ಮಡಿಕೇರಿ: ಕುಶಾಲನಗರ ತಾಲೂಕಿನ ತೊರೆನೂರು ಗ್ರಾಮದ ನಿವಾಸಿಗಳು ಬುಧವಾರ ತಡರಾತ್ರಿ ಅಕ್ರಮ ಸುಣ್ಣದ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ, ಅಕ್ರಮ ಗಣಿಗಾರಿಕೆಯನ್ನು ತಡೆದಿದ್ದಾರೆ. ಅಕ್ರಮ ಗಣಿಗಾರಿಕೆಗೆ ಬಳಸುತ್ತಿದ್ದ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ನಮ್ಮ ಹಳ್ಳಿಯ ರಸ್ತೆಗಳಲ್ಲಿ ಜೆಸಿಬಿ ಸೇರಿದಂತೆ ಮಣ್ಣೆತ್ತುವ ಯಂತ್ರಗಳು ಹಳೆ ಕ್ವಾರಿ ಸ್ಥಳದಲ್ಲಿ ರಾರಾಜಿಸುತ್ತಿವೆ. ಮಧ್ಯರಾತ್ರಿಯಲ್ಲಿ ಮಣ್ಣು ಕೊರೆದು ಸುಣ್ಣದ ಕಲ್ಲು ತೆಗೆಯುತ್ತಾರೆ ಎಂದು ಗ್ರಾಮದ ರೈತ ಶಿವಕುಮಾರ್ ಆರೋಪಿಸಿದ್ದಾರೆ.
ಇದನ್ನು ಓದಿ: ಅಕ್ರಮ ಗಣಿಗಾರಿಕೆ ಕೇಸು: ಲೋಪ ತನಿಖೆಯಿಂದ ಇಬ್ಬರ ಖುಲಾಸೆ, ಇಬ್ಬರು ಪೊಲೀಸ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಕೋರ್ಟ್
ಸ್ಥಳದಲ್ಲಿ ಕ್ವಾರಿ ಚಟುವಟಿಕೆ ಹೆಚ್ಚಿದ ಪರಿಣಾಮ ಕೃಷಿ ಭೂಮಿಯಲ್ಲಿ ಬೃಹತ್ ಮಣ್ಣಿನ ರಂಧ್ರಗಳು ಉಂಟಾಗಿವೆ. ನಮ್ಮ ಕೃಷಿ ಭೂಮಿಯ ಮಣ್ಣು ದುರ್ಬಲಗೊಂಡಿದೆ ಮತ್ತು ರಂಧ್ರಗಳಿಂದಾಗಿ ಜಮೀನು ಸಾಗುವಳಿ ಮಾಡಲು ಸಾಧ್ಯವಾಗುತ್ತಿಲ್ಲ. ಇದಲ್ಲದೆ, ಕ್ವಾರಿ ಚಟುವಟಿಕೆಗೆ ಹೆಚ್ಚಿನ ಕೊರೆಯುವಿಕೆಯಿಂದಾಗಿ ಜಮೀನಿನಲ್ಲಿ ಸಡಿಲವಾದ ಮಣ್ಣು ಇರುವುದರಿಂದ ನಮ್ಮ ಜಾನುವಾರುಗಳು ಸಹ ಅಪಾಯದಲ್ಲಿವೆ ಎಂದು ಅವರು ವಿವರಿಸಿದ್ದಾರೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಮತ್ತು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನೆ ಆಗಿಲ್ಲ ಎಂದು ನಿವಾಸಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಬುಧವಾರ ತಡರಾತ್ರಿ ಗ್ರಾಮಸ್ಥರೇ ದಾಳಿ ನಡೆಸಿ ಗಣಿಗಾರಿಕೆ ನಿಲ್ಲಿಸಿದ್ದಾರೆ. ಪರಿಸ್ಥಿತಿಯಿಂದ ಎಚ್ಚೆತ್ತ ಕುಶಾಲನಗರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ, ಅಕ್ರಮ ಗಣಿಗಾರಿಕೆಗೆ ಬಳಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
“ನಾವು ಈ ಹಿಂದೆ ಸುಮಾರು ಎಂಟು ಬಾರಿ ಇದೇ ಸ್ಥಳದಲ್ಲಿ ಅಕ್ರಮ ಚಟುವಟಿಕೆಯನ್ನು ನಿಲ್ಲಿಸಿದ್ದೇವೆ. 8 ಲಕ್ಷದವರೆಗೆ ದಂಡ ವಿಧಿಸಿದ್ದೇವೆ. ಜಿಲ್ಲೆಯ ಹೊರಗಿನವರು ಈ ಅಕ್ರಮ ನಡೆಸುತ್ತಿದ್ದು, ಇದನ್ನು ತಡೆಯಲು ಹಲವು ಬಾರಿ ಪ್ರಯತ್ನಿಸಿದ್ದೇವೆ. ಈಗ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.