ಬೆಳಗಾವಿ: ಕೆರಗೋಡು ಬಳಿಕ ಇದೀಗ ಬೆಳಗಾವಿಯಲ್ಲಿ ಧ್ವಜ ದಂಗಲ್ ಶುರುವಾಗಿದೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ ಹುಬ್ಬಳ್ಳಿಯಲ್ಲಿ ಪಟ್ಟಣದ ಹನುಮಾನ ದೇವಸ್ಥಾನದ ಬಳಿ ಮತ್ತೆ ಭಗವಾ ಧ್ವಜ ಹಾರಿಸಲು ಸ್ಥಳೀಯ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹಮ್ಮಿಕೊಂಡಿದ್ದ ‘ಚಲೋ ಭಗವಾ ಧ್ವಜ ಅಭಿಯಾನ’ವನ್ನು ಪೊಲೀಸರು ಭಾನುವಾರ ತಡೆದಿದ್ದರಿಂದ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಮುಂಜಾಗ್ರತಾ ಕ್ರಮವಾಗಿ ಎಂ.ಕೆ.ಹುಬ್ಬಳ್ಳಿ ಪಟ್ಟಣದಾದ್ಯಂತ ನೂರಾರು ಪೊಲೀಸರನ್ನು ನಿಯೋಜಿಸಿದ್ದ ಪೊಲೀಸ್ ಇಲಾಖೆ, ಪೂರ್ವಾನುಮತಿ ಪಡೆದಿಲ್ಲ ಎಂಬ ಕಾರಣ ನೀಡಿ ಅಭಿಯಾನಕ್ಕೆ ನೀಡಿತು.
ಪಟ್ಟಣಕ್ಕೆ ಭೇಟಿ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ್, ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಬಾಗಲಕೋಟಿ ಅವರೊಂದಿಗೆ ಮಾತುಕತೆ ನಡೆಸಿದರು.
ಇದೇ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಿದರು. ಸಾರ್ವಜನಿಕರು ಕೂಡ ಪೊಲೀಸರೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಬೆಳಗಾವಿ: ಎಂಕೆ ಹುಬ್ಬಳ್ಳಿಯಲ್ಲಿ ಭಗವಾಧ್ವಜ ತೆರವಿಗೆ ಆಕ್ರೋಶ: ಪರಿಸ್ಥಿತಿ ಉದ್ವಿಗ್ನ, ಪೊಲೀಸರ ನಿಯೋಜನೆ
ಕಳೆದ ವಾರ ಪಟ್ಟಣದ ಗಾಂಧಿನಗರದ ಮಸೀದಿಯೊಂದರ ಬಳಿ ವಿದ್ಯುತ್ ತಂತಿ ತುಂಡಾಗಿ ಟಿಪ್ಪು ಸುಲ್ತಾನ್ ಭಾವಚಿತ್ರವಿದ್ದ ಧ್ವಜ ಕೆಳಗೆ ಬಿದ್ದಿತ್ತು. ಇದರ ಬೆನ್ನಲ್ಲೇ ಮರುದಿನ ಪಟ್ಟಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಪೊಲೀಸರು ಹಿಂದೂ ಹಾಗೂ ಮುಸ್ಲಿಂ ಮುಖಂಡರನ್ನು ಕರೆಸಿ ಊರಿನಲ್ಲಿ ಶಾಂತಿ ಮಾತುಕತೆ ನಡೆಸಿದ್ದರು.
ಘಟನೆಯ ನಂತರ, ಸ್ಥಳೀಯ ಪಟ್ಟಣ ಪಂಚಾಯಿತಿ ಸಿಬ್ಬಂದಿ ಪಟ್ಟಣದಲ್ಲಿ ಎಲ್ಲಾ ಕೇಸರಿ ಮತ್ತು ಹಸಿರು ಧ್ವಜಗಳನ್ನು ತೆಗೆದುಹಾಕಿದರು.
ಧ್ವಜವನ್ನು ಮರುಸ್ಥಾಪಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ನಾವು ಅವರ ಭಾವನೆಗಳನ್ನು ಗೌರವಿಸುತ್ತೇವೆ. ಆದರೆ, ಸ್ಥಳೀಯ ಪಟ್ಟಣ ಪಂಚಾಯಿತಿ ಹಾಗೂ ಸರಕಾರ ಕೈಗೊಂಡಿರುವ ಆದೇಶವನ್ನು ನಾವು ಪಾಲಿಸುತ್ತೇವೆ. ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಚೋದನಕಾರಿ ಸಂದೇಶಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ.