ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ 
ರಾಜ್ಯ

ಬಿಟ್ ಕಾಯಿನ್ ಹಗರಣ: ಪೊಲೀಸ್ ಸಿಬ್ಬಂದಿಗಳ ಮೇಲೆ ಕಾರು ಹತ್ತಿಸಲು ಯತ್ನ, ಡಿವೈಎಸ್'ಪಿ ಶ್ರೀಧರ್ ಪರಾರಿ!

Manjula VN

ಬೆಂಗಳೂರು: ಬಿಟ್ ಕಾಯಿನ್ ಹಗರಣದ ಆರೋಪಿ ಆಂತರಿಕ ಭದ್ರತಾ ವಿಭಾಗದ ಡಿವೈಎಸ್'ಪಿ ಶ್ರೀಧರ್.ಕೆ. ಪೂಜಾರಿ ಅವರನ್ನು ವಶಕ್ಕೆ ಪಡೆಯಲು ತೆರಳಿದ್ದ ಪೊಲೀಸ್ ಸಿಬ್ಬಂದಿಗಳ ಮೇಲೆಯೇ ಕಾರು ಹತ್ತಿಸಿ ಹತ್ಯೆಗೆ ಯತ್ನಿಸಿರುವ ಘಟನೆ ಬುಧವಾರ ನಡೆದಿದೆ.

ಸಿಐಡಿ ಘಟಕದ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಹಾಗೂ ಎಎಸ್ಐ ಭಾಸ್ಕರ್ ನೀಡಿದ ದೂರಿನ ಮೇರೆಗೆ ಡಿವೈಎಸ್'ಪಿ ಶ್ರೀಧರ್ ಕೆ.ಪೂಜಾರಿ ವಿರುದ್ಧ ನಿಂದನೆ, ಜೀವ ಬೆದರಿಕೆ, ಕೊಲೆ ಯತ್ನ ಪ್ರಕರ ದಾಖಲಾಗಿದೆ ಎಂದು ತಿಳಿದುಬಂದಿದೆ.

ಸಿಐಡಿ ಡಿವೈಎಸ್'ಪಿ ಬಾಲರಾಜು ಅವರ ಸೂಚನೆ ಮೇರೆಗೆ ಎಸ್ಐಟಿ ತಂಡದ ಇನ್ಸ್ ಪೆಕ್ಟರ್ ಅನಿಲ್ ಕುಮಾರ್ ಮತ್ತು ಎಎಸ್ಐ ಭಾಸ್ಕರ್ ಅವರು ಪ್ರಕರಣದ ಆರೋಪಿ ಶ್ರೀಧರ್ ಅವರನ್ನು ವಶಕ್ಕೆ ಪಡೆಯಲು ತೆಳಿದ್ದರು. ಅದರಂತೆ ಮಂಗಳವಾರ ಮಧ್ಯಾಹ್ನ ಗರದ ಸೆಷನ್ಸ್ ಕೋರ್ಟ್ ಸಮೀಪದ ಮೆಟ್ರೋ ನಿಲ್ದಾಣದ ಬಳಿ ಶ್ರೀಧರ್ ಇರುವ ಬಗ್ಗ ಮಾಹಿತಿ ಸಂಗ್ರಹಿಸಿ ದ್ವಿಚಕ್ರ ವಾಹನದಲ್ಲಿ ಸ್ಥಳಕ್ಕೆ ತೆರಳಿದ್ದಾರೆ.

ಈ ವೇಳೆ ಕಾರೊಂದರಲ್ಲಿ ಕುಳಿತಿದ್ದ ಶ್ರೀಧರ್ ಅವರುಸ ವಕೀಲರೊಂದಿಗೆ ಕುಳಿತು ಮಾತನಾಡುತ್ತಿದ್ದರು. ಬಳಿಕ ಹತ್ತಿರ ಹೋದ ಅನಿಲ್ ಕುಮಾರ್ ಅವರು ತಾವು ಬಂದಿರುವ ವಿಚಾರವನ್ನು ತಿಳಿಸಿ, ತಮ್ಮೊಂದಿಗೆ ಬರುವಂತೆ ತಿಳಿಸಿದ್ದಾರೆ.

ಇದರಿಂದ ಕೆಂಡಾಮಂಡಲಗೊಂಡ ಶ್ರೀಧರ್ ಅವರು ಅನಿಲ್ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಬಳಿಕ ದಿಢೀರನೇ ಕಾರ್ ಸ್ಟಾರ್ಟ್ ಮಾಡಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಈ ವೇಳೆ ದ್ವಿಚಕ್ರ ವಾಹನದಲ್ಲಿದ್ದ ಭಾಸ್ಕರ್ ರಸ್ತೆಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಬಳಿಕ ಅನಿಲ್ ಹಾಗೂ ಭಾಸ್ಕರ್ ಇಬ್ಬರು ಮತ್ತೆ ದ್ವಿಚಕ್ರ ವಾಹನದಲ್ಲಿ ಶ್ರೀಧರ್ ಅವರ ಕಾರನ್ನು ಹಿಂಬಾಲಿಸಿದ್ದಾರೆ. ಕಾರು ಕಾಫಿ ಬೋರ್ಡ್ ಸಿಗ್ನಲ್ ಬಳಿ ನಿಲ್ಲುತ್ತಿದ್ದಂತೆ. ಕಾರಿನಲ್ಲಿದ್ದ ಶ್ರೀಧರ್ ಅವರನ್ನು ಕಿಟಕಿ ಮೂಲಕ ಸಂಪರ್ಕಿಸಿ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ. ಈ ವೇಳೆ ಶ್ರೀಧರ್ ಅವರನ್ನು ಬೆದರಿಕೆ ಹಾಕಿದ್ದು, ಭಾಸ್ಕರ್ ಅವರ ತಲೆ ಕಾರಿನ ಕಿಟಕಿಯೊಳಗಿದ್ದರೂ ಕಾರನ್ನು ವೇಗವಾಗಿ ಚಾಲನೆ ಮಾಡಿ ಪರಾರಿಯಾಗಿದ್ದಾರೆ. ಪರಿಣಾಮ ಭಾಸ್ಕರ್ ಅವರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಘಟನೆ ಬಳಿಕ ಪೊಲೀಸರು ಡಿವೈಎಸ್‌ಪಿ ವಿರುದ್ಧ ಐಪಿಸಿ 307 (ಕೊಲೆ ಯತ್ನ), 332 (ಸಾರ್ವಜನಿಕ ಸೇವಕರನ್ನು ಕರ್ತವ್ಯದಿಂದ ಹಿಮ್ಮೆಟ್ಟಿಸಲು ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದು), 353 (ಸಾರ್ವಜನಿಕ ನೌಕರನನ್ನು ಕರ್ತವ್ಯ ನಿರ್ವಹಣೆಯಿಂದ ತಡೆಯಲು ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ), 506 (ಅಪರಾಧ ಬೆದರಿಕೆ) ಮತ್ತು 504 (ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

SCROLL FOR NEXT