಯಲ್ಲಿ 2008ರಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ವಿಶಾಲ್ ಬಾಳಿಗ ಹೇಳಿದ್ದಾರೆ.
ಕುಟುಂಬದ ಚಿಕ್ಕಪ್ಪನ ಆಸ್ತಿಗೆ ಸಂಬಂಧಿಸಿದ ವಿಭಿನ್ನ ಪ್ರಕರಣದಲ್ಲಿ, ಪೊಲೀಸರು ಜವಾಹರ್ ಮತ್ತು ಇತರರ ವಿರುದ್ಧ 2017 ರಲ್ಲಿ ನಕಲಿ ದಾಖಲೆಗಳಿಗಾಗಿ ಆರೋಪಪಟ್ಟಿ ಸಲ್ಲಿಸಿದ್ದಾರೆ ಎಂದು ವಿಶಾಲ್ ಬಾಳಿಗ ಆರೋಪಿಸಿದರು.
ವಿಶಾಲ್ ಅವರನ್ನು ಮನೆಯ ಹೊರಗೆ ಕಾಲರ್ನಿಂದ ಎಳೆದು ಥಳಿಸಲಾಗಿದೆ. “ಬುಲ್ಡೋಜರ್ಗಳನ್ನು ಬಳಸಿ, ಅವರು ನಮ್ಮ ಕಾಂಪೌಂಡ್ ಗೋಡೆಯನ್ನು ಒಡೆದಿದ್ದಾರೆ, ನನ್ನ ಗೇಟ್ಗೆ ಹಾನಿ ಮಾಡಿದ್ದಾರೆ ಮತ್ತು ನಮ್ಮ 40 ವರ್ಷ ಹಳೆಯ ಮರಗಳು ಮತ್ತು ಸಸ್ಯಗಳನ್ನು ನಾಶಪಡಿಸಿದ್ದಾರೆ ಮತ್ತು ನಮ್ಮ ತೋಟದಿಂದ ಹಣ್ಣುಗಳನ್ನು ಕದ್ದಿದ್ದಾರೆ ಎಂದು ಕುಟುಂಬ ದೂರಿನಲ್ಲಿ ತಿಳಿಸಿದೆ.
ಆತ್ಮರಕ್ಷಣೆಗಾಗಿ, ಪರವಾನಗಿ ಪಡೆದ ಬಂದೂಕುಧಾರಿಯಾಗಿರುವ ನನ್ನ ವಯಸ್ಸಾದ ತಂದೆ ದಿನೇಶ್ ಬಾಳಿಗ ಅವರು ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು. ಗುಂಪು ಮಾತ್ರ ಅವನನ್ನು ಅಣಕಿಸಿ ನಕ್ಕಿತು. ಹಿರಿಯ ಅಧಿಕಾರಿಗಳು ಸೇರಿದಂತೆ ಪೊಲೀಸರು ಏನನ್ನೂ ಮಾಡಲಿಲ್ಲ,” ಎಂದು ವಿಶಾಲ್ ಆರೋಪಿಸಿದ್ದಾರೆ.