ರಾಜ್ಯ

ಬಿಎಂಟಿಸಿ ಬಸ್​ಗೆ ಮತ್ತೊಂದು ಬಲಿ: ಇಂಜಿನಿಯರಿಂಗ್ ಪದವೀಧರ ಯುವಕ ಸಾವು

Manjula VN

ಬೆಂಗಳೂರು: ಬಿಎಂಟಿಸಿ ಬಸ್'ನ ಹಿಂಬದಿ ಚಕ್ರ ಹರಿದು ಇಂಜಿನಿಯರ್ ಪದವೀಧರ ಯುವಕ ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಕೆಂಗೇರಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ.

ತಿಪಟೂರು ಮೂಲದ ತೇಜಸ್ (22) ಮೃತ ಯುವಕ. ಸೋಮವಾರ ಮಧ್ಯಾಹ್ನ 12.25ರ ಸುಮಾರಿಗೆ ಮೈಸೂರು ರಸ್ತೆ ಕಡೆಯಿಂದ ಉತ್ತರಹಳ್ಳಿ ಕಡೆಗೆ ಬರುವಾಗ ಮಾರ್ಗ ಮಧ್ಯೆ ಮಂತ್ರಿ ಅಲೈನ್ ಅಪಾರ್ಟ್ ಮೆಂಟ್ ಪ್ರವೇಶದ ದ್ವಾರದ ಬಳಿ ಈ ಅಪಘಾತ ಸಂಭವಿಸಿದೆ.

ಮೃತ ಸವಾರ ತೇಜರ್ ಕೆಂಗೇರಿ ಪಿಜಿ ವೊಂದರಲ್ಲಿ ಉಳಿದುಕೊಂಡು ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದ. ಮಧ್ಯಾಹ್ನ ಸ್ನೇಹಿತನನ್ನು ಭೇಟಿಯಾಗುವ ಉದ್ದೇಶದಿಂದ ದ್ವಿಚಕ್ರ ವಾಹನದಲ್ಲಿ ಉತ್ತರಹಳ್ಳಿ ಕಡೆಗೆ ಹೋಗುತ್ತಿದ್ದ. ಇದೇ ಸಮಯಕ್ಕೆ ಬಿಎಂಟಿಸಿ ಬಸ್ ವೊಂದು ಉತ್ತರಹಳ್ಳಿ ಕಡೆಗೆ ಹೋಗುತ್ತಿತ್ತು. ಹಿಂದಿನಿಂದ ವೇಗವಾಗಿ ಬಂದ ವಾಹನ ಸವಾರ ತೇಜಸ್, ಬಸ್ಸನ್ನು ಹಿಂದಿಕ್ಕಲು ಮುಂದಾದಾಗ ದ್ವಿಚಕ್ರ ವಾಹನಕ್ಕೆ ಬಸ್ ತಾಕಿದೆ. ಈ ವೇಳೆ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಾಗ ತಲೆ ಮೇಲೆಯೇ ಬಸ್'ನ ಬಲಭಾಗದ ಹಿಂಬದಿ ಚಕ್ರ ಉರುಳಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನೆಯ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಬಿಎಂಟಿಸಿ ಚಾಲಕನನ್ನು ವಶಕ್ಕೆ ಪಡೆದಿದ್ದು, ಕೆಂಗೇರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವಕ ಸಾವು ಬೆನ್ನಲ್ಲೇ ಉತ್ತರಹಳ್ಳಿಯ ನಿವಾಸಿಗಳು ಬಿಬಿಎಂಪಿ ವಿರುದ್ಧ ಪ್ರತಿಭಟನೆ ನಡೆಸಿದರು. ರಸ್ತೆಗಳ ಹೀನಾಯ ಸ್ಥಿತಿ ಕುರಿತು ಆಕ್ರೋಶ ಹೊರಹಾಕಿದರು. ಘಟನೆ ಬಳಿಕ ಕೆಂಗೇರಿ ಸಂಚಾರ ಪೊಲೀಸರು ಬಸ್ ಚಾಲನನ್ನು ಬಂಧನಕ್ಕೊಳಪಡಿಸಿದರು.

ಜ.6ರಂದು ಮಾರತ್ತಹಳ್ಳಿಯ ವರ್ತೂರು ಮುಖ್ಯರಸ್ತೆಯಲ್ಲಿ ಬಿಎಂಟಿಸಿ ವೋಲ್ವೋ ಬಸ್‌. ಬೈಕ್​ಗೆ ಡಿಕ್ಕಿಯಾಗಿ ಹೊಡೆದಿತ್ತು.

ಕುಂದಲಹಳ್ಳಿ ಜಂಕ್ಷನ್ ಕಡೆಯಿಂದ ಬೆಳ್ಳಂದೂರಿಗೆ ಬೈಕ್‌ ಸವಾರ ಎಳಂಗೋವನ್ ಸೆಂಕತ್ತವಲ್ (43) ತೆರಳುತಿದ್ದರು. ಅದೇ ಮಾರ್ಗದಲ್ಲಿ ಬಿಎಂಟಿಸಿ ವೋಲ್ವೋ ಬಸ್ ಬಂದಿದ್ದು, ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಕೆಳಗೆ ಬಿದ್ದ ಸವಾರ ಗಂಭೀರ ಗಾಯಗೊಂಡಿದ್ದಾರೆ. ಅಪಘಾತದಿಂದ ತಲೆ ಹಾಗೂ ಮುಖದ ಭಾಗಕ್ಕೆ ಬಲವಾದ ಗಾಯವಾಗಿದ್ದು, ಕೂಡಲೇ ಸ್ಥಳೀಯರು ಗಾಯಾಳನ್ನು ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದರು. ಆದರೆ ಆಸ್ಪತ್ರೆಗೆ ಸೇರುವ ಮೊದಲೇ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದರು,

SCROLL FOR NEXT