ಮಂಡ್ಯ: ಕೆರಗೋಡಿ ಹನುಮ ಧ್ಜಜ ವಿವಾದಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಸೇರಿದಂತೆ ಹಿಂದೂಪರ ಸಂಘಟನೆಗಳು ಶುಕ್ರವಾರ ಕರೆ ನೀಡಿದ್ದ ಮಂಡ್ಯ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಕೇವಲ ರ್ಯಾಲಿಗಷ್ಟೇ ಮಂಡ್ಯ ಬಂದ್ ಸೀಮಿತವಾಗಿತ್ತು. ಆದರೆ. ಕೆರೆಗೋಡು ಗ್ರಾಮ ಬಂದ್ ಸಂಪೂರ್ಣ ಯಶಸ್ವಿಯಾಗಿತ್ತು. ಬಂದ್ ಸಮಯದಲ್ಲಿ ಕೆರಗೋಡು ಗ್ರಾಮದಿಂದ ಮಂಡ್ಯ ನಗರದವರೆಗೆ ಬೈಕ್ ರ್ಯಾಲಿ ನಡೆಯಿತು.
ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬಂದ್ಗೆ ಸಹಕರಿಸುವಂತೆ ಸಾರ್ವಜನಿಕರು, ವರ್ತಕರಿಗೆ ಮನವಿ ಮಾಡಿದ್ದರು. ಆದರೆ, ಬಂದ್ಗೆ ವರ್ತಕರು ಅಸಹಕಾರ ವ್ಯಕ್ತಪಡಿಸಿದರು.
ಶಾಲಾ-ಕಾಲೇಜುಗಳು, ಚಿತ್ರಮಂದಿರಗಳು, ಅಂಗಡಿ- ಮುಂಗಟ್ಟುಗಳು ತೆರೆದಿದ್ದವು. ಜಿಲ್ಲಾ ವಾಣಿಜ್ಯ ಮಂಡಳಿಯು ಬಂದ್ ಬೆಂಬಲಿಸುವುದಿಲ್ಲ ಎಂದು ಹೇಳಿದ್ದ ಕಾರಣ ವರ್ತಕರು ಅಂಗಡಿಗಳನ್ನು ಬಂದ್ ಮಾಡದೆ ವ್ಯಾಪಾರ-ವಹಿವಾಟು ನಡೆಸಿದರು. ಆಟೋ, ಕಾರುಗಳು, ಬಸ್ಸುಗಳ ಸಂಚಾರ ಎಂದಿನಂತಿತ್ತು.
ಇದನ್ನೂ ಓದಿ: ಹನುಮಧ್ವಜ ತೆರವು ವಿವಾದ: ಹಿಂದೂಪರ ಸಂಘಟನೆಗಳಿಂದ ಬಂದ್ ಗೆ ಕರೆ, ಮಂಡ್ಯ, ಕೆರಗೋಡಿನಲ್ಲಿ ಭಾಗಶಃ ಚಟುವಟಿಕೆ ಸ್ಥಗಿತ
ಶ್ರೀರಾಮ ಭಜನಾ ಮಂಡಳಿ, ಭಜರಂಗದಳ, ವಿಶ್ವ ಹಿಂದೂ ಪರಿಷತ್ನ ನೂರಾರು ಮಂದಿ ಕಾರ್ಯಕರ್ತರು ಮಂಡ್ಯ ತಾಲೂಕು ಕೆರೆಗೋಡು ಗ್ರಾಮದಿಂದ ಮಂಡ್ಯ ನಗರದವರೆಗೆ ಬೃಹತ್ ಬೈಕ್ ರ್ಯಾಲಿ ನಡೆಸಿದರು.
ಕೆರಗೋಡಿನ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ಶುಕ್ರವಾರ ಬೆಳಗ್ಗೆ ಪೂಜೆ ಸಲ್ಲಿಸಿ ಹುಲಿವಾನ, ಹೊನಗಾನಹಳ್ಳಿ, ಕೊಮ್ಮೇರಹಳ್ಳಿ, ಸಾತನೂರು, ಚಿಕ್ಕಮಂಡ್ಯ, ಕಾಳಿಕಾಂಭ ದೇವಾಲಯದ ಮಾರ್ಗವಾಗಿ ಮಂಡ್ಯ ನಗರದ ರೈಲು ನಿಲ್ದಾಣ ಬಳಿಯ ಶ್ರೀಆಂಜನೇಯಸ್ವಾಮಿ ದೇವಾಲಯವರೆಗೆ ಬೈಕ್ ರ್ಯಾಲಿ ಆಗಮಿಸಿದರು.
ಬಳಿಕ ಜಿಲ್ಲಾಧಿಕಾರಿ ಕಚೇರಿ ಎದುರು ಜೈ ಶ್ರೀರಾಮ್ ಹಾಗೂ ಜೈ ಹನುಮಾನ್ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ರಾಮ ಭಜನೆಗಳ ಗೀತೆಗಳಿಗೆ ನೃತ್ಯವನ್ನೂ ಮಾಡಿದರು.